ಅಯೋಧ್ಯೆಯಲ್ಲಿ ಶುರುವಾಗ್ಬಹುದು KFC; ಆದ್ರೆ ಇದೆ ಒಂದು ಷರತ್ತು !

By Suvarna NewsFirst Published Feb 8, 2024, 3:06 PM IST
Highlights

ಅಯೋಧ್ಯೆ ರಾಮ ಮಂದಿರ ಈಗ ಪ್ರವಾಸಿಗರ ಆಕರ್ಷಣೀಯ ಕೇಂದ್ರ. ಭಕ್ತರ ಸಂಖ್ಯೆ ಹೆಚ್ಚಾಗ್ತಿದ್ದಂತೆ ಆಹಾರ ಮಳಿಗೆಗಳು ತಲೆ ಎತ್ತುತ್ತಿವೆ. ಫಿಜ್ಜಾ, ಬರ್ಗರ್ ಭಕ್ತರನ್ನು ಸೆಳೆಯುತ್ತಿದೆ. ಚಿಕನ್ ಗೆ ಪ್ರಸಿದ್ಧಿಯಾಗಿರುವ ಕೆಎಫ್ ಸಿ ಗಮನ ಈಗ ಅಯೋಧ್ಯೆ ಮೇಲಿದೆ. 

ರಾಮನಗರಿ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆದಿದೆ. ಐದು ನೂರು ವರ್ಷಗಳ ಜನರ ಕನಸು ಈಡೇರಿದೆ. ಪ್ರಾಣ ಪ್ರತಿಷ್ಠೆ ಕಾರ್ಯ ಪೂರ್ಣಗೊಂಡ ನಂತ್ರ ಅಯೋಧ್ಯೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ದಿನ ಲಕ್ಷಾಂತರ ಮಂದಿ, ರಾಮನ ದರ್ಶನಕ್ಕೆ ಬರ್ತಿದ್ದಾರೆ. ಅಯೋಧ್ಯೆಗೆ ಭಕ್ತರ ಸಂಖ್ಯೆ ಹೆಚ್ಚಾಗ್ತಿದ್ದಂತೆ ವ್ಯಾಪಾರಸ್ಥರ ಕಣ್ಣು ಅಯೋಧ್ಯೆ ಮೇಲೆ ಬಿದ್ದಿದೆ. ಅನೇಕ ದೊಡ್ಡ ದೊಡ್ಡ ಕಂಪನಿಗಳು ಅಯೋಧ್ಯೆಯಲ್ಲಿ ತಮ್ಮ ಶಾಖೆ ಶುರು ಮಾಡುವ ತಯಾರಿಯಲ್ಲಿವೆ. ಅಯೋಧ್ಯೆಯಲ್ಲಿ ಆಹಾರ ಮಳಿಗೆಗಳ ಸಂಖ್ಯೆ ಕೂಡ ಹೆಚ್ಚಾಗಿದೆ. 

ಈಗ ಅಮೆರಿಕನ್ ಫಾಸ್ಟ್ ಫುಡ್ ಚೈನ್ ಕೆಂಟುಕಿ ಫ್ರೈಡ್ ಚಿಕನ್ (KFC) ಅಯೋಧ್ಯೆಯಲ್ಲಿ ಶಾಖೆ ತೆರೆಯಲು ಆಸಕ್ತಿ ತೋರಿದೆ. ಕೆಎಫ್ ಸಿ ಶಾಖೆ ತೆರೆಯಲು ಯಾವುದೇ ಸಮಸ್ಯೆ ಇಲ್ಲ. ಆದ್ರೆ ಒಂದು ಷರತ್ತನ್ನು ಅದು ಪಾಲಿಸಬೇಕಾಗುತ್ತದೆ. 

ಸಾಲಗಾರರಿಗೆ ಈ ಬಾರಿಯೂ ಇಎಂಐ ಹೆಚ್ಚಳದ ಚಿಂತೆ ಇಲ್ಲ; ರೆಪೋ ದರ ಬದಲಾಯಿಸದ ಆರ್ ಬಿಐ

ಪವಿತ್ರ ನಗರವಾಗಿರುವುದರಿಂದ ಅಯೋಧ್ಯೆ (Ayodhya) ಯಿಂದ 15 ಕಿಮೀ ಯಾತ್ರಾಸ್ಥಳದೊಳಗೆ ಮಾಂಸ ಮತ್ತು ಮದ್ಯ ಎರಡನ್ನೂ ನಿಷೇಧಿಸಲಾಗಿದೆ. ಇಲ್ಲಿರುವ ಯಾವುದೇ ಉಪಾಹಾರ ಗೃಹವು ಮಾಂಸ (Meat) ವನ್ನು ನೀಡುವಂತಿಲ್ಲ. ನಿರ್ಬಂಧಿತ ಕ್ಷೇತ್ರದಿಂದ ಹೊರಗೆ ಮಾಂಸಹಾರವನ್ನು ಮಾರಾಟ ಮಾಡಬಹುದು. ಒಂದ್ವೇಳೆ ಈ ನಿರ್ಬಂಧಿತ ಪ್ರದೇಶದಲ್ಲಿ ಕೆಎಫ್ ಸಿ ತನ್ನ ಶಾಖೆ ಶುರು ಮಾಡುತ್ತಿದ್ದಲ್ಲಿ  ಅದು ತನ್ನ ಶಾಖೆಯಲ್ಲಿ ಮಾಂಸಹಾರ ನೀಡುವಂತಿಲ್ಲ. ಚಿಕನ್ ಗೆ ಫೇಮಸ್ ಆಗಿರುವ ಕೆಎಫ್ ಸಿ, ಅಯೋಧ್ಯೆ ಶಾಖೆಯಲ್ಲಿ ಚಿಕನ್ ಸೇರಿದಂತೆ ಯಾವುದೇ ಮಾಂಸಾಹಾರ ನೀಡುವಂತಿಲ್ಲ. ಸಸ್ಯಹಾರವನ್ನು ಮಾತ್ರ ಕೆಎಫ್ ಸಿ ಒದಗಿಸುತ್ತದೆ ಎಂದಾದ್ರೆ ನಾವು ಸ್ಥಳ ನೀಡಲು ಸಿದ್ಧರಿದ್ದೇವೆ ಎಂದು ಅಯೋಧ್ಯೆಯ ಸರ್ಕಾರಿ ಅಧಿಕಾರಿ ವಿಶಾಲ್ ಸಿಂಗ್ ಹೇಳಿದ್ದಾರೆ. ಸದ್ಯ ಕೆಎಫ್ ಸಿ ಶಾಖೆಯು ಅಯೋಧ್ಯೆ-ಲಖನೌ ಹೆದ್ದಾರಿಯಲ್ಲಿದೆ. ಅಲ್ಲಿ ಮಾಂಸಹಾರವನ್ನು ನೀಡಲಾಗುತ್ತಿದೆ. 

ಬರ್ಗರ್ ಕಂಪನಿಯಿಂದ ಬಂಪರ್ ಆಫರ್… ನೀವೂ ಭಾಗವಹಿಸಿ 8 ಕೋಟಿ ಗೆಲ್ಲಿ

ಸದ್ಯ ಅಯೋಧ್ಯೆಗೆ ಎರಡು ಲಕ್ಷಕ್ಕಿಂತಲೂ ಹೆಚ್ಚು ಜನರು ಬರ್ತಿದ್ದಾರೆ. ಈಗಾಗಲೇ ಅಲ್ಲಿ ಫಿಜ್ಜಾ, ಬರ್ಗರ್ ಶಾಪ್ ಗಳು ತಲೆ ಎತ್ತಿವೆ. ಡೊಮಿನೋಸ್ ಫಿಜ್ಜಾ ಮಳಿಗೆ ಕೂಡ ಅಲ್ಲಿದೆ. ರಾಮ ಮಂದಿರದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಡೊಮಿನೋಸ್ ಫಿಜ್ಜಾ ಮಳಿಗೆ ಇದೆ. ಇದನ್ನು ನಡೆಸುತ್ತಿರುವ ದಿನೇಶ್ ಯಾದವ್, ಡೊಮಿನೋಸ್ ಫಿಜ್ಜಾದಲ್ಲಿ ಮಾಂಸಹಾರದ ಫಿಜ್ಜಾ ಮಾರಾಟ ಮಾಡುತ್ತಿಲ್ಲ. ಆದ್ರೂ ಮಳಿಗೆಗೆ ಬರ್ತಿರುವ ಗ್ರಾಹಕರ ಸಂಖ್ಯೆ ಕಡಿಮೆ ಆಗಿಲ್ಲ ಎಂದಿದ್ದಾರೆ. ಮೊದಲ ದಿನವೇ ಐದು ಸಾವರಿ ರೂಪಾಯಿ ವ್ಯವಹಾರವನ್ನು ಡೊಮಿನೋಸ್ ಫಿಜ್ಜಾ ಮಾಡಿದೆ. ಇನ್ನೂ ಕಟ್ಟಡದ ಕಾರ್ಯ ನಡೆಯುತ್ತಿದ್ದು, ಆದ್ರೂ ಗ್ರಾಹಕರ ಸಂಖ್ಯೆ ಕಡಿಮೆ ಆಗಿಲ್ಲ. ಇದು ಅಯೋಧ್ಯೆಯಲ್ಲಿ ಶುರುವಾದ ಮೊದಲ ಮಳಿಗೆ ಎಂದು ದಿನೇಶ್ ಹೇಳಿದ್ದಾರೆ. 

ಅಯೋಧ್ಯೆ ವ್ಯಾಪಾರಸ್ಥರಿಗೆ ಒಳ್ಳೆಯ ಆದಾಯ ತಂದುಕೊಂಡ್ತಿದೆ. ಡೊಮಿನೋಸ್ ಜೊತೆ ಫಿಜ್ಜಾ ಹಟ್ ಕೂಡ ಇಲ್ಲಿ ತಲೆ ಎತ್ತಿದೆ. ರಾಮಲಾಲಾ ಪ್ರಾಣ ಪ್ರತಿಷ್ಠೆಗೆ ಮೂರು ತಿಂಗಳ ಮೊದಲು ಫಿಜ್ಜಾ ಹಟ್ ಶುರುವಾಗಿದೆ. ದೇವಸ್ಥಾನಕ್ಕಿಂತ ಎಂಟು ಕಿಲೋಮೀಟರ್ ದೂರದಲ್ಲಿ ನೀವು ಫಿಜ್ಜಾ ಹಟ್ ನೋಡಬಹುದು. 

ಏಪ್ರಿಲ್ 17ರಂದು ರಾಮನವಮಿ ಇರುವ ಕಾರಣ ಅಯೋಧ್ಯೆಗೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವಾರಕ್ಕೆ ಹನ್ನೆರಡು ಲಕ್ಷ ಜನ ಬರುವ ನಿರೀಕ್ಷೆ ಇದೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು, ಆಹಾರ ವ್ಯವಸ್ಥೆಗೆ ಫುಡ್ ಫ್ಲಾಜಾ ಆರಂಭಿಸುವ ಯೋಜನೆಯನ್ನು ಸ್ಥಳೀಯ ಸರ್ಕಾರ ಮಾಡ್ತಿದೆ. 

click me!