ಆನ್ ಲೈನ್ ನಲ್ಲೇ KYC ನವೀಕರಿಸಬಹುದು, ಬ್ಯಾಂಕಿಗೆ ಭೇಟಿ ನೀಡೋದು ಕಡ್ಡಾಯವಲ್ಲ: ಆರ್ ಬಿಐ

By Suvarna NewsFirst Published Jan 7, 2023, 12:29 PM IST
Highlights

ಕೆವೈಸಿ ನವೀಕರಣಕ್ಕೆ ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾಗಿಲ್ಲ. ಬದಲಿಗೆ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಆರ್ ಬಿಐ ತಿಳಿಸಿದೆ. ಹೀಗಾಗಿ ಇನ್ನು ಮುಂದೆ ವಿಳಾಸ ಬದಲಾವಣೆ ಹೊರತುಪಡಿಸಿ ಉಳಿದೆಲ್ಲ ಕೆವೈಸಿ ನವೀಕರಣಕ್ಕೆ ಶಾಖೆಗೆ ಭೇಟಿ ನೀಡುವಂತೆ ಬ್ಯಾಂಕ್ ಗಳು ಗ್ರಾಹಕರ ಮೇಲೆ ಒತ್ತಡ ಹೇರುವಂತಿಲ್ಲ. 

ಮುಂಬೈ (ಜ.7): ಕೆವೈಸಿ ನವೀಕರಣಕ್ಕೆ ಗ್ರಾಹಕರು ಬ್ಯಾಂಕ್ ಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ವಿಳಾಸ ಬದಲಾವಣೆ ಹೊರತುಪಡಿಸಿ ಉಳಿದೆಲ್ಲ ಕೆವೈಸಿ ನವೀಕರಣವನ್ನು ಗ್ರಾಹಕರು ಆನ್ ಲೈನ್ ಮೂಲಕವೇ ಮಾಡಬಹುದು ಎಂದು ಆರ್ ಬಿಐ ಗವರ್ನರ್ ತಿಳಿಸಿದ್ದಾರೆ. ಹೀಗಾಗಿ ಕೆವೈಸಿ ನವೀಕರಣಕ್ಕೆ ಬ್ಯಾಂಕ್ ಶಾಖೆಗಳಿಗೆ ಅಲೆಯಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ಮಾಡಬಹುದು. ಗ್ರಾಹಕ ನೀಡಿರುವ ಮಾಹಿತಿಗಳು ಸಮರ್ಪಕವಾಗಿವೆ ಎಂದು ಪರಿಶೀಲಿಸಿ ದೃಢೀಕರಿಸಲು ಕೆವೈಸಿ ಬ್ಯಾಂಕಿಗೆ ನೆರವು ನೀಡುತ್ತದೆ. ಹೀಗಾಗಿ ಬ್ಯಾಂಕ್ ಗಳು ಹೊಸ ಖಾತೆ ತೆರೆಯುವ ಸಮಯದಲ್ಲಿ ಗ್ರಾಹಕರಿಂದ ಕೆವೈಸಿ ಮಾಹಿತಿಗಳನ್ನು ಕೋರುತ್ತದೆ.  ಈ ಕೆವೈಸಿ ಮಾಹಿತಿಯನ್ನು ಖಾತೆದಾರರು ನಿಯಮಿತವಾಗಿ ನವೀಕರಿಸುವಂತೆ ಆರ್ ಬಿಐ ನಿಯಮಗಳು ತಿಳಿಸಿವೆ. ಆದರೆ, ಕೆವೈಸಿ ನವೀಕರಣಕ್ಕೆ ಬ್ಯಾಂಕ್ ಶಾಖೆಗಳಿಗೆ ಆಗಾಗ ಭೇಟಿ ನೀಡುವುದು ಗ್ರಾಹಕರಿಗೆ ಹೊರೆಯಾಗಬಹುದು. ಇದೇ ಕಾರಣಕ್ಕೆ ಆರ್ ಬಿಐ ಆನ್ ಲೈನ್ ಮೂಲಕ ಕೆವೈಸಿ ನವೀಕರಣಕ್ಕೆ ಒತ್ತು ನೀಡಿದೆ. 

ಒಂದು ವೇಳೆ ಯಾವುದಾದ್ರೂ ಬ್ಯಾಂಕ್ ಕೆವೈಸಿ (KYC) ನವೀಕರಣಕ್ಕೆ ಶಾಖೆಗೆ (Branch) ಭೇಟಿ ನೀಡುವುದು ಕಡ್ಡಾಯ ಎಂದು ಗ್ರಾಹಕರ ಮೇಲೆ ಒತ್ತಡ ಹೇರಿದ್ರೆ ಅಂಥ ಬ್ಯಾಂಕ್ ವಿರುದ್ಧ ಗ್ರಾಹಕರು ಸಂಬಂಧಪಟ್ಟ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದೆಂದು ಆರ್ ಬಿಐ (RBI) ತಿಳಿಸಿದೆ. 'ಕೆವೈಸಿ ಮಾಹಿತಿಯಲ್ಲಿ ಬದಲಾವಣೆ ಮಾಡಿಲ್ಲ. ಆದರೆ, ಮರು-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಗ್ರಾಹಕರ ಸ್ವಯಂ ಘೋಷಣೆ ಸಾಕು' ಎಂದು ಆರ್ ಬಿಐ ತಿಳಿಸಿದೆ. 

ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್ ಪಡೆಯಬಹುದಾ? ಅರ್ಜಿ ಸಲ್ಲಿಕೆ ಹೇಗೆ?

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(Anti-money laundering Act)-2002 ಹಾಗೂ ಅಕ್ರಮ ಹಣ ವರ್ಗಾವಣೆ ತಡೆ (ದಾಖಲೆಗಳ ನಿರ್ವಹಣೆ)  ನಿಯಮಗಳು 2005ರ ಅನ್ವಯ ಗ್ರಾಹಕರ ಗುರುತು ಮಾಹಿತಿಗಳನ್ನು ಕಲೆ ಹಾಕುವಂತೆ ಬ್ಯಾಂಕು ಹಾಗೂ  ಹಣಕಾಸು ಸಂಸ್ಥೆಗಳಿಗೆ ಆರ್ ಬಿಐ 2016ರಲ್ಲಿ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಅನ್ವಯ ಅನಾಮಿಕರ ಅಥವಾ ಬೇನಾಮಿ ಹೆಸರಿನಲ್ಲಿ ಯಾವುದೇ ಖಾತೆ ತೆರೆಯುವಂತಿಲ್ಲ. ಖಾತೆ ತೆರೆಯೋ ಸಂದರ್ಭದಲ್ಲಿ ಖಾತೆದಾರ ಗುರುತು ಮತ್ತು ವಿಳಾಸ ಪುರಾವೆಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಅಲ್ಲದೆ, ಕಾಲಕಾಲಕ್ಕೆ ಕೆವೈಸಿ ಮಾಹಿತಿಗಳನ್ನು ಪರಿಷ್ಕರಿಸಬೇಕು ಎಂದು ಆರ್ ಬಿಐ (RBI) ಸೂಚಿಸಿದೆ. 

ಯಾವುದೇ ಸಮಯದಲ್ಲಿ ಪರಿಶೀಲಿಸಿದ್ರೂ ನೂರಾರು ಬ್ಯಾಂಕ್ ಗ್ರಾಹಕರ ಕೆವೈಸಿ ಅವಧಿ ಮುಗಿದಿರೋದು ಸಾಮಾನ್ಯ. ಏಕೆಂದ್ರೆ ಕೆವೈಸಿ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಿದೆ. ಕಾಲ ಕಾಲಕ್ಕೆ ಕೆವೈಸಿ ಪರಿಷ್ಕರಿಸೋದು ಅಗತ್ಯವಾಗಿದೆ. 

ಯಶಸ್ವಿ ಉದ್ಯಮಿಗಳೆಲ್ಲ ಗುಜರಾತಿಗಳೇ ಆಗಿರೋದೇಕೆ? ಇದಕ್ಕೇನು ಕಾರಣ?

ಕೆವೈಸಿಗೆ ಯಾವೆಲ್ಲ ದಾಖಲೆಗಳು ಅಗತ್ಯ?
ಗ್ರಾಹಕರು ಕೆವೈಸಿ ಮಾಡಿಸಲು ಪಾನ್ ಕಾರ್ಡ್(PAN Card), ಆಧಾರ್ ಕಾರ್ಡ್ (Aadhaar Card), ಮತದಾರರ ಚೀಟಿ(Voter's Identity Card),ಡ್ರೈವಿಂಗ್ ಲೈಸೆನ್ಸ್ (Driving Licence),ನರೇಗಾ ಉದ್ಯೋಗ ಚೀಟಿ, ಪಾಸ್ ಪೋರ್ಟ್( Passport) ಇವೆಷ್ಟರಲ್ಲಿ ಯಾವುದಾದರೊಂದು ಒಂದು ದಾಖಲೆಯನ್ನು ಗುರುತು ಹಾಗೂ ವಿಳಾಸ ದೃಢೀಕರಣಕ್ಕಾಗಿ ನೀವು ಬ್ಯಾಂಕಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. 
ಕೆವೈಸಿ ಗ್ರಾಹಕ ಮತ್ತು ಬ್ಯಾಂಕ್ ಇಬ್ಬರಿಗೂ ಪ್ರಯೋಜನಕಾರಿಯಾಗಿದೆ.  ಗ್ರಾಹಕರನ ಮಾಹಿತಿ ಬ್ಯಾಂಕ್ ನಲ್ಲಿರುವುದರಿಂದ ಆತನ ಸಂಪರ್ಕ ಬ್ಯಾಂಕ್ ಗೆ ಸುಲಭವಾಗುತ್ತದೆ. ಇತ್ತ ಗ್ರಾಹಕ ಬ್ಯಾಂಕ್ ನಲ್ಲಿಟ್ಟ ಹಣ ಭದ್ರವಾಗಿರುತ್ತದೆ. ಆತನ ಒಪ್ಪಿಗೆ ಇಲ್ಲದೆ ಬ್ಯಾಂಕ್ ಯಾವುದೇ ವಹಿವಾಟನ್ನು ನಡೆಸುವಂತಿಲ್ಲ. ಯಾರಾದ್ರೂ ವಂಚನೆ (Fraud) ಮಾಡಲು ಪ್ರಯತ್ನಿಸಿದರೂ ಗ್ರಾಹಕನಿಗೆ ಅಲರ್ಟ್ ಮೆಸೇಜ್ ಬರುತ್ತದೆ. 
 

click me!