31ರವರೆಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷಿದ್ಧ

By Kannadaprabha NewsFirst Published Mar 24, 2020, 7:52 AM IST
Highlights

ರಾಜ್ಯದ ಎಲ್ಲ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದ ಜನರು ಸಾಮೂಹಿಕವಾಗಿ ಸೇರಿ ಪ್ರಾರ್ಥನೆ ಸಲ್ಲಿಸುವಂತಹ ಪ್ರಕ್ರಿಯೆ| 31ರವರೆಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷಿದ್ಧ

 ಬೆಂಗಳೂರು(ಮಾ.24): ರಾಜ್ಯದ ಎಲ್ಲ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದ ಜನರು ಸಾಮೂಹಿಕವಾಗಿ ಸೇರಿ ಪ್ರಾರ್ಥನೆ ಸಲ್ಲಿಸುವಂತಹ ಪ್ರಕ್ರಿಯೆಗಳನ್ನು (ಶುಕ್ರವಾರದ ಜಮ್ಮಾ ಸೇರಿದಂತೆ) ಸರ್ಕಾರ ಮಾ.31ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಈ ಸಂಬಂಧ ಸೋಮವಾರ ಆದೇಶ ಹೊರಡಿಸಿರುವ ಸಮಾಜ ಕಲ್ಯಾಣ, ಹಜ್‌ ಮತ್ತು ವಕ್ಫ್ ಇಲಾಖೆಯು ಎಲ್ಲಾ ಜಿಲ್ಲಾ ವಕ್ಫ್ ಅಧಿಕಾರಿಗಳು ಸ್ಥಳೀಯ ಜಿಲ್ಲಾಡಳಿತಗಳ ಸಹಾಯ ಪಡೆದು ಆದೇಶ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ವಕ್ಫ್ ಬೋರ್ಡ್‌ ಅಧ್ಯಕ್ಷರು, ಮುಸ್ಲಿಂ ಸಮುದಾಯದ ಧರ್ಮಗುರುಗಳು, ಮುಖಂಡರು ಹಾಗೂ ಮಂಗಳೂರಿನ ಕಾಜಿಗಳೊಂದಿಗೆ ಸಭೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದ್ದು, ಅವರು ಮಸೀದಿಗಳಿಗೆ ಬರುವ ಬದಲು ಮಾ.31ರವರೆಗೆ ತಮ್ಮ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಲು ಸೂಚನೆ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಸರ್ಕಾರದ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಆದೇಶದಲ್ಲಿ ತಿಳಿಸಿದ್ದಾರೆ.

ಮಧ್ಯಪೂರ್ವ ದೇಶಗಳಲ್ಲಿ ವಿವಿಧ ಉದ್ಯೋಗಗಳಲ್ಲಿರುವ ಹಾಗೂ ಮೆಕ್ಕಾ ಮದೀನಾದಲ್ಲಿ ಪವಿತ್ರ ಉಮ್ರಾಗೆ ತೆರಳಿದ್ದ ಮುಸ್ಲಿಂ ಸಮುದಾಯದ ಜನರು ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ಇದರಲ್ಲಿ ರಾಜ್ಯದ ಜನರೂ ಇದ್ದು, ಇತ್ತೀಚೆಗೆ ಕಲಬುರಗಿಯ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಇನ್ನು ಹಲವರು ಕೊರೋನಾ ಸೋಂಕಿಗೊಳಗಾಗಿದ್ದಾರೆ. ಇಂತಹವರು ರಾಜ್ಯದ ಮಸೀದಿ, ಮದೀನಗಳಲ್ಲಿ ಪ್ರಾರ್ಥನೆಗೆ ಸೇರುವ ಜನರ ಮಧ್ಯೆ ಸೇರಿದರೆ ಇತರರಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈಗಾಗಲೇ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದನ್ನು ತಾತ್ಕಾಲಿಕವಾಗಿ ನಿಬಂರ್‍ಧಿಸಲಾಗಿದೆ ಎಂದು ತಿಳಿಸಲಾಗಿದೆ.

- ಎಲ್ಲರೂ ತಮ್ಮತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಲು ಸೂಚನೆ

click me!