ಹೆಚ್ಚುತ್ತಿರುವ ಕೊರೋನಾ ಪ್ರಕರಣ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

By Kannadaprabha NewsFirst Published Apr 4, 2020, 10:32 AM IST
Highlights

ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳು| ಸೋಂಕಿತರು ಹಾಗೂ ಶಂಕೆಯಲ್ಲಿರುವವರನ್ನು ಇಲ್ಲಿನ ಕೊರೋನಾ ಆಸ್ಪತ್ರೆಗೆ ದಾಖಲು| ಸಿರುಗುಪ್ಪ ಹಾಗೂ ಹೊಸಪೇಟೆ ನಗರದಲ್ಲಿ ಹೆಚ್ಚಿನ ಆದ್ಯತೆ| ಸೋಂಕು ಪೀಡಿತ ಗ್ರಾಮದಲ್ಲಿ ಮೊಕ್ಕಾಂ ಹೂಡಿದ ಪೊಲೀಸರು|

ಬಳ್ಳಾರಿ(ಏ.04): ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳು ಜಿಲ್ಲೆಯ ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಈಗಾಗಲೇ ಗಂಟಲು ದ್ರಾವಣ ಪಡೆದಿರುವ 14 ಜನರ ಆರೋಗ್ಯದ ವೈದ್ಯಕೀಯ ತಪಾಸಣೆ ವರದಿ ಬರಬೇಕಾಗಿದ್ದು ಇನ್ನೆಷ್ಟು ಜನರಿಗೆ ವೈರಸ್‌ ಸೋಂಕು ಹರಡಿದೆಯೋ ಎಂಬ ಗುಮಾನಿ ಮೂಡಿದೆ.

"

ಸೋಂಕಿತರು ಹಾಗೂ ಶಂಕೆಯಲ್ಲಿರುವವರನ್ನು ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಸರ್ಕಾರಿ ವಸತಿ ಶಾಲೆಗಳಲ್ಲಿ ನಿಗಾ ವಹಿಸಲಾಗುತ್ತಿದೆ. ಸೋಂಕು ಪತ್ತೆಯಾಗಿರುವ ಸಿರುಗುಪ್ಪ ಹಾಗೂ ಹೊಸಪೇಟೆ ನಗರದಲ್ಲಿ ಹೆಚ್ಚಿನ ಆದ್ಯತೆ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೊರೋನಾ ಭೀತಿ: ಹೊಸಪೇಟೆ 5 ಕಿಮೀ ವ್ಯಾಪ್ತಿಯಲ್ಲಿ ವಾಹನ ಓಡಾಟ ನಿರ್ಬಂಧ

ಸಿರುಗುಪ್ಪ ತಾಲೂಕಿನ ಎಲ್ಲ ಹಳ್ಳಿಗಳಿಗೆ ತೆರಳುತ್ತಿರುವ ಪೊಲೀಸ್‌ ಹಾಗೂ ವೈದ್ಯಕೀಯ ಸಿಬ್ಬಂದಿ ಜನರು ಹೊರಬರದಂತೆ ಸೂಚನೆ ನೀಡುತ್ತಿದ್ದು, ಕರಪತ್ರಗಳನ್ನು ಹಂಚುತ್ತಿದ್ದಾರೆ. ಸೋಂಕು ಪೀಡಿತ ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು ಜನರು ಹೊರಗಡೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಹೊಸಪೇಟೆಯಲ್ಲಿ ಎಂದಿನಂತೆ ಮನೆಮನೆ ಆರೋಗ್ಯ ಪರೀಕ್ಷೆ ನಡೆದಿದೆ. ಎಲ್ಲ ವಾರ್ಡ್‌ಗಳಲ್ಲಿ ಔಷಧಿ ಸಿಂಪಡಣೆ ಕಾರ್ಯ ನಡೆದಿದ್ದು ಯಾರೂ ಹೊರಗಡೆ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲೂ ತರಕಾರಿ ಹಾಗೂ ದಿನಸಿ ಖರೀದಿಗಾಗಿ ಜನರು ಮುಗಿ ಬೀಳುತ್ತಿಲ್ಲ. ಇದು ನೆಮ್ಮದಿಯ ಸಂಗತಿಯಾಗಿದೆ. ಬಹುತೇಕ ತಾಲೂಕುಗಳಲ್ಲಿ ಮನೆ ಮನೆಗೆ ಕಾಯಿಪಲ್ಯೆ ವಿತರಣೆ ಕಾರ್ಯ ಶುರುವಾಗಿದೆ.

ಜನಸ್ಪಂದನೆ ಉತ್ತಮ:

ಜಿಲ್ಲಾ ಕೇಂದ್ರದಲ್ಲಿ ಲಾಕ್‌ಡೌನ್‌ಗೆ ಜನರು ಸ್ಪಂದಿಸುತ್ತಿದ್ದಾರೆ. ಬೆಳಗ್ಗೆ ಮಾತ್ರ ಜನರು ಹೊರಗಡೆ ಕಂಡು ಬರುತ್ತಿದ್ದು, ಕ್ರಮೇಣ ಜನರ ಓಡಾಟ ಇಳಿಮುಖವಾಗುತ್ತಿದೆ. ಪೊಲೀಸ್‌ ಕಿರಿಕಿರಿಯಿಂದ ಸೇವೆಯಿಂದ ದೂರ ಉಳಿದಿದ್ದ ರೆಡ್‌ಕ್ರಾಸ್‌ ಸಂಸ್ಥೆಯ ಸ್ವಯಂ ಸೇವಕರು ಶುಕ್ರವಾರ ಸೇವೆ ಆರಂಭಿಸಿದರು. ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಬುಧವಾರದಿಂದ ಸೇವೆಯನ್ನು ಸ್ಥಗಿತಗೊಳಿಸಿದ್ದರು. ನಗರದ ನಿರಾಶ್ರಿತರು, ಬಡವರು ಹಾಗೂ ಆಸ್ಪತ್ರೆಗಳ ರೋಗಿಗಳ ಹಿಂದೆ ಬಂದಿರುವವರಿಗೆ ನಗರದ ದಾನಿಗಳು ನೀಡಿದ ಆಹಾರ ಪೊಟ್ಟಣವನ್ನು ವಿತರಣೆ ಮಾಡುತ್ತಿದ್ದರು.
 

click me!