
ತಿರುವನಂತಪುರಂ: ಭಾರತದ ಮುಂಚೂಣಿಯ ಕೈಗಾರಿಕಾ ದೈತ್ಯ ಸಂಸ್ಥೆಯಾದ ಟಾಟಾ ಗ್ರೂಪ್ (Tata Group) ಇದೀಗ ವಾಣಿಜ್ಯ ಹಡಗು ನಿರ್ಮಾಣ ರಂಗಕ್ಕೆ (Shipbuilding Industry) ಹೆಜ್ಜೆ ಇಡಲು ಸಜ್ಜಾಗಿದೆ. ಕೇರಳದಲ್ಲಿ ಅತ್ಯಾಧುನಿಕ ಹಡಗು ನಿರ್ಮಾಣ ಸೌಲಭ್ಯವನ್ನು ಸ್ಥಾಪಿಸಲು ಟಾಟಾ ಸಮೂಹವು ಸುಮಾರು ₹10,000 ಕೋಟಿ (ಸುಮಾರು $1 ಬಿಲಿಯನ್) ಹೂಡಿಕೆ ಮಾಡಲಿದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ರಾಜ್ಯದ ಕಡಲ ವ್ಯವಹಾರಗಳ ಮಹತ್ವಾಕಾಂಕ್ಷೆಗೆ ಈ ಯೋಜನೆ ಬಾರೀ ಉತ್ತೇಜನ ನೀಡಲಿದ್ದು, ಪ್ರಸ್ತುತ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳ ಏಕಸ್ವಾಮ್ಯ ಹೊಂದಿರುವ ಜಾಗತಿಕ ಹಡಗು ನಿರ್ಮಾಣ ಮಾರುಕಟ್ಟೆಗೆ ಭಾರತವು ಪ್ರಬಲ ಪೈಪೋಟಿ ನೀಡಲು ಇದು ಮುನ್ನುಡಿ ಬರೆಯಲಿದೆ.
ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಮಾಧ್ಯಮ ಸಂಸ್ಥೆ 'ಬ್ಲೂಮ್ಬರ್ಗ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಮೆಗಾ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡಿದ್ದಾರೆ.
ಹಡಗು ನಿರ್ಮಾಣ ಉದ್ಯಮ ಸ್ಥಾಪನೆಗಾಗಿ ಟಾಟಾ ಸಮೂಹವು ಈಗಾಗಲೇ ಸರ್ಕಾರದ ಅನುಮೋದನೆಗೆ ಅರ್ಜಿ ಸಲ್ಲಿಸಿದೆ. ರಾಜ್ಯ ಸರ್ಕಾರವು ಈ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತಿದ್ದು, ಮುಂದಿನ ಒಂದು ತಿಂಗಳೊಳಗೆ ಅಧಿಕೃತ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ. ಈ ಬೃಹತ್ ಯೋಜನೆಗೆ ಅಗತ್ಯವಿರುವ ಭೂಮಿ ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಕೇರಳ ಸರ್ಕಾರ ಬದ್ಧವಾಗಿದೆ.
ಈಗಾಗಲೇ ಕಾಫಿ, ಐಷಾರಾಮಿ ಆಟೋಮೊಬೈಲ್ಸ್ (ಜಾಗ್ವಾರ್ ಲ್ಯಾಂಡ್ ರೋವರ್), ಉಕ್ಕು (ಟಾಟಾ ಸ್ಟೀಲ್) ಮತ್ತು ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸಂಸ್ಥೆಗೆ ಇದು ಸಂಪೂರ್ಣ ಹೊಸ ಹಾಗೂ ಆಯಕಟ್ಟಿನ ವ್ಯವಹಾರ ಮಾರ್ಗವಾಗಲಿದೆ.
ಕೇರಳ ಸರ್ಕಾರವು ರಾಜ್ಯವನ್ನು ಜಾಗತಿಕ ಕಡಲ ಮತ್ತು ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಲು "ಮಿಷನ್ ಸಮುದ್ರ" ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ತನ್ನ ಮೊದಲ ಬಜೆಟ್ನಲ್ಲಿ ಘೋಷಿಸಿತ್ತು. ಟಾಟಾ ಸಂಸ್ಥೆಯ ಈ ಹೂಡಿಕೆಯು ಇದೇ ಮಿಷನ್ನ ಭಾಗವಾಗಿದೆ. ಪ್ರಸ್ತುತ ಕೇರಳದ ಕಡಲ ವಲಯದಲ್ಲಿ ದೊಡ್ಡ ಮಟ್ಟದ ಚಟುವಟಿಕೆಗಳು ನಡೆಯುತ್ತಿವೆ:
ವಿಝಿಂಜಂನಲ್ಲಿರುವ ಅದಾನಿ ಗ್ರೂಪ್ನ ಆಳ ಸಮುದ್ರದ ಟ್ರಾನ್ಸ್ಶಿಪ್ಮೆಂಟ್ ಹಬ್ಗಾಗಿ, ಜಾಗತಿಕ ದೈತ್ಯ ಸಂಸ್ಥೆ 'MSC ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ' ₹13,000 ಕೋಟಿ ($1.4 ಬಿಲಿಯನ್) ಹೂಡಿಕೆ ಮಾಡಲು ಮುಂದಾಗಿದೆ. ಇದು ಭಾರತದ ಬಂದರು ಇತಿಹಾಸದಲ್ಲೇ ಅತಿ ದೊಡ್ಡ ವಿದೇಶಿ ಖಾಸಗಿ ಹೂಡಿಕೆಯಾಗಿದ್ದು, ಸದ್ಯ ಸತೀಶನ್ ಸರ್ಕಾರದ ಪರಿಶೀಲನೆಯಲ್ಲಿದೆ.
ಇದರ ಬೆನ್ನಲ್ಲೇ ಟಾಟಾ ಗ್ರೂಪ್ ಕೂಡ ₹10,000 ಕೋಟಿಯ ಪ್ರಸ್ತಾವನೆಯೊಂದಿಗೆ ರಂಗಪ್ರವೇಶ ಮಾಡುತ್ತಿರುವುದು ಕೇರಳದ ಕಡಲ ಆರ್ಥಿಕತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ. ವಿಳಿಂಜಮ್ ಮತ್ತು ಕೊಚ್ಚಿ ಬಂದರುಗಳ ಸಮೀಪದಲ್ಲಿ ಹಡಗು ನಿರ್ಮಾಣ ಹಾಗೂ ದುರಸ್ತಿ ಸೇವೆಗಳನ್ನು ಒಳಗೊಂಡ ಸಂಪೂರ್ಣ ಮೌಲ್ಯ ಸರಪಳಿಯನ್ನು ವಿಸ್ತರಿಸಲು ಕೇರಳ ಸರ್ಕಾರ ಯೋಜಿಸಿದೆ.
ವಾಣಿಜ್ಯ ಹಡಗು ನಿರ್ಮಾಣ ರಂಗಕ್ಕೆ ಟಾಟಾ ಪ್ರವೇಶಿಸುತ್ತಿರುವುದು ಅದರದ್ದೇ ಆದ ಸಹೋದರ ಸಂಸ್ಥೆ 'ಟಾಟಾ ಸ್ಟೀಲ್'ಗೆ ದೊಡ್ಡ ಮಟ್ಟದ ಲಾಭ ತಂದುಕೊಡಲಿದೆ. ಭಾರತದಲ್ಲಿ ಈಗಾಗಲೇ ಹಡಗುಕಟ್ಟೆಗಳಿಗೆ (Shipyards) ಬಳಸುವ ಅತ್ಯಂತ ದೃಢವಾದ ಮತ್ತು ವಿಶೇಷ ದರ್ಜೆಯ ಉಕ್ಕನ್ನು ಪೂರೈಸುವಲ್ಲಿ ಟಾಟಾ ಸ್ಟೀಲ್ ಮುಂಚೂಣಿಯಲ್ಲಿದೆ. ಈಗ ಸ್ವತಃ ಟಾಟಾ ಗ್ರೂಪ್ ಉದ್ಯಮಕ್ಕೆ ಇಳಿಯುವುದರಿಂದ ಉಕ್ಕಿನ ಆಂತರಿಕ ಬಳಕೆ ಮತ್ತು ಉತ್ಪಾದನೆಗೆ ಭಾರಿ ಉತ್ತೇಜನ ಸಿಗಲಿದೆ.
ಭಾರತವು 18 ನೇ ಶತಮಾನದಲ್ಲಿ ಜಾಗತಿಕ ಹಡಗು ನಿರ್ಮಾಣ ರಂಗದಲ್ಲಿ ಅಗ್ರಗಣ್ಯ ಮುಂಚೂಣಿಯ ದೇಶವಾಗಿತ್ತು. ಕಾಲಕ್ರಮೇಣ ಈ ಹಿಡಿತ ತಪ್ಪಿಹೋಗಿತ್ತು. ಪ್ರಸ್ತುತ ಜಾಗತಿಕ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ ಭಾರತದ ಪಾಲು ಕೇವಲ ಶೇಕಡಾ 1 ರಷ್ಟಿದೆ. ಆದರೆ, ಭಾರತ ಸರ್ಕಾರವು 2047ರ ವೇಳೆಗೆ ವಿಶ್ವದ "ಟಾಪ್ 5 ಹಡಗು ನಿರ್ಮಾಣ ರಾಷ್ಟ್ರಗಳಲ್ಲಿ" ಒಂದಾಗುವ ಗುರಿಯನ್ನು ಹೊಂದಿದೆ. ಇತ್ತೀಚೆಗಷ್ಟೇ ಭಾರತ ಮತ್ತು ದಕ್ಷಿಣ ಕೊರ್ಯಾ ದೇಶಗಳು ವಿಶ್ವದ ಎರಡನೇ ಅತಿ ದೊಡ್ಡ ಹಡಗು ನಿರ್ಮಾಣ ಉದ್ಯಮಕ್ಕೆ ನೆಲೆಯಾಗಲು ಕಡಲ ಸಹಕಾರವನ್ನು ಗಾಢಗೊಳಿಸಲು ಒಪ್ಪಿಕೊಂಡಿವೆ. ಇಂತಹ ನಿರ್ಣಾಯಕ ಸಮಯದಲ್ಲಿ ಟಾಟಾ ಗ್ರೂಪ್ನ ಈ ಮೆಗಾ ಹೂಡಿಕೆಯು ಭಾರತವನ್ನು ಜಾಗತಿಕ ಕಡಲ ವ್ಯಾಪಾರದ ಪ್ರಮುಖ ಕೇಂದ್ರವನ್ನಾಗಿ ಮಾಡಲು ಗಟ್ಟಿಯಾದ ಬುನಾದಿ ಹಾಕಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.