Bengaluru City Railway ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ!

Published : Jul 11, 2022, 12:20 PM IST
Bengaluru City Railway ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ!

ಸಾರಾಂಶ

ನಗರದ ಎಲ್ಲ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಉತ್ಪನ್ನ! ಸಿಟಿ ನಿಲ್ದಾಣದ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಮಳಿಗೆಗೆ ಉತ್ತಮ ಪ್ರತಿಕ್ರಿಯೆ ಯೋಜನೆ ವಿಸ್ತರಣೆಗೆ ಚಿಂತನೆ ವಾರಾಂತ್ಯದಲ್ಲೇ 4, ತಿಂಗಳಾಂತ್ಯದಲ್ಲಿ ಎಲ್ಲಾ 11 ನಿಲ್ದಾಣದಲ್ಲಿಯೂ ತೆರೆಯಲಿವೆ ಮಳಿಗೆಗಳು ಅರ್ಜಿ ಸಲ್ಲಿಸುವವರಿಗೆ ಮುಂದಿನ ನಾಲ್ಕು ಅವಧಿ  

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಜು.11): ಸಿಟಿ ರೈಲ್ವೆ ನಿಲ್ದಾಣಕ್ಕೆ ಬಂದರೆ ಚನ್ನಪಟ್ಟಣ ಗೊಂಬೆ, ಇಳಕಲ್‌ ಸೀರೆ, ಮಲ್ಲೇಶ್ವರ ನಿಲ್ದಾಣದಲ್ಲಿ ಕಲಾತ್ಮಕ ಆಭರಣಗಳು, ಕಂಟೋನ್ಮೆಂಟ್‌ ನಿಲ್ದಾಣದಲ್ಲಿ ಬುಡಕಟ್ಟು ಜನರ ಸಿದ್ಧಪಡಿಸಿದ ಕರಕುಶಲ ಉತ್ಪನ್ನಗಳು.... - ಹೀಗೆ ಇನ್ನು ಮುಂದೆ ಬೆಂಗಳೂರಿನ ಪ್ರತಿಯೊಂದು ರೈಲ್ವೆ ನಿಲ್ದಾಣಗಳಲ್ಲಿಯೂ ಸ್ಥಳೀಯ/ಪ್ರಾದೇಶಿಕ ಉತ್ಪನ್ನಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ.

ನಗರದ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಮೂರು ತಿಂಗಳ ಹಿಂದೆ ಆರಂಭವಾದ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಗೆ ದೊರಕಿರುವ ಸಕಾರಾತ್ಮಕ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ನಗರದ ಇತರೆ 11 ನಿಲ್ದಾಣಗಳಲ್ಲಿಯೂ ಆರಂಭಿಸಲು ಬೆಂಗಳೂರು ರೈಲ್ವೆ ವಿಭಾಗವು ಮುಂದಾಗಿದೆ. ಈಗಾಗಲೇ ನಗರದ ಇತರೆ ನಾಲ್ಕು ನಿಲ್ದಾಣಗಳಲ್ಲಿ ಮಳಿಗೆಗಳು ಈ ವಾರಾಂತ್ಯದಲ್ಲಿ ತಲೆ ಎತ್ತಲಿದ್ದು, ತಿಂಗಳಾಂತ್ಯದೊಳಗೆ ಎಲ್ಲಾ ನಿಲ್ದಾಣಗಳಲ್ಲಿಯೂ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಟಿಕ್‌ಟಾಕ್‌ನಿಂದ ಫಾಲೋ ಮಿ ಉಚಿತ ಬಿಸಿನೆಸ್ ಟಿಪ್ಸ್ ಪ್ರೋಗ್ರಾಮ್

ಸ್ಥಳೀಯ ಉತ್ಪನ್ನಗಳನ್ನು ರೈಲು ನಿಲ್ದಾಣಗಳ ಮೂಲಕ ಜನಪ್ರಿಯಗೊಳಿಸಲು, ದೇಶದ ಆಹಾರ, ಸಂಸ್ಕೃತಿ ಪರಂಪರೆ ಪ್ರಯಾಣಿಕರಿಗೆ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ 2022-23ರ ಬಜೆಟ್‌ನಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆ ಘೋಷಣೆ ಮಾಡಿತ್ತು. ಈ ಯೋಜನೆಯನ್ನು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ (ಸಿಟಿ ರೈಲ್ವೆ) ಮಾಚ್‌ರ್‍ 25ರಂದು ಜಾರಿಗೊಳಿಸಲಾಗಿತ್ತು. ನಿಲ್ದಾಣ ಪ್ಲಾಟ್‌ಫಾರಂನಲ್ಲಿ ಚನ್ನಪಟ್ಟಣ ಗೊಂಬೆಗಳ ಮಳಿಗೆಯನ್ನು ಆರಂಭವಾಗಿತ್ತು. ಕಳೆದ ಮೂರು ತಿಂಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಹೀಗಾಗಿ, ಶುಕ್ರವಾರ (ಜುಲೈ 8) ಇಳಕಲ್‌ ಸೀರೆ ಮಳಿಗೆಯನ್ನು ಕೂಡಾ ಹಾಕಲಾಗಿದೆ.

ಸ್ಥಳೀಯ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ, ದೇಶದ ವಿವಿಧ ಪರಂಪರೆಗಳ ಅನುಭವವನ್ನು ಪ್ರಯಾಣಿಕರಿಗೆ ದೊರಕಿಸುವ ಮತ್ತು ಸಮಾಜದ ಬಡವರ್ಗದ ಜನರಿಗೆ ಹೆಚ್ಚುವರಿ ಆದಾಯ ಗಳಿಕೆಯ ಅವಕಾಶ ಸೃಷ್ಟಿಸುವ ಗುರಿ ಹೊಂದಿರುವ ಈ ಯೋಜನೆ ಹೆಚ್ಚು ಅನುಕೂಲಕರವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

EPF ಹೊಸ ಪ್ಲಾನ್‌, ಜುಲೈ 30ಕ್ಕೆ ದೇಶದ 73 ಲಕ್ಷ ಪಿಂಚಣಿದಾರರಿಗೆ ಸಿಗಲಿದೆ ಗುಡ್‌ನ್ಯೂಸ್‌!

ಮಳಿಗೆ ಶುಲ್ಕ 1 ಸಾವಿರ: ನಿಲ್ದಾಣದಲ್ಲಿ ಮಳಿಗೆಯನ್ನು 15 ದಿನಗಳ ಒಂದು ಅವಧಿಗೆ ಮಾತ್ರ ಒಬ್ಬರಿಗೆ ಗುತ್ತಿಗೆ ನೀಡಲಾಗುತ್ತದೆ. ಇತರೆ ಅರ್ಹರು ಕೂಡಾ ಯೋಜನೆ ಬಳಸಿಕೊಳ್ಳಬಹುದು. ಉತ್ಪನ್ನಗಳನ್ನು ಮಾರಾಟ ಮಾಡಲು ಏಜೆನ್ಸಿಗಳು, ಕುಶಲಕರ್ಮಿಗಳು, ನೇಕಾರರು, ಶಿಲ್ಪಿಗಳು, ಸ್ವಸಹಾಯ ಗುಂಪುಗಳು, ಬುಡಕಟ್ಟು ಸಹಕಾರ ಸಂಘಗಳು ಮತ್ತು ಸಮಾಜದ ಕಟ್ಟಕಡೆಯ ಹಾಗೂ ದುರ್ಬಲ ವರ್ಗಗಳಿಂದ ಅರ್ಜಿ ಸಲ್ಲಿಸಬಹುದು. 15 ದಿನಕ್ಕೆ ಒಂದು ಸಾವಿರ ರು. ಶುಲ್ಕ ಪಡೆಯಲಾಗುತ್ತದೆ. ಆಸಕ್ತರು ಸಂಬಂಧಪಟ್ಟರೈಲ್ವೆ ನಿಲ್ದಾಣಗಳ ಅಧಿಕಾರಿಯನ್ನು ಭೇಟಿ ಮಾಡಬಹುದು.

ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದರೆ ಡ್ರಾ ಮೂಲಕ ಅವುಗಳ ಆದ್ಯತಾ ಪಟ್ಟಿಯನ್ನು ತಯಾರಿಸಿ ಒಬ್ಬರ ಬಳಿಕ ಮತ್ತೊಬ್ಬರಂತೆ ಎಲ್ಲ ಅರ್ಜಿದಾರರಿಗೂ ಅವಕಾಶ ನೀಡಲಾಗುವುದು. ಪ್ರಯಾಣಿಕರನ್ನು ಸುಲಭವಾಗಿ ತಲುಪಲು ಸಾಧ್ಯವಾಗುವಂತೆ ಒಂದು ತಾತ್ಕಾಲಿಕ ಮಳಿಗೆ ಒದಗಿಸಲಾಗುವುದು. ಅವರು ತಮ್ಮ ಉತ್ಪನ್ನಗಳನ್ನು ನಿಲ್ದಾಣ ಮತ್ತು ಪ್ಲಾಟ್‌ಫಾಮ್‌ರ್‍ಜಳಲ್ಲಿಯೂ ಮಾರಾಟ ಮಾಡಬಹುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 ನಿಲ್ದಾಣಗಳು - ಯಾವ ಉತ್ಪನ್ನ?

  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಸಿಟಿ ರೈಲ್ವೆ ನಿಲ್ದಾಣ) - ಚನ್ನಪಟ್ಟಣ ಬೊಂಬೆಗಳು ಮತ್ತು ಇಳಕಲ್‌ ಸೀರೆ
  • ಯಶವಂಪುರ ಜಂಕ್ಷನ್‌ - ಚನ್ನಪಟ್ಟಣ ಬೊಂಬೆಗಳು
  • ಬೆಂಗಳೂರು ದಂಡು (ಕಂಟೋನ್ಮೆಂಟ್‌) - ಬುಡಕಟ್ಟು ಜನರು ಸಿದ್ಧಪಡಿಸಿದ ಉತ್ಪನ್ನಗಳು
  • ಕೆಂಗೇರಿ - ಚೆನ್ನಪಟ್ಟಣ ಬೊಂಬೆಗಳು
  • ಕೆ.ಆರ್‌.ಪುರ - ಬುಡಕಟ್ಟು ಜನರು ಸಿದ್ಧಪಡೆಸಿದ ಉತ್ಪನ್ನಗಳು
  • ಮಲ್ಲೇಶ್ವರ - ಕಲಾತ್ಮಕ ಆಭರಣಗಳು.
  • ಸರ್‌.ಎಂ.ವಿಶ್ವೇಶ್ವರಯ್ಯ ನಿಲ್ದಾಣ - ಕಲಾತ್ಮಕ ಆಭರಣಗಳು.
  • ಯಲಹಂಕ - ಗುಲಾಬಿ ಹೂ

ಸ್ಥಳೀಯ ಮತ್ತು ಪ್ರಾದೇಶಿಕ ಉತ್ಪನ್ನಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಗರದ ಎಲ್ಲಾ ನಿಲ್ದಾಣಗಳಲ್ಲಿಯೂ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಮಳಿಗೆ ಹಾಕಲು ಬಂದ ಅರ್ಜಿಗಳನ್ನು ಪರಿಷ್ಕರಿಸಿ ಲಾಟರಿ ಮೂಲಕ ಅರ್ಹ ವ್ಯಾಪಾರಿಗಳನ್ನು ಆಯ್ಕೆ ಮಾಡಲಾಗಿದೆ. ಈ ವಾರಾಂತ್ಯದಲ್ಲಿಯೇ ನಾಲ್ಕೈದು ನಿಲ್ದಾಣಗಳಲ್ಲಿ ಉತ್ಪನ್ನ ಮಳಿಗೆಗಳು ತಲೆ ಎತ್ತಲಿವೆ. ತಿಂಗಳಾಂತ್ಯದೊಳಗೆ ಎಲ್ಲ ನಿಲ್ದಾಣಗಳಲ್ಲಿಯೂ ಆರಂಭಿಸಲಾಗುವುದು.

-ಕುಸುಮಾ ಹರಿಪ್ರಸಾದ್‌, ಹೆಚ್ಚುವರಿ ವ್ಯವಸ್ಥಾಪಕಿ, ಬೆಂಗಳೂರು ವಿಭಾಗೀಯ ರೈಲ್ವೆ

ಅರ್ಜಿ ಸಲ್ಲಿಸುವವರಿಗೆ ಮುಂದಿನ ನಾಲ್ಕು ಅವಧಿಗಳು

  • ಮೊದಲ ಅವಧಿ ಜುಲೈ 8ರಿಂದ ಜು.22
  • ಎರಡನೇ ಅವಧಿ ಜು.23ರಿಂದ ಆಗಸ್ವ್‌ 6
  • ಮೂರನೇ ಅವಧಿ ಆಗಸ್ವ್‌ 7 ರಿಂದ ಆಗಸ್ವ್‌ 21
  • ನಾಲ್ಕನೇ ಅವಧಿ ಆಗಸ್ವ್‌ 22 ರಿಂದ ಸೆಪ್ಟೆಂಬರ್‌ 5

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ