ಕೋವಿಡ್‌-19 ರೂಂಗೆ ತೆರಳದ ಆರೋಗ್ಯ ಸಚಿವ ಶ್ರೀರಾಮುಲು

By Kannadaprabha NewsFirst Published Apr 2, 2020, 1:17 PM IST
Highlights

ಬೇಡಿಕೆ ಉಪಕರಣಗಳ ಪೂರೈಕೆಗೆ ಕ್ರಮ| ಕೋವಿಡ್‌-19 ನಿಯಂತ್ರಣ ಕುರಿತು ಕೈಗೊಂಡ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಸಚಿವ ಶ್ರೀರಾಮುಲು ಭರವಸೆ|ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ 14 ಫೀವರ್‌ ಕ್ಲಿನಿಕ್‌ ತೆರೆಯಲಾಗಿದ್ದು, ತಾತ್ಕಾಲಿಕ ಎಸ್‌ಐಸಿಗಳನ್ನು ತೆರೆಯಲು 3 ಹಾಸ್ಟೆಲ್‌ಗಳನ್ನು ಗುರುತಿಸಲಾಗಿದೆ|

ಬಾಗಲಕೋಟೆ(ಏ.02): ಜಿಲ್ಲೆಗೆ ಕೋವಿಡ್‌-19ಗೆ ಸಂಬಂಧಿಸಿದಂತೆ ಅಗತ್ಯವಿರುವ ಉಪಕರಣಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. 

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಕೋವಿಡ್‌-19 ನಿಯಂತ್ರಣ ಕುರಿತು ಕೈಗೊಂಡ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಪಾಸಿಟಿವ್‌ ಪ್ರಕರಣಗಳು ಪತ್ತೆಯಾದಲ್ಲಿ ಬೇಕಾದ ಎಲ್ಲ ಅಗತ್ಯ ವೈದ್ಯಕೀಯ ಸೌಲಭ್ಯ, ವೈದ್ಯಕೀಯ ಉಪಕರಣಗಳು ಹಾಗೂ ವೈದ್ಯರ ತಂಡ ಸೇರಿದಂತೆ ಮುಂಜಾಗ್ರತಾ ಕ್ರಮಗಳ ತಯಾರಿಯಲ್ಲಿ ಇಟ್ಟುಕೊಳ್ಳಬೇಕು. ಕೊರತೆ ಇರುವ ಉಪಕರಣಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದರು.

'ಜೀವದ ಹಂಗು ತೊರೆದು ಕೊರೋನಾ ವಿರುದ್ಧ ವೈದ್ಯರ ಹೋರಾಟ: ಡಾಕ್ಟರ್ಸ್‌ಗೆ ಶೀಘ್ರ ಸುರಕ್ಷತಾ ಕಿಟ್‌'

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಜಿಲ್ಲೆಗೆ ಬೇಕಾದ ಅಗತ್ಯ ಉಪಕರಣಗಳ ಬಗ್ಗೆ ಈಗಾಗಲೇ ಬೇಡಿ ಪಟ್ಟಿಯನ್ನು ಕಳುಹಿಸಿಕೊಡಲಾಗಿದ್ದು, ತುರ್ತಾಗಿ ಕಳುಹಿಸುವ ವ್ಯವಸ್ಥೆ ಮಾಡಬೇಕು. ಸ್ಯಾಂಪಲ್‌ಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗುತ್ತಿದೆ. ಸಾಧ್ಯವಾದಷ್ಟುಜಿಲ್ಲೆಗೊಂದು ಹೈಟೆಕ್‌ ಲ್ಯಾಬ್‌ ಪ್ರಾರಂಭಿಸಬೇಕು. ಉತ್ತರ ಕರ್ನಾಟಕದ ಭಾಗದಲ್ಲಿ ಕೋವಿಡ್‌-19 ಪರೀಕ್ಷೆಗೆ ಒಂದು ಲ್ಯಾಬ್‌ ಇರುವುದಿಲ್ಲ. ಈಗಾಗಲೇ ಹುಬ್ಬಳ್ಳಿ ಮತ್ತು ಬೆಳಗಾವಿಗೆ ಲ್ಯಾಬ್‌ ತೆರೆಯುವುದಾಗಿ ತಿಳಿಸಿದರೂ ಇನ್ನು ಪ್ರಾರಂಭವಾಗಿರುವುದಿಲ್ಲ. ಶೀಘ್ರದಲ್ಲಿಯೇ ಪ್ರಾರಂಭಿಸಲು ತಿಳಿಸಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಬೀಳಗಿ ಶಾಸಕ ಮುರುಗೇಶ ನಿರಾಣಿ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್‌ ರೂಂಗೆ ತೆರಳದ ಆರೋಗ್ಯ ಸಚಿವ 

ನಗರದ ಜಿಲ್ಲಾಸ್ಪತ್ರೆಗೆ ಬುಧವಾರ ಶಾಸಕ, ಸಂಸದರೊಂದಿಗೆ ಭೇಟಿ ನೀಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಜಿಲ್ಲಾಸ್ಪತ್ರೆಯಲ್ಲಿರುವ ಐಸೋಲೇಷನ್‌ಲ್ಲಿ ದಾಖಲಾಗಿರುವ ಹಾಗೂ ಕೋವಿಡ್‌ ರೂಂ ಬಳಿ ತೆರಳಲು ಹಿಂದೇ    ಉ ಹಾಕಿದ್ದಾರೆ. ಕೇವಲ ಆಸ್ಪತ್ರೆಯಲ್ಲಿರುವ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು ವಿಜಯಪುರಕ್ಕೆ ಸಚಿವರು ತೆರಳಿದ್ದಾರೆ. 

ವಸತಿ ನಿಲಯಗಳಲ್ಲಿ 1700 ಜನರಿಗೆ ಹೋಮ್‌ ಕ್ವಾರಂಟೈನ್‌

ಜಿಲ್ಲೆಗೆ ಒಟ್ಟು 166 ಜನ ವಿದೇಶದಿಂದ ಬಂದಿದ್ದು, ಅವರನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಜಿಲ್ಲೆಯಿಂದ ಕಳುಹಿಸಲಾದ 11 ಮಾದರಿಗಳು ನೆಗೆಟಿವ್‌ ಬಂದಿವೆ. ಮಂಗಳವಾರ ರಾತ್ರಿ ಒಂದು ಸ್ಯಾಂಪಲ್‌ ಕಳುಹಿಸಲಾಗಿದ್ದು, ವರದಿ ಬರಬೇಕಾಗಿದೆ. ಬೇರೆ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ ಒಟ್ಟು 1700 ಜನರನ್ನು ವಸತಿ ನಿಲಯಗಳಲ್ಲಿ ಹೋಮ್‌ ಕ್ವಾರಂಟೈನಲ್ಲಿ ಇಟ್ಟು ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಹೇಳಿದರು.

ಕೋವಿಡ್‌-19 ನಿಯಂತ್ರಣ ಕುರಿತು ಕೈಗೊಂಡ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ನವದೆಹಲಿಯಲ್ಲಿ ನಿಜಾಮುದ್ದಿನ ತಬ್ಬಲಿಕ್‌ ಜಮಾತಗೆ ಜಿಲ್ಲೆಯ 21 ಜನ ಹೋಗಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರಲ್ಲಿ ಈಗಾಗಲೇ ಒಬ್ಬರು ಜಿಲ್ಲೆಗೆ ಆಗಮಿಸಿದ ವ್ಯಕ್ತಿಯು ಆರೋಗ್ಯವಾಗಿದ್ದು, ಸ್ಯಾಂಪಲ್‌ ಕಳುಹಿಸಿ ಜಿಲ್ಲಾ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. ಅವರ ಜೊತೆಯಲ್ಲಿ ಆಗಮಿಸಿದ 3 ವ್ಯಕ್ತಿಗಳ ಸ್ಯಾಂಪಲ್‌ ಸಹ ಕಳುಹಿಸಿ ಅವರನ್ನು ಹೊಮ್‌ ಕ್ವಾರಂಟೈನಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ 14 ಫೀವರ್‌ ಕ್ಲಿನಿಕ್‌ ತೆರೆಯಲಾಗಿದ್ದು, ತಾತ್ಕಾಲಿಕ ಎಸ್‌ಐಸಿಗಳನ್ನು ತೆರೆಯಲು 3 ಹಾಸ್ಟೆಲ್‌ಗಳನ್ನು ಗುರುತಿಸಲಾಗಿದೆ. ಅಗತ್ಯವಿರುವ ವೆಂಟಿಲೇಟರ್‌ಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ 5, ಆಯಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ 2 ಹಾಗೂ ಖಾಸಗಿ ಆಸ್ಪತ್ರೆ ಸೇರಿ ಒಟ್ಟು 85 ವೆಂಟಿಲೇಟರ್‌ ಸಿದ್ಧಪಡಿಸಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆ ಹಾಗೂ ಕುಮಾರೇಶ್ವರ ಸೇರಿ 350 ಹಾಸಿಗೆಯ ಕೋವಿಡ್‌ ಆಸ್ಪತ್ರೆಗೆ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್‌.ದೇಸಾಯಿ ಮಾತನಾಡಿ, ಚಿಕಿತ್ಸೆ ಕೈಗೊಳ್ಳುವ ವೈದ್ಯರು ಹಾಗೂ ಸಿಬ್ಬಂದಿಗೆ 2300 ಎನ್‌-95 ಮಾಸ್ಕ್‌ ಹಾಗೂ 1600 ಸಾಮಾನ್ಯ ಮಾಸ್ಕ್‌ ಹಾಗೂ ಹ್ಯಾಂಡ್‌ ಗ್ಲೋಸ್‌ಗಳು ಲಭ್ಯವಿರುವುದಾಗಿ ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಮಾತನಾಡಿ, ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕುಮಾರೇಶ್ವ ವೈದ್ಯಕೀಯ ಮಹಾವಿದ್ಯಾಲಯದಿಂದ ವೈದ್ಯರನ್ನು ತೆಗೆದುಕೊಳ್ಳಲಾಗಿ ಒಟ್ಟು 200 ಜನರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
 

click me!