ಚಾಮರಾಜನಗರದ ಉಪ್ಪಾರ ಬಡಾವಣೆಯ ಎರಡನೇ ವಾರ್ಡಿನಲ್ಲಿ 80 ಮನೆಗಳಲ್ಲಿ 400ಕ್ಕೂ ಹೆಚ್ಚು ಜನಸಂಖ್ಯೆ ಇರುವ ಬಡಾವಣೆಯಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣ್ತಿದೆ. ಆದ್ರೆ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ವರ್ತಿಸುತ್ತಿರುವುದು ವಿಪರ್ಯಾಸ.
ಚಾಮರಾಜನಗರ(ಅ.16): ಸುಸಜ್ಜಿತವಾದ ರಸ್ತೆ ಇಲ್ಲ, ಕೊಳಚೆ ನೀರು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಮಳೆ ಬಂದರೆ ಮನೆಗಳಿಗೆ ಕೊಳಚೆ ನೀರು ತುಂಬುವುದರಿಂದ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ. ನಿವಾಸಿಗಳು ಹಲವಾರು ಬಾರಿ ದೂರು ಸಲ್ಲಿಸಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಪರದಾಡುವಂತಾಗಿದೆ.
ಆಪರೇಷನ್ ಟೈಗರ್: ಮರಹತ್ತಿ ಕುಳಿತು ಹುಲಿಯ ಜಾಡು ಹಿಡಿದ ಕಾಡಿನ ಮಕ್ಕಳು
ಹನೂನ ಅಜ್ಜೀಪುರ ಗ್ರಾಪಂ ವ್ಯಾಪ್ತಿಯ ಕುರುಬರದೊಡ್ಡಿ ಉಪ್ಪಾರ ಬಡಾವಣೆಯ ಎರಡನೇ ವಾರ್ಡಿನಲ್ಲಿ 80 ಮನೆಗಳಲ್ಲಿ 400ಕ್ಕೂ ಹೆಚ್ಚು ಜನಸಂಖ್ಯೆ ಇರುವ ಬಡಾವಣೆ ಕಳೆದ ಹತ್ತಾರು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ರಸ್ತೆಯಲ್ಲಿರುವ ಕೊಳಚೆ ನೀರನ್ನೆ ತುಳಿದುಕೊಂಡು ಓಡಾಡುವ ಪರಿಸ್ಥಿತಿ ಕಣ್ಣ ಮುಂದೆಯೇ ಇದ್ದರೂ ಕಂಡು ಕಾಣದಂತಿರುವ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿಯ ಧೋರಣೆಯಿಂದ ನಿವಾಸಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಸೂಕ್ತ ಚರಂಡಿ ಇಲ್ಲ:
ಹತ್ತಾರು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಉಪ್ಪಾರ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಈ ಮನೆಗಳಲ್ಲಿ ದಿನಬಳಕೆ ಮಾಡಿ ಹೊರಬಿಡುವ ಕೊಳಚೆ ನೀರು ಸರಾಗವಾಗಿ ಮುಂದೆ ಹೋಗಲು ಸ್ಥಳಾವಕಾಶವಿಲ್ಲದೆ ಗಬ್ಬು ನಾರುತ್ತಿದೆ.
ಗುಂಡಿ ಬಿದ್ದ ರಸ್ತೆ:
ಉಪ್ಪಾರರ ಈ ಹಳೇ ಬಡಾವಣೆಯಲ್ಲಿ ನಿವಾಸಿಗಳು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ವಾರ್ಡಿನ ಸದಸ್ಯರಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟಹಿರಿಯ ಅಧಿಕಾರಿಗಳಿಗೂ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಅನೈರ್ಮಲ್ಯ ವಾತಾವರಣ ರೋಗಭೀತಿ:
ಒಂದೆಡೆ ಸುಸಜ್ಜಿವಾದ ರಸ್ತೆ ಇಲ್ಲ. ಕೊಳಚೆ ನೀರು ಹೊರಹೋಗಲು ಚರಂಡಿ ಇಲ್ಲ. ಇದರಿಂದಾಗಿ ಈ ಉಪ್ಪಾರರ ಬಡಾವಣೆಯಲ್ಲಿ ಕಲುಷಿತ ವಾತಾವರಣದಿಂದ ನಿವಾಸಿಗಳು ದಿನನಿತ್ಯ ಗಬ್ಬುನಾರುವ ಕೊಳಚೆ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿ ಮನೆಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಇಲ್ಲದ ಸಮಯದಲ್ಲಿ ಸೊಳ್ಳೆಗಳು ಕಚ್ಚಿ, ಸಾಂಕ್ರಾಮಿಕ ರೋಗಭಾದೆಯಿಂದ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಸ್ಥಳೀಯ ಅಜ್ಜೀಪುರ ಗ್ರಾಪಂ ಅಧಿಕಾರಿಗಳೂ ಸ್ವಚ್ಛತೆಗೆ ಆದ್ಯತೆ ನೀಡದೆ ಇರುವುದರಿಂದ ಇಲ್ಲಿನ ಜನತೆ ನಿತ್ಯ ನಲುಗುವಂತಾಗಿದೆ.
ಮನಿ ಸಲ್ಲಿಸಿದ್ರೆ ನೋ ರೆಸ್ಪಾನ್ಸ್:
ಕುರುಬರದೊಡ್ಡಿ ಉಪ್ಪಾರರ ಬಡಾವಣೆ ಕಳೆದ ಹಲವಾರು ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದೆ. ಇಲ್ಲಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವಾರು ಬಾರಿ ಕ್ರಮವಹಿಸುವಂತೆ ಮನವಿ ಸಲ್ಲಿಸಿದ್ದರು. ನಿರ್ಲಕ್ಷ್ಯ ವಹಿಸಿರುವುದರಿಂದ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಇಲ್ಲದಿದ್ದರೆ ಅಜ್ಜೀಪುರ ಗ್ರಾಪಂ ಮುಂಭಾಗ ಬಡಾವಣೆಯ ನಿವಾಸಿಗಳು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕುರುಬರದೊಡ್ಡಿ ನಿವಾಸಿ ಮಹಾದೇವಶೆಟ್ಟಿ ಹೇಳಿದ್ದಾರೆ.
ಸೂಕ್ತ ಕ್ರಮದ ಭರವಸೆ:
ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರದೊಡ್ಡಿಯಲ್ಲಿ ಸಮಸ್ಯೆ ಇರುವ ಬಗ್ಗೆ ಪರಿಶೀಲಿಸಿ ನಿವಾಸಿಗಳ ಜೊತೆ ಚರ್ಚಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮಂದಿನ ದಿನಗಳಲ್ಲಿ ಈ ಬಡಾವಣೆಗೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಅಜ್ಜೀಪುರ ಗ್ರಾಪಂ ಪಿಡಿಒ ನಂದೀಶ್ ಹೇಳಿದ್ದಾರೆ.
-ಜಿ. ದೇವರಾಜು ನಾಯ್ಡು
ಆಪರೇಷನ್ ಟೈಗರ್ ಸಕ್ಸಸ್ ಹಿಂದೆ ಮಾಳಿಗಮ್ಮನ ಮಹಿಮೆ..!