
ಬೆಂಗಳೂರು(ಸೆ.19): ಮಹತ್ವದ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಾಲ್ ಸಂಸ್ಥೆಯ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಬೆಂಗಳೂರು ನಗರದ ನ್ಯಾಯಾಲಯವೊಂದರಲ್ಲಿ ಬನ್ಸಾಲ್ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ವಿರುದ್ಧ ಕೇವಿಯಟ್ ಸಲ್ಲಿಸಿದ್ದಾರೆ.
ದೇಶದ ಎರಡನೆಯ ಅತಿ ದೊಡ್ಡ ಐಟಿ ಕಂಪೆನಿಯು ಟ್ರಿಬ್ಯೂನಲ್ ಆದೇಶದ ಮೇರೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ, ಕೇವಿಯಟ್ ಅರ್ಜಿ ಸಲ್ಲಿಕೆಯಾಗಿದೆ ಎಂದು ಬನ್ಸಾಲ್ ಅವರ ಇಂಡಸ್ ಲಾ ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ.
ಈ ಕೇವಿಯಟ್ ಅರ್ಜಿ ಬನ್ಸಾಲ್ ಹಿತಾಸಕ್ತಿಯನ್ನು ಕಾಪಾಡಲಿದ್ದು, ಇನ್ಫೋಸಿಸ್ ಪ್ರಾರಂಭಿಸಲಿದೆ ಎಂದು ನಂಬಲಾದ ಯಾವುದೇ ಮೊಕದ್ದಮೆಯನ್ನು ಬನ್ಸಾಲ್ ಅನುಮತಿ ಇಲ್ಲದೆ ಮುಂದುವರಿಸುವುದನ್ನು ತಡೆಯಲಿದೆ.
2015 ರಲ್ಲಿ ಬನ್ಸಾಲ್ ಕಂಪನಿಯನ್ನು ತೊರೆದಾಗ 17.38 ಕೋಟಿ ಅಥವಾ 24 ತಿಂಗಳುಗಳ ವೇತನವನ್ನು ಪಾವತಿಸಲು ಒಪ್ಪಿಕೊಳ್ಳಲಾಗಿತ್ತು. ಆದರೆ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಇತರರು ಈ ಪ್ಯಾಕೇಜ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ತದನಂತರ ಬನ್ಸಾಲ್ ತಾವು ಈ ಮುನ್ನ ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಮಧ್ಯಸ್ಥಿಕೆ ವ್ಯವಹಾರಕ್ಕೆ ಎಳೆದು ತಂದದ್ದಲ್ಲದೆ ಬಾಕಿ ಮೊತ್ತ ಕೊಡುವಂತೆ ಆಗ್ರಹಿಸಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.