ಹೆಚ್‌ಡಿಕೆಯವರದ್ದು ಮನೆ ಊರು ದಾಟಿದ ಸಾಮರ್ಥ್ಯ, ನಮಗೆ ಅವರಷ್ಟು ತಾಕತ್ತಿಲ್ಲ : ಸಿಟಿ ರವಿ ಟಾಂಗ್

By Suvarna NewsFirst Published Feb 7, 2023, 9:25 PM IST
Highlights

ನಮಗೆ ಕುಮಾರಸ್ವಾಮಿಯಷ್ಟು ಸಾಮರ್ಥ್ಯವಿಲ್ಲ ಅನ್ನೋದನ್ನ ನಾವು ಮೊದಲೇ ಒಪ್ಪಿಕೊಂಡಿದ್ದೇವೆ. ನಮ್ಮದ್ದು ಸೀಮಿತ ಚೌಕಟ್ಟಿನ ಸಾಮರ್ಥ್ಯ, ಅವರ ಸಾಮರ್ಥ್ಯಕ್ಕೆ ನಾವು ಶರಣು ಶರಣಾರ್ಥಿ ಎಂದು ಶಾಸಕ ಸಿ.ಟಿ.ರವಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.

ಚಿಕ್ಕಮಗಳೂರು: ನಮಗೆ ಕುಮಾರಸ್ವಾಮಿಯಷ್ಟು ಸಾಮರ್ಥ್ಯವಿಲ್ಲ ಅನ್ನೋದನ್ನ ನಾವು ಮೊದಲೇ ಒಪ್ಪಿಕೊಂಡಿದ್ದೇವೆ. ನಮ್ಮದ್ದು ಸೀಮಿತ ಚೌಕಟ್ಟಿನ ಸಾಮರ್ಥ್ಯ, ಅವರ ಸಾಮರ್ಥ್ಯಕ್ಕೆ ನಾವು ಶರಣು ಶರಣಾರ್ಥಿ ಎಂದು ಶಾಸಕ ಸಿ.ಟಿ.ರವಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿಟಿ ರವಿ ಅವರು, ರಾಜ್ಯ ಬಿಜೆಪಿ ಸರ್ಕಾರ ನಪುಂಸಕ ಸರ್ಕಾರ ಎಂದು ಟ್ವಿಟ್ ಮಾಡಿದ್ದ ಹೆಚ್‌ಡಿಕೆಗೆ ವ್ಯಂಗ್ಯವಾಡಿದ್ದಾರೆ. ನಮ್ಮದ್ದು ಮನೆಯೊಳಗಿನ ಸಾಮರ್ಥ್ಯ, ಅವರದ್ದು ಮನೆ, ಊರು ದಾಟಿದ ಸಾಮರ್ಥ್ಯ, ನಮಗೆ ಅಷ್ಟು ಸಾಮರ್ಥ್ಯ ಇಲ್ಲ ಎಂದಿದ್ದಾರೆ. ಅವರು ವೈಯಕ್ತಿಕವಾಗಿ ಹೇಳಿದ್ದಾರೋ ಅಥವಾ ರಾಜಕೀಯವಾಗಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ರಾಜಕೀಯವಾಗಿ ಹೇಳಿದ್ದರೆ ಬಿಜೆಪಿ ತನ್ನ ಸಾಮರ್ಥ್ಯವನ್ನ ಸಾಬೀತು ಮಾಡುತ್ತಲೇ ಬಂದಿದೆ ಎಂದು ಸಿಟಿ ರವಿ (C T Ravi), ಹೆಚ್ ಡಿ ಕುಮಾರಸ್ವಾಮಿಯವರಿಗೆ (H D Kumaraswami) ತಿರುಗೇಟು ನೀಡಿದ್ದಾರೆ. 

ಜೆಡಿಎಸ್ ಭದ್ರಕೋಟೆಯಲ್ಲೇ ಮಗನನ್ನ ಗೆಲ್ಲಿಸಲು ಆಗಲಿಲ್ಲ 

ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಜೆಡಿಎಸ್ (JDS) ಭದ್ರಕೋಟೆಯಲ್ಲೇ ನೂರಾರು ಕೋಟಿ ಖರ್ಚು ಮಾಡಿದರೂ ತನ್ನ ಮಗನನ್ನು ಗೆಲ್ಲಿಸಲು ಆಗಲಿಲ್ಲ. ದೇವೇಗೌಡರು ಹಿರಿಯರು. ಅವರ ಬಗ್ಗೆ ಅಪಾರ ಗೌರವವಿದೆ. ಪ್ರಧಾನಿಯಾಗಿದ್ದವರು. ಆದರೆ,  ಇಳಿವಯಸ್ಸಲ್ಲಿ ಕಾಂಗ್ರೆಸ್-ಜೆಡಿಎಸ್ ಇಬ್ಬರೂ ಸೇರಿ ಗೆಲ್ಲಿಸಲು ಆಗಲಿಲ್ಲ ಅವರಿಗೆ ಏನು ಹೇಳಬೇಕು ಎಂದರು. ಒಂದು ವೇಳೆ, ಕುಮಾರಸ್ವಾಮಿ, ರಾಜಕೀಯವಾಗಿ ಆ ಮಾತನ್ನ ಹೇಳಿದ್ದರೆ, ಬಿಜೆಪಿ ರಾಜ್ಯದ 28 ಲೋಕಸಭಾ  ಕ್ಷೇತ್ರದಲ್ಲಿ(Lok Sabha constituencies) 25 ಪ್ಲಸ್ 1 (ಸ್ವತಂತ್ರ ಅಭ್ಯರ್ಥಿ) ಒಟ್ಟು 26 ಸೀಟು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯ ತೋರಿಸಿದೆ. ಆದರೆ ವೈಯಕ್ತಿಕವಾಗಿ ನಮಗೆ ಅವರಷ್ಟು ಸಾಮರ್ಥ್ಯ ಇಲ್ಲ ಎಂದು ಲೇವಡಿ ಮಾಡಿದ್ದಾರೆ. 

ರಾಮನಗರದಲ್ಲಿ ತ್ಯಾಗದ ನಾಟಕ ನಡೀತಿದೆ: ಜೆಡಿಎಸ್‌ ವಿರುದ್ಧ ಹರಿಹಾಯ್ದ ಸಿ.ಟಿ. ರವಿ

ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತರು ಅಂದರೆ ಯಾರು ?

ಬಿಜೆಪಿಯಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಮಾನ್ಯ ಕಾರ್ಯಕರ್ತ ಕೂಡ ಸಿಎಂ ಆಗಬಹುದು. ಆದರೆ, ಜೆಡಿಎಸ್‌ನಲ್ಲಿ ಇದು ಸಾಧ್ಯವಾ ಎಂದು ಶಾಸಕ ಸಿ.ಟಿ.ರವಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು. ಪ್ರಹ್ಲಾದ್ ಜೋಶಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಎಂಬ ಹೆಚ್‌ಡಿಕೆ ಹೇಳಿಕೆಗೆ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಜೆಡಿಎಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ದೊಡ್ಡ ಮನುಷ್ಯನನ್ನಾಗಿ ಮಾಡಿ ಅಧಿಕಾರ ಕೊಡಲು ಸಾಧ್ಯವಿದ್ಯಾ ಎಂದು ಪ್ರಶ್ನಿಸಿದ್ದಾರೆ. ಹಾಸನ ಜಗಳ ನಿಮಗೆ ಗೊತ್ತೇ ಇದೆ. ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತರು ಅಂದರೆ ಯಾರು? ಅಲ್ಲಿ ಭವಾನಿ (Bhavani Revanna) ಅಕ್ಕ, ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ನಿಖಿಲ್ ಕುಮಾರಸ್ವಾಮಿಯೇ (Nikhil Kumaraswami) ಸಾಮಾನ್ಯ ಕಾರ್ಯಕರ್ತರು ಎಂದು ಲೇವಡಿ ಮಾಡಿದ್ದಾರೆ. 

ಐಎಎಸ್‌ ಮಕ್ಕಳು ಐಎಎಸ್ ಆಗ್ತಾರೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗ್ಬಾರ್ದೆ: ಎಚ್‌ಡಿಕೆ 

ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಯಾವ ಸ್ಥಾನಕ್ಕೆ ಬೇಕಾದ್ರು ಏರಬಹುದು. ಅದಕ್ಕೆ ಉದಾಹರಣೆ ನಾನೇ. ನಾನು ಪೋಸ್ಟರ್ ಹೊಡೆದು, ಮೈಕ್ ಅನೌನ್ಸ್ ಮಾಡಿ ಫ್ಲಾಗ್ ಕಟ್ಟಿದ್ದೇನೆ. ಅದಕ್ಕೆ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದೇನೆ ಎಂದರು. ನಾವು ಯಾವುದೇ ದೊಡ್ಡ ರಾಜಕೀಯ ಹಿನ್ನೆಲೆಯವರಲ್ಲ, ಅದೇ ರೀತಿ ಪ್ರಹ್ಲಾದ್ ಜೋಶಿಯವರು ಕೂಡ, ನಮ್ಮ ಪ್ರಧಾನಿ ಕೂಡ. ಪ್ರಧಾನಿ ಮೋದಿಯವರು ಒಂದು ಕಾಲದ ಸಾಮಾನ್ಯ ಕಾರ್ಯಕರ್ತ ಎಂದು ಸಿಟಿ ರವಿ ಹೇಳಿದರು.

click me!