ಅಕ್ಷಯ ತೃತೀಯಗೆ ಜ್ಯುವೆಲ್ಲರಿಗಳಿಂದ ಭರ್ಜರಿ ಆಫರ್: ಬಾಲರಾಮ ಉಡುಗೊರೆ..!

By Kannadaprabha NewsFirst Published May 8, 2024, 9:18 AM IST
Highlights

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಈ ಬಾರಿ ಅಕ್ಷಯ ತೃತೀಯದಿಂದ ಅಯೋಧ್ಯೆಯಲ್ಲಿನ ಬಾಲರಾಮನ ವಿನ್ಯಾಸದ ಬೆಳ್ಳಿ ವಿಗ್ರಹಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. 50 ಸಾವಿರ ಮೇಲ್ಪಟ್ಟು ಆಭರಣ ಖರೀದಿ ಮಾಡುವವರಿಗೆ ಬಾಲರಾಮನ ವಿಗ್ರಹವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ. 

ಬೆಂಗಳೂರು(ಮೇ.08):  ಅಕ್ಷಯ ತೃತೀಯದ (ಮೇ 10) ದಿನ ಚಿನ್ನಾಭರಣ ಖರೀದಿಗೆ ಗ್ರಾಹಕರು ಈಗಾಗಲೇ ಮುಂಗಡ ಕಾಯ್ದಿರಿಸಿದ್ದರೆ, ಹಬ್ಬದ ದಿನ ವಿಶೇಷ ರಿಯಾಯಿತಿ, ಕೊಡುಗೆಯೊಂದಿಗೆ ಗ್ರಾಹಕರನ್ನು ಸೆಳೆಯಲು ರಾಜಧಾನಿಯ ಆಭರಣ ಮಳಿಗೆಗಳು ಸಜ್ಜಾಗಿವೆ.

ದರ ಹೆಚ್ಚಳದ ನಡುವೆಯೂ ಕಳೆದ ವರ್ಷಕ್ಕಿಂತ ಶೇಕಡ 20ಕ್ಕೂ ಅಧಿಕ ಆಭರಣ ಖರೀದಿಯಾಗುವ ನಿರೀಕ್ಷೆಯಲ್ಲಿರುವ ವರ್ತಕರು, ಈ ಬಾರಿ ವಿಶೇಷವಾಗಿ ಅಯೋಧ್ಯೆ ಬಾಲ ರಾಮನ ಬೆಳ್ಳಿಯ ಚಿಕ್ಕ ಮೂರ್ತಿ, ಬಂಗಾರದ ನಾಣ್ಯಗಳನ್ನು ಗ್ರಾಹಕರಿಗೆ ನೀಡುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಚಿನ್ನ, ಬೆಳ್ಳಿಯ ಬೆಲೆ ಏರಿಕೆ ಆಗುತ್ತಿರುವುದು ಆಭರಣ ಪ್ರಿಯರಲ್ಲಿ ಚಿಂತೆ ಮೂಡಿಸಿದೆ. ಅದರಲ್ಲೂ ಹಬ್ಬದ ಮುನ್ನಾದಿನ ಹಾಗೂ ಅಕ್ಷಯ ತೃತೀಯದಂದು ಚಿನ್ನಾಭರಣದ ದರವೂ ಹೆಚ್ಚುವ ಸಾಧ್ಯತೆಯಿದೆ. ಪ್ರಸ್ತುತ ಮದುವೆ ಸೀಸನ್ ಚಾಲ್ತಿಯಲ್ಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಗದಿದ್ದರೂ, ಅಲ್ಪ ಪ್ರಮಾಣದಲ್ಲಿಯಾದರೂ ಜನರು ಆಭರಣ ಖರೀದಿಸುತ್ತಾರೆ. 

ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ದುಡ್ಡು ಮಾತ್ರವಲ್ಲ, 1.5 ಲಕ್ಷ ತನಕ ತೆರಿಗೆಯೂ ಉಳಿಯುತ್ತೆ!

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರ ಬಳಿ ಹಣದ ಚಲಾ ವಣೆಯೂ ಹೆಚ್ಚಾಗಿದೆ. ಇದರ ಜತೆಗೆ ಆಭರಣ ಮಳಿಗೆಗಳು ಗ್ರಾಹಕರನ್ನು ಸೆಳೆಯಲು ಹೆಚ್ಚು ಖರೀದಿಗೆ ರಿಯಾಯಿತಿ, ಉಚಿತ ಚಿನ್ನ ಅಥವಾ ಬೆಳ್ಳಿ ಮೇಕಿಂಗ್ ಚಾರ್ಜಸ್ ನಿಂದ ವಿನಾಯಿತಿಯಂತಹ ಕೊಡುಗೆ ಪ್ರಕಟಿಸಿವೆ. ಹೀಗಾಗಿ ಆಭರಣ ಮಳಿಗೆಗಳ ಮಾಲೀಕರು ಕಳೆದ ವರ್ಷಕ್ಕಿಂತ ಶೇ. 20 ಅಧಿಕ ಆಭರಣ ಖರೀದಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಹಬ್ಬಕ್ಕಾಗಿ ಆಭರಣ ಮಳಿಗೆಗಳು ಅದಕ್ಕಾಗಿಯೇ ಪ್ರತ್ಯೇಕವಾಗಿ 1 ಗ್ರಾಂ, 5 ಗ್ರಾಂ, 10 ಗ್ರಾಂ ಹಾಗೂ ಅದಕ್ಕೂ ಹೆಚ್ಚಿನ ತೂಕದ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್‌ನ ಚಿನ್ನದ ನಾಣ್ಯಗಳನ್ನು ಸಿದ್ದಪಡಿಸಿಟ್ಟುಕೊಂಡಿವೆ. ಗ್ರಾಹಕರನ್ನು ಸೆಳೆಯಲು ಆಕರ್ಷಕ ವಿನ್ಯಾಸಗಳ ಆಭರಣಗಳೊಂದಿಗೆ ಸಜ್ಜಾಗಿವೆ.

ಬಾಲರಾಮ ಉಡುಗೊರೆ

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಈ ಬಾರಿ ಅಕ್ಷಯ ತೃತೀಯದಿಂದ ಅಯೋಧ್ಯೆಯಲ್ಲಿನ ಬಾಲರಾಮನ ವಿನ್ಯಾಸದ ಬೆಳ್ಳಿ ವಿಗ್ರಹಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. 50 ಸಾವಿರ ಮೇಲ್ಪಟ್ಟು ಆಭರಣ ಖರೀದಿ ಮಾಡುವವರಿಗೆ ಬಾಲರಾಮನ ವಿಗ್ರಹವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ. ಆಯೋಧ್ಯೆ ಶ್ರೀ ರಾಮನ ದೇಗುಲದಲ್ಲಿ ಈ ವಿಗ್ರಹಗಳನ್ನು ಪೂಜಿಸಿ ಆಕ್ಷತೆಯೊಂದಿಗೆ ಗ್ರಾಹಕರಿಗೆ ನೀಡಲಾಗುವುದು ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಟಿ.ಎ.ಶರವಣ ತಿಳಿಸಿದ್ದಾರೆ.

click me!