ಕೊರೋನಾ ಭೀತಿ: ವಿಜಯಪುರ ಜಿಲ್ಲೆಯ 57 ಜನರ ವರದಿ ನೆಗೆಟಿವ್‌

By Kannadaprabha NewsFirst Published Apr 8, 2020, 2:23 PM IST
Highlights

59 ಜನರ ಗಂಟಲು ದ್ರವ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ 57 ಜನರ ವರದಿ ನೆಗೆಟಿವ್‌ ಬಂದಿದೆ| ಸಾರ್ವ​ಜ​ನಿ​ಕರು ಆತಂಕಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ| ರಾಜ್ಯ ಸರ್ಕಾರದ ಆದೇಶದಂತೆ ಬೇಕರಿ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಪಾರ್ಸಲ್‌ ಮೂಲಕ ಮಾತ್ರ ಸಾರ್ವಜನಿಕರು ಪಡೆದುಕೊಳ್ಳಬಹುದು|

ವಿಜಯಪುರ(ಏ.08): ವಿದೇಶ ಸೇರಿದಂತೆ ಇತರ ರಾಜ್ಯ, ಜಿಲ್ಲೆಗಳಿಂದ ಇದುವರೆಗೆ ಜಿಲ್ಲೆಗೆ 418 ಜನರು ಆಗಮಿಸಿರುವ ಬಗ್ಗೆ ವರದಿಯಾಗಿದ್ದು, ಈವರೆಗೆ 59 ಜನರ ಗಂಟಲು ದ್ರವ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ 57 ಜನರ ವರದಿ ನೆಗೆಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, 216 ಜನರು 28 ದಿನಗಳ ಹೋಂ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ್ದು, 172 ಜನರು 15ರಿಂದ 28 ದಿನಗಳ ರಿಪೋರ್ಟಿಂಗ್‌ ಅವಧಿಯಲ್ಲಿದ್ದಾರೆ. ಸದ್ಯ ಒಟ್ಟು 30 ಜನರು ಹೋಂ ಕ್ವಾರಂಟೈನ್‌ದಲ್ಲಿದ್ದು, 9 ಜನರು ಆಸ್ಪತ್ರೆಯ ಐಸೋಲೇಶನ್‌ದಲ್ಲಿದ್ದಾರೆ. ಇನ್ನು 2 ವೈದ್ಯಕೀಯ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶದಂತೆ ಇಂದಿನಿಂದ ಬೇಕರಿ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಪಾರ್ಸಲ್‌ ಮೂಲಕ ಮಾತ್ರ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದರು.

ಕಲ್ಲಂಗಡಿ ತಿಂದ್ರೆ ಮಹಾಮಾರಿ ಕೊರೋನಾ ವೈರಸ್ ಬರೋದಿಲ್ಲ: ಬಿ. ಸಿ. ಪಾಟೀಲ

ತರಕಾರಿ ಮತ್ತು ಹಣ್ಣುಗಳ ಮಾರಾಟದ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದ್ದು, ಜಿಲ್ಲಾಡಳಿತದಿಂದ ಇನ್ನೂ ಹೆಚ್ಚಿನ ಕಠಿಣ ಕ್ರಮಗಳನ್ನು ಇನ್ಮುಂದೆ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ಅವರು ಜಿಲ್ಲೆಗೆ ಜನವರಿಯಿಂದ ಮಾಚ್‌ರ್‍ವರೆಗೆ, ಇತರೆ ಜಿಲ್ಲೆ, ರಾಜ್ಯಗಳಿಂದ ತಬ್ಲಿಘಿ ಜಮಾತ್‌ಗೆ ಸಂಬಂಧಿಸಿದ 375 ಜನರು ಬಂದಿರುವ ಬಗ್ಗೆ ಗುರುತಿಸಲಾಗಿದ್ದು, ಇನ್ನೂ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಜಲನಗರದಲ್ಲಿ ಅನಧಿಕೃತವಾಗಿ ಡುಪ್ಲಿಕೇಟ್‌ ಪಾಸ್‌ಗಳನ್ನು ಸರಬರಾಜು ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಂತಹ ಚಟುವಟಿಕೆಗಳ ಬಗ್ಗೆ ಪೊಲೀಸ್‌ ಇಲಾಖೆಯ ಗಮನಕ್ಕೆ ತರುವಂತೆ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಇದ್ದರು.
 

click me!