
ಮುಂಬೈ(ಏ.24): ಶಂಕಾಸ್ಪದ ವ್ಯವಹಾರಗಳ ಮೂಲಕ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಹಾಗೂ ಡಿಎಚ್ಎಫ್ಎಲ್ ಕಂಪನಿ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ಅವರು 5,050 ಕೋಟಿ ರು.ಗಳನ್ನು ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ. ಇ.ಡಿ. ತನ್ನ 2ನೇ ಹೆಚ್ಚುವರಿ ಆರೋಪಪಟ್ಟಿಯನ್ನು ವಿಶೇಷ ಕೋರ್ಚ್ಗೆ ಸಲ್ಲಿಸಿದೆ. ಅದರಲ್ಲಿ ಈ ಸಂಗತಿಗಳಿವೆ.
ರಾಣಾ ಕಪೂರ್ ಹಾಗೂ ವಾಧ್ವಾನ್ಗಳು ಬಹುಪಾಲು ಹಣವನ್ನು ವಿದೇಶಕ್ಕೆ ವರ್ಗಾಯಿಸಿದ್ದು, ಅಲ್ಲಿನ ಆಸ್ತಿಪಾಸ್ತಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ವಿದೇಶದಲ್ಲಿ ನಡೆದ ವಹಿವಾಟು ಇದಾದ ಕಾರಣ ಅಲ್ಲಿನ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲು ಅಗಿಲ್ಲ ಎಂದು ಅದು ವಿವರಿಸಿದೆ.
ಯೆಸ್ ಬ್ಯಾಂಕ್ಗೆ ನಿತೇಶ್ ಎಸ್ಟೇಟ್ 712 ಕೋಟಿ ರೂ. ವಂಚನೆ: ದೂರು
ಯೆಸ್ ಬ್ಯಾಂಕ್, 2018ರಲ್ಲಿ ಡಿಎಫ್ಎಚ್ಎಲ್ನಿಂದ 3700 ಕೋಟಿ ರೂಗೆ ಡಿಬೆಂಚರ್ ಖರೀದಿಸಿತ್ತು. ಆ ಹಣವನ್ನು ಡಿಎಫ್ಎಚ್ಎಲ್ಗೆ ವರ್ಗಾಯಿಸಿತ್ತು. ಆದರೆ ಬಳಿಕ ಡಿಎಫ್ಎಚ್ಎಲ್ ಕಂಪನಿಯು ರಾಣಾ ಒಡೆತನದ ಇನ್ನೊಂದು ಕಂಪನಿಯಾದ ಅರ್ಬನ್ ವೆಂಚರ್ಗೆ 600 ಕೋಟಿ ರು ಸಾಲ ನೀಡಿತು. ಯೆಸ್ ಬ್ಯಾಂಕ್ ಸಾರ್ವಜನಿಕ ಹಣ ಬಳಕೆ ಮಾಡಿ ಡಿಎಫ್ಎಚ್ಎಲ್ಗೆ ನೀಡಿತ್ತು. ಬಳಿಕ ಅದೇ ಹಣವನ್ನು ಕಪೂರ್ ಒಡೆತನದ ಕಂಪನಿಗೆ ಡಿಎಫ್ಎಚ್ಎಲ್ ಸಾಲವಾಗಿ ನೀಡಿತು. ಹೀಗೆ ಇಡೀ ವ್ಯವಹಾರ ಶಂಕಾಸ್ಪದವಾಗಿದೆ ಎಂದು ಆರೋಪಪಟ್ಟಿವಿವರಿಸಿದೆ. ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳು ಈಗಾಗಲೇ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ರಾಣಾ ಕಪೂರ್, ಇತರರ 2,800 ಕೋಟಿ ರೂ ಆಸ್ತಿ ಜಪ್ತಿ
ಯಸ್ ಬ್ಯಾಂಕ್ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಸಹ ಸ್ಥಾಪಕ ರಾಣಾ ಕಪೂರ್ ಮತ್ತು ಇತರರಿಗೆ ಸೇರಿದ 2,800 ಕೋಟಿ ರೂ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿ ಜಪ್ತಿ ಮಾಡಿದೆ. ಕಪೂರ್ ಅವರಿಗೆ ಸೇರಿದ ಲಂಡನ್ ಮತ್ತು ನ್ಯೂಯಾರ್ಕ್ನಲ್ಲಿರುವ ಫ್ಲ್ಯಾಟ್ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಪೂರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಚ್ಎಫ್ಎಲ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ಅವರಿಗೆ ಸಂಬಂಧಿಸಿದ ಆಸ್ತಿಗಳನ್ನೂ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಯಸ್ ಬ್ಯಾಂಕ್ ಬಿಕ್ಕಟ್ಟು: ಅನಿಲ್ ಅಂಬಾನಿಗೆ ಸಂಕಷ್ಟ!
1000 ಕೋಟಿ ಆಸ್ತಿ ಮಾರಿ ಪರಾರಿಗೆ ಯತ್ನಿಸಿದ್ದ ರಾಣಾ
ಹಗರಣದಲ್ಲಿ ಸಿಲುಕಿರುವ ಯಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್, ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿದ್ದ ಸುಮಾರು 1000 ಕೋಟಿ ರೂ ಆಸ್ತಿಪಾಸ್ತಿ ಮಾರಾಟ ಮಾಡಿ ವಿದೇಶಕ್ಕೆ ಪರಾರಿಯಾಗಲು ಹುನ್ನಾರ ನಡಡಸಿದ್ದರು ಎಂದು ತಿಳಿದುಬಂದಿದೆ. ಈ ಆಸ್ತಿಗಳು ದಿಲ್ಲಿಯಲ್ಲಿ ಇವೆ. ಇವುಗಳ ಮೇಲೆ ಈಗ ರಾಣಾ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ.) ಕಣ್ಣು ಬಿದ್ದಿದೆ.
ದಿಲ್ಲಿಯ ಅಮೃತಾ ಶೇರ್ಗಿಲ್ ಮಾರ್ಗದಲ್ಲಿ ಇಂಥ ಒಂದು ಬಂಗಲೆ ಇದೆ. ಯಸ್ ಬ್ಯಾಂಕ್ನಲ್ಲಿ 500 ಕೋಟಿ ರು. ಸಾಲ ಮಾಡಿ, ಇದನ್ನು ಮೊದಲು ಗೌತಮ್ ಥಾಪರ್ ಎಂಬುವರ ಅವಾಂತಾ ರಿಯಾಲ್ಟಿಕಂಪನಿ ಖರೀದಿಸಿತ್ತು. ಆದರೆ ಸಾಲ ಮರುಪಾವತಿ ಮಾಡಿರಲಿಲ್ಲ. ಈ ವೇಳೆ ಕಾನೂನು ಪ್ರಕಾರ ಇದನ್ನು ಯಸ್ ಬ್ಯಾಂಕ್ ಜಪ್ತಿ ಮಾಡಲಿಲ್ಲ. ಬದಲು ಕೇವಲ 380 ಕೋಟಿ ರು. ನೀಡಿ, ಈ ಬಂಗಲೆಯನ್ನು ರಾಣಾ ಕಪೂರ್ ಅವರ ಪತ್ನಿ ಬಿಂದು ಕಪೂರ್ರ ಬ್ಲಿಸ್ ಅಬೋಡ್ ಕಂಪನಿ ಖರೀದಿಸಿತ್ತು. ನಂತರ ಈ ಬಂಗಲೆಯನ್ನೂ ಮಾರಲು ರಾಣಾ ಕಪೂರ್ ಮುಂದಾಗಿದ್ದರು ಎಂದು ಮೂಲಗಳು ಹೇಳಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.