ನೀವು ಮನೆಯಲ್ಲಿ ಕುಳಿತಿರಿ ಬಾಸು: ಸರ್ಕಾರವೇ ತಲುಪಿಸುತ್ತೆ ಕಾಸು!

By Web DeskFirst Published Jan 10, 2019, 2:32 PM IST
Highlights

ಹೊಸ ಯೋಜನೆ ಅನುಷ್ಠಾನಕ್ಕೆ ಮುಂದಾದ ರಾಜ್ಯ ಸರ್ಕಾರ| ಸಾರ್ವತ್ರಿಕ ಮೂಲ ವರಮಾನ ಯೋಜನೆಗೆ ರಾಜ್ಯದ ಚಿಂತನೆ| ಸರ್ಕಾರವೇ ಪ್ರಜೆಗಳಿಗೆ ನೇರವಾಗಿ ಹಣ ನೀಡುವ ಯೋಜನೆ| ಸಾರ್ವತ್ರಿಕ ಮೂಲ ವರಮಾನ ಯೋಜನೆಗೆ ಸಿಕ್ಕಿಂ ರಾಜ್ಯ ಸರ್ಕಾರ ಮುಂದು| ಯೋಜನೆ ಅನುಷ್ಠಾನಕ್ಕೆ ಸಿದ್ಧ ಎಂದ ಸಿಎಂ ಪವನ್ ಕುಮಾರ್ ಚಾಮ್ಲಿಂಗ್

ಗ್ಯಾಂಗ್ಟಾಕ್(ಜ.10): ಸಾರ್ವತ್ರಿಕ ಮೂಲ ವರಮಾನದ ಕುರಿತು ಇಡೀ ವಿಶ್ವದಲ್ಲೇ ಚರ್ಚೆಯಾಗುತ್ತಿದೆ. ಸರ್ಕಾರವೇ ತನ್ನ ಪ್ರಜೆಗಳಿಗೆ ನಿರ್ದಿಷ್ಟ ಹಣವನ್ನು ಸಮನಾಗಿ ಹಂಚುವ ಯೋಜನೆಯೇ ಸಾರ್ವತ್ರಿಕ ಮೂಲ ವರಮಾನ.

ಸಾರ್ವತ್ರಿಕ ಮೂಲ ವರಮಾನ ಯೋಜನೆ ಕೆಲವು ಐರೋಪ್ಯ ರಾಷ್ಟ್ರಗಳಲ್ಲಿ ಅನುಷ್ಠಾನಕ್ಕೆ ಬಂದಿದ್ದು, ಇದರಲ್ಲಿ ಅಲ್ಲಿನ ಸರ್ಕಾರಗಳು ಯಶಸ್ವಿಯೂ ಆಗಿವೆ.

ಅದರಂತೆ ಭಾರತದಲ್ಲೂ ಸಾರ್ವತ್ರಿಕ ಮೂಲ ವರಮಾನದ ಕುರಿತು ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಿದೆ. ಕೆಲವು ರಾಜ್ಯಗಳು ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಕೂಡ ಮಾಡಿದ್ದವು. ಅಲ್ಲದೇ ಕೇಂದ್ರ ಹಣಕಾಸು ಇಲಾಖೆ ಮುಂದೆ ಕೂಡ ಇಂತದ್ದೊಂದು ಪ್ರಸ್ತಾವನೆ ಬಂದಿತ್ತು.

ಇದೀಗ ಈಶಾನ್ಯ ಭಾರತದ ಪುಟ್ಟ ರಾಜ್ಯ ಸಿಕ್ಕಿಂ ಸಾರ್ವತ್ರಿಕ ಮೂಲ ವರಮಾನ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್, ಸಾರ್ವತ್ರಿಕ ಮೂಲ ವರಮಾನ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

2019 ರಲ್ಲಿ ಲೋಕಸಭೆ ಚುನಾವಣೆ ಜೊತೆಯಲ್ಲೇ ಸಿಕ್ಕಿಂ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, 1994 ರಿಂದ ನಿರಂತರವಾಗಿ ಅಧಿಕಾರದಲ್ಲಿರುವ ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್‌ನ ಪವನ್ ಕುಮಾರ್ ಚಾಮ್ಲಿಂಗ್, ಇದೀಗ ಸಾರ್ವತ್ರಿಕ ಮೂಲ ವರಮಾನ ಯೋಜನೆ ಮೂಲಕ ಮತ್ತೊಮ್ಮೆ ಜನರ ಮನ ಗೆಲ್ಲಲು ಸಿದ್ಧತೆ ನಡೆಸದ್ದಾರೆ.

ಸಾರ್ವತ್ರಿಕ ಮೂಲ ವರಮಾನ ಯೋಜನೆ ಪ್ರಕಾರ ಸರ್ಕಾರವೇ ತನ್ನ ಪ್ರಜೆಗಳಿಗೆ ನಿರಂತರವಾಗಿ ನಿರ್ದಿಷ್ಟ ಮೊತ್ತವನ್ನು ಕೊಡುತ್ತದೆ. ಆದರೆ ಈ ಯೋಜನೆಗೆ ವಿರೋಧ ಕೂಡ ವ್ಯಕ್ತವಾಗಿತ್ತು.

ಪ್ರಜೆಗಳಿಗೆ ನೇರವಾಗಿ ಸರ್ಕಾರವೇ ಹಣ ಒದಗಿಸುವ ಮೂಲಕ ಅವರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂಬುದು ಈ ಯೋಜನೆಯ ವಿರೋಧಿಗಳ ಅಭಿಪ್ರಾಯವಾಗಿದೆ.

click me!