
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ದೇಶದಾದ್ಯಂತ ಹಕ್ಕುದಾರರಿಲ್ಲದೆ ಉಳಿದಿರುವ ಕೋಟ್ಯಂತರ ರೂಪಾಯಿ ಠೇವಣಿಗಳನ್ನು ಮರುಪಡೆಯಲು ಬ್ಯಾಂಕುಗಳಿಗೆ ವಿಶೇಷ ಸೂಚನೆ ನೀಡಿದೆ. ಲಾಭಾಂಶ, ಬಡ್ಡಿ ವಾರಂಟ್ಗಳು, ವಿಮಾ ಆದಾಯ ಸೇರಿದಂತೆ ದಶಕಕ್ಕೂ ಹೆಚ್ಚು ಕಾಲ ಕ್ಲೈಮ್ ಮಾಡದ ಠೇವಣಿಗಳನ್ನು ಮರಳಿ ಹಕ್ಕುದಾರರಿಗೆ ತಲುಪಿಸುವ ನಿಟ್ಟಿನಲ್ಲಿ ಆರ್ಬಿಐ ಅಕ್ಟೋಬರ್ನಿಂದ ಡಿಸೆಂಬರ್ ವರೆಗೆ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ತೀರ್ಮಾನಿಸಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ತಿಳಿಸಿದೆ.
ಮಾರ್ಚ್ 4, 2024 ರ ವೇಳೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ದೇಶದಾದ್ಯಂತ ಸುಮಾರು ₹67,270 ಕೋಟಿ ರೂಪಾಯಿ ಹಕ್ಕುದಾರರಿಲ್ಲದೆ ಬ್ಯಾಂಕುಗಳಲ್ಲಿ ಉಳಿದಿದೆ. ಈ ಹಣವನ್ನು ಕ್ಲೈಮ್ ಮಾಡದ ಠೇವಣಿ ಎಂದು ವರ್ಗೀಕರಿಸಲಾಗಿದ್ದು, ಅಂತಿಮವಾಗಿ ಇದು ಆರ್ಬಿಐ ನಿರ್ವಹಿಸುವ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ (Depositor Education and Awareness Fund – DEA Fund) ವರ್ಗಾಯಿಸಲಾಗುತ್ತದೆ.
ಮಾಜಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, 2024ರ ಫೆಬ್ರವರಿಯ ಹಣಕಾಸು ನೀತಿ ಘೋಷಣೆಯಲ್ಲಿ ಕೇಂದ್ರೀಕೃತ ವೆಬ್ ಪೋರ್ಟಲ್ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಈ ಪೋರ್ಟಲ್ ಮೂಲಕ ಠೇವಣಿದಾರರು ಅಥವಾ ಅವರ ವಾರಸುದಾರರು ಬೇರೆಬೇರೆ ಬ್ಯಾಂಕುಗಳಲ್ಲಿ ಇರುವ ಹಕ್ಕುದಾರರಿಲ್ಲದ ಹಣವನ್ನು ಒಂದೇ ಜಾಗದಲ್ಲಿ ಹುಡುಕಿಕೊಳ್ಳಲು ಸಾಧ್ಯವಾಗುತ್ತದೆ.
ಈ UDGAM (Unclaimed Deposits – Gateway to Access Information) ಪೋರ್ಟಲ್ಗೆ ಈಗಾಗಲೇ ದೇಶದ 30 ಪ್ರಮುಖ ಬ್ಯಾಂಕುಗಳು ಸೇರಿಕೊಂಡಿದ್ದು, ಇದು ದೇಶದ 90% ಹಕ್ಕುದಾರರಿಲ್ಲದ ಠೇವಣಿಗಳನ್ನು ಒಳಗೊಂಡಿದೆ.
ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಿಗೆ ವಿಶೇಷ ಒತ್ತು
ಆರ್ಬಿಐ, ಕಡಿಮೆ ಸಾಕ್ಷರತೆ ಹೊಂದಿರುವ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವುದಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ಇದರೊಂದಿಗೆ ರಾಜ್ಯಮಟ್ಟದ ಬ್ಯಾಂಕ್ ಸಮಿತಿಗಳು (SLBCs), ಹಕ್ಕುದಾರರಿಲ್ಲದ ಠೇವಣಿಗಳ ವಯೋ ಪ್ರೊಫೈಲ್ ಮತ್ತು ಬಕೆಟ್ ಆಧಾರದ ಮಾಹಿತಿ ವಿಶ್ಲೇಷಿಸಿ, ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಲಿವೆ.
ಆರ್ಬಿಐನ ಈ ಅಭಿಯಾನದಿಂದಾಗಿ, ವರ್ಷಗಳ ಕಾಲ ಬ್ಯಾಂಕುಗಳಲ್ಲಿ ನಿಷ್ಕ್ರಿಯವಾಗಿ ಉಳಿದಿರುವ ಲಕ್ಷಾಂತರ ಜನರ ಠೇವಣಿಗಳು ಮತ್ತು ಲಾಭಾಂಶಗಳು ಮರಳಿ ಹಕ್ಕುದಾರರಿಗೆ ತಲುಪುವ ನಿರೀಕ್ಷೆ ಇದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಹಕ್ಕಿನ ಹಣವನ್ನು ಮರುಪಡೆಯಲು ಇದು ಮಹತ್ವದ ಹೆಜ್ಜೆಯಾಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.