
Business Desk: ಅಪ್ಪನೋ, ತಾತಾನೋ ಮಾಡಿದ ಆಸ್ತಿಯಿಲ್ಲದೆ ಸ್ವಂತ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಮುನ್ನಡೆದವರ ಕಥೆಗಳು ಸದಾ ಪ್ರೇರಣೆ ನೀಡುತ್ತವೆ. ಇಂಥ ಸ್ಫೂರ್ತಿದಾಯಕ ಕಥೆಗಳಲ್ಲಿ ಮಲಯ ದೇಬನಾಥ್ ಕೂಡ ಒಬ್ಬರು. ಪಶ್ಚಿಮ ಬಂಗಾಳದ ಪುಟ್ಟ ಹಳ್ಳಿಯಿಂದ ಬಂದಿರುವ ದೇಬನಾಥ್ ಕೇವಲ 100ರೂ. ಬಂಡವಾಳದೊಂದಿಗೆ 200 ಕೋಟಿಯ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ. ದೇಬನಾಥ್ ಅವರ ಕುಟುಂಬ ಪುಟ್ಟ ಉದ್ಯಮ ನಡೆಸುತ್ತಿತ್ತು. ಆದರೆ, ಅನಿರೀಕ್ಷಿತವಾಗಿ ಎದುರಾದ ಸಂಕಷ್ಟದಿಂದ ಅವರ ಉದ್ಯಮ ಸಂಪೂರ್ಣವಾಗಿ ನಾಶವಾಯಿತು. ಅತ್ಯಂತ ಕಷ್ಟದ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ನೆರವು ನೀಡುವ ಉದ್ದೇಶದಿಂದ ದೇಬನಾಥ್ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಕೇವಲ 100ರೂ. ಕೈಯಲ್ಲಿ ಹಿಡಿದು ದೆಹಲಿಗೆ ತೆರಳಿದ ಅವರು, ಅಲ್ಲಿ ಒಂದು ಕೇಟರಿಂಗ್ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಅಲ್ಲಿ ಪಾತ್ರೆಗಳನ್ನು ತೊಳೆಯೋದು ಹಾಗೂ ಟೇಬಲ್ ಗಳನ್ನು ಶುಚಿಗೊಳಿಸುವ ಕೆಲಸ ಮಾಡುತ್ತಾ ಕುಟುಂಬಕ್ಕೆ ನೆರವು ನೀಡುತ್ತಾರೆ. ಮುಂದೆ ಸ್ವಂತ ಕೇಟರಿಂಗ್ ಉದ್ಯಮ ಪ್ರಾರಂಭಿಸಿದ ದೇಬನಾಥ್ ಅದರಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸುತ್ತಾರೆ.
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ದೇಬನಾಥ್ ಕುಟುಂಬ ಪುಟ್ಟ ಉದ್ಯಮವನ್ನು ಹೊಂದಿತ್ತು. ಆದರೆ, ರಾಜಕೀಯ ಸಂಘರ್ಷದಲ್ಲಿ ಅವರ ಅಂಗಡಿಗೆ ಬೆಂಕಿ ಬಿದ್ದು ಸಂಪೂರ್ಣವಾಗಿ ನಾಶವಾಯಿತು. ಇದರಿಂದ ದೇಬನಾಥ್ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿತ್ತು. ಆಗ ದೇಬನಾಥ್ ಅವರಿಗೆ ಕೇವಲ ಆರು ವರ್ಷ. ಅವರ ತಂದೆ ಒಂದಿಷ್ಟು ಕಡೆ ದುಡಿದು ಮತ್ತೆ ಉದ್ಯಮ ಪ್ರಾರಂಭಿಸಿದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಉದ್ಯಮದಿಂದ ನಷ್ಟವಾಯಿತೆ ಹೊರತು ಬೇರೇನೂ ಇಲ್ಲ. ಆಗ ಕುಟುಂಬದ ಸ್ಥಿತಿ ಇನ್ನಷ್ಟು ಶೋಚನೀಯ ಹಂತಕ್ಕೆ ತಲುಪಿತು. ಆ ಸಮಯದಲ್ಲಿ ದೇಬನಾಥ್, ಅವರ ಅಕ್ಕ ಹಾಗೂ ಇಬ್ಬರು ತಮ್ಮಂದಿರು ಶಾಲೆಗೆ ಹೋಗುತ್ತಿದ್ದರು.
700 ರೂ. ಹೂಡಿ ಕೆಲಸ ಶುರುಮಾಡಿದವಳ ಗಳಿಕೆ ಈಗ ಒಂದೂವರೆ ಲಕ್ಷ !
ಕೈಯಲ್ಲಿ 100ರೂ. ಹಿಡಿದು ದೆಹಲಿಗೆ ಪಯಣ
ಈ ಸಮಯದಲ್ಲಿ ಶಿಕ್ಷಣದ ಜೊತೆಗೆ ಕುಟುಂಬದ ಸಣ್ಣ ಚಹಾದ ಅಂಗಡಿಯನ್ನು ನಡೆಸುವ ಜವಾಬ್ದಾರಿ ಕೂಡ ದೇಬನಾಥ್ ಮೇಲಿತ್ತು. ಮೂರು ವರ್ಷಗಳ ತನಕ ಶಿಕ್ಷಣದ ಜೊತೆಗೆ ಉದ್ಯಮವನ್ನು ಕೂಡ ದೇಬನಾಥ್ ಸಂಭಾಳಿಸಿದರು. ಆ ಬಳಿಕ 12ನೇ ತರಗತಿ ಡಿಪ್ಲೋಮಾ ಮುಗಿಯುತ್ತಿದ್ದಂತೆ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ತಾಯಿಯಿಂದ 100ರೂ. ಪಡೆದು ದೆಹಲಿಗೆ ತೆರಳಿದರು. ಅಲ್ಲಿ ಕೇಟರಿಂಗ್ ಉದ್ಯಮವೊಂದರಲ್ಲಿ ಕೆಲಸಕ್ಕೆ ಸೇರಿದರು. ಪಾತ್ರೆ ತೊಳೆಯೋದು ಹಾಗೂ ಟೇಬಲ್ ಸ್ವಚ್ಛ ಮಾಡುವ ಕೆಲಸ ಮಾಡಿದರು. ಈ ಸಮಯದಲ್ಲಿ ಇವರ ಕೆಲಸ ನೋಡಿ ಮಾಲೀಕರಿಗೆ ಮೆಚ್ಚುಗೆಯಾಯಿತು. ಹೀಗಾಗಿ ವೇತನವನ್ನು 500ರೂ.ನಿಂದ 3,000ರೂ.ಗೆ ಏರಿಕೆ ಮಾಡಿದರು. ಮನೆಗೆ ಹಣ ಕಳುಹಿಸಲು ದೇಬನಾಥ್ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು.
ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಸೇರ್ಪಡೆ
ಕೇಟರಿಂಗ್ ಉದ್ಯೋಗ ತೊರೆದು ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಸೇರಿದರು. ಹಾಗೆಯೇ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಐಟಿಡಿಸಿ ಕೋರ್ಸ್ ಪೂರ್ಣಗೊಳಿಸಿದರು. ಈ ಸಮಯದಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕವು. ಹೆಚ್ಚು ಜನರ ಸಂಪರ್ಕ ಕೂಡ ಬೆಳೆಯಿತು. ಇದೇ ಸಂಪರ್ಕ ಮುಂದೆ ದೇಬನಾಥ್ ಸ್ವಂತ ಕೇಟರಿಂಗ್ ಉದ್ಯಮ ಪ್ರಾರಂಭಿಸಿದಾಗ ನೆರವಿಗೆ ಬಂದಿತ್ತು.
ತಳ್ಳುಗಾಡಿಯಲ್ಲಿಐಸ್ ಕ್ರೀಮ್ ಮಾರುತ್ತಿದ್ದ ವ್ಯಕ್ತಿ ಈಗ ಭಾರತದ ಶ್ರೀಮಂತ ಉದ್ಯಮಿ;ಈತನ ಸಂಪತ್ತು19,140 ಕೋಟಿ
ದೇಬನಾಥ್ ಕೇಟರರ್ಸ್ ಆಂಡ್ ಡೆಕೋರೇಟರ್ಸ್
ಕೇಟರಿಂಗ್ ಹಾಗೂ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವದಿಂದ ದೇಬನಾಥ್ ಸ್ವಂತ ಉದ್ಯಮ ಪ್ರಾರಂಭಿಸಿದರು. ದೇಬನಾಥ್ ಕೇಟರರ್ಸ್ ಆಂಡ್ ಡೆಕೋರೇಟರ್ಸ್ ಪ್ರಾರಂಭಿಸಿದರು. ಈ ಉದ್ಯಮ ಯಶಸ್ಸು ಗಳಿಸುವ ಜೊತೆಗೆ ಅವರಿಗೆ ಲಾಭವನ್ನು ಕೂಡ ತಂದು ಕೊಟ್ಟಿತು.
200 ಕೋಟಿ ಆಸ್ತಿ
ಪ್ರಸ್ತುತ ದೇಬನಾಥ್ ಅವರ ಕೇಟರಿಂಗ್ ಸಂಸ್ಥೆ ದೆಹಲಿ, ಪುಣೆ, ಅಜ್ಮೇರ್ ಹಾಗೂ ಗ್ವಾಲಿಯರ್ ನಲ್ಲಿ 35 ಸೇನಾ ಮೆಸ್ ಸೌಲಭ್ಯಗಳನ್ನು ನಿರ್ವಹಣೆ ಮಾಡುತ್ತಿದೆ. ಈ ಯಶಸ್ವಿನಿಂದ ದೇಬನಾಥ್ 200 ಕೋಟಿ ರೂ. ನಿವ್ವಳ ಸಂಪತ್ತು ಗಳಿಸಿದ್ದಾರೆ. ಇದರಲ್ಲಿ ಉತ್ತರ ಬೆಂಗಾಳದಲ್ಲಿನ ಚಹಾ ತೋಟ ಕೂಡ ಸೇರಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.