ಮತ್ತೆ ಚುನಾವಣೆ ಮುಂದೂಡಿಕೆ : ಪಕ್ಷಗಳಿಗೆ ನಿರಾಸೆ

By Kannadaprabha NewsFirst Published Oct 21, 2019, 12:43 PM IST
Highlights

ಮತ್ತೆ ಚುನಾವಣೆ ಮುಂದೂಡಿಕೆಯಾಗಿದ್ದು, ಸಿದ್ಧತೆಯಲ್ಲಿದ್ದವರಿಗೆ ನಿರಾಸೆ ಎದುರಾಗಿದೆ. ಮಿಸಲಾತಿ ವಿಚಾರವಾಗಿ ಚುನಾವಣೆಯನ್ನು ಮುಂದೂಡಲಾಗಿದೆ. 

ಅಶ್ವತ್ಥನಾರಾಯಣ ಎಲ್.

ಚಿಕ್ಕಬಳ್ಳಾಪುರ [ಅ.21]:  ವಿಧಾನಸಭಾ ಉಪ ಚುನಾವಣೆಗೂ ಮೊದಲೇ ಇಲ್ಲಿನ ನಗರಸಭೆಗೆ ಚುನಾವಣೆ ನಡೆಸುವ ಸಿದ್ಧತೆಯಲ್ಲಿ ಆಯೋಗ ನಿರತವಾಗಿದ್ದ ಕಾರಣ ಮೀಸಲಾತಿ ಯಥಾಸ್ಥಿತಿ ಇರಲಿದೆ ಎಂದು ನಗರಸಭಾ ಚುನಾವಣೆಗೆ ಸಿದ್ಧರಾಗುತ್ತಿದ್ದವರಿಗೆ ಮತ್ತೆ ನಿರಾಸೆ ಎದುರಾಗಿದ್ದು, ಮೀಸಲಾತಿ ವಿಚಾರವಾಗಿ ಮತ್ತೆ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ ತಡೆಯಾಗಿದೆ.

ಕಳೆದ ಮಾ. 18ಕ್ಕೆ ಪೂರ್ಣಗೊಂಡ ಇಲ್ಲಿನ ನಗರಸಭೆಯ ಅವಧಿಗೂ ಮುನ್ನವೇ ನಡೆಯಬೇಕಿದ್ದ ಚುನಾವಣೆಗೆ ಅಸಮರ್ಪಕ ಮೀಸಲಾತಿ ಆರೋಪ ಅಡ್ಡಿಯಾಯಿತು. ಆದರೆ ಈ ಅಡ್ಡಿ ಮುಂದುವರಿದಿದ್ದು, ಉಪ ಚುನಾವಣೆ ಮುಗಿಯುವವರೆಗೂ ಚಿಕ್ಕಬಳ್ಳಾಪುರ ನಗರಸಬೆಗೆ ಚುನಾವಣೆ ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. 

ಏನಿದು ಸಮಸ್ಯೆ?: ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಒಟ್ಟು 31 ವಾರ್ಡುಗಳಿದ್ದು, ಇದರಲ್ಲಿ ಹಲವು ವಾರ್ಡುಗದಳಿಗೆ ಮೀಸಲಾತಿ ಪುನರಾವರ್ತನೆಯಾಗುತ್ತಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿ ದ್ದರು. ಹಾಗಾಗಿ ಸರ್ಕಾರ ನೀಡಿದ್ದ ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿದ ಪರಿಣಾಮ ಚುನಾವಣೆ ನಡೆಯುವ ನಿರೀಕ್ಷೆ ಇತ್ತು.

ಆದರೆ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ ಪರಿಣಾಮ ಮತ್ತು ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿದ ಕಾರಣ ಮತ್ತೆ ನಗರಸಭೆ ಚುನಾವಣೆಯ ಮೇಲೆ ಮುಂದೂಡಿಕೆಯ ಕಾರ್ಮೋಡ ಕವಿದಿತ್ತು. ಆದರೆ ಒಂದೇ ದಿನಕ್ಕೆ ಸುಪ್ರೀಂಕೋರ್ಟ್ ಪ್ರಕರಣವನ್ನು ತಿರಸ್ಕರಿಸುವ ಮೂಲಕ ಚುನಾವಣೆಗೆ ಇದ್ದ ಅಡ್ಡಿಯನ್ನು ತೊಲಗಿಸಿತು.

click me!