Karnataka Education budget 2022: ಶೈಕ್ಷಣಿಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸರಕಾರಿ ಶಾಲೆಗಳ ಅಭಿವೃದ್ದಿಗೆ 500 ಕೋಟಿ ಘೋಷಣೆ

By Suvarna NewsFirst Published Mar 4, 2022, 1:27 PM IST
Highlights

ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ಬಜೆಟ್ 2022-23ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಏನೆಲ್ಲಾ ಘೋಷಣೆ ಮಾಡಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು (ಮಾ.04): ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ (Basavaraj Bommai) ಶುಕ್ರವಾರ ಮಂಡಿಸಿರುವ ಕರ್ನಾಟಕ ಬಜೆಟ್ 2022-23ರಲ್ಲಿ (karnataka budget 2022-23) ಶಿಕ್ಷಣ ಕ್ಷೇತ್ರಕ್ಕೆ (Education sector) ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ದಿಗೆ 500 ಕೋಟಿ ರೂ ಅನುದಾನ ಮೀಸಲಿಡಲಾಗಿದ್ದು, ಇದು ರಾಜ್ಯದಲ್ಲಿ ಮೊದಲ ಬಾರಿಗೆ ಎಂದು ಬೊಮ್ಮಾಯಿ ಬಜೆಟ್ ವೇಳೆ ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2022ರ ಪ್ರಕಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ವಯಸ್ಕ ಶಿಕ್ಷಣ ಕ್ಷೇತ್ರಗಳಿಗೆ ನೂತನ ಪಠ್ಯಕ್ರಮ ರಚನೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳಾಗಿ ಮೂಲಭೂತ ಸೌಕರ್ಯವಿರುವ ಶಾಲೆಗಳ ಉನ್ನತೀಕರಣದ ಯೋಜನೆ. ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪೀಠೋಪಕರಣ ಒದಗಿಸಲು 100 ಕೋಟಿ ರೂ ಮೀಸಲಿಡಲಾಗಿದೆ. "ನೋಡಿ ಕಲಿ ಮಾಡಿ ತಿಳಿ" ಯೋಜನೆಯಡಿ ಕರ್ನಾಟಕದ 169 ಸರಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್ -ಇನ್-ಎ-ಕಿಟ್ ವಿತರಣೆ ಮಾಡಲು ಕಾರ್ಯಕ್ರಮ ಯೋಜಿಸಲಾಗಿದೆ.

ಕರ್ನಾಟಕ ಬಜೆಟ್ ಲೈವ್ ಅಪ್ಡೇಟ್ ಇಲ್ಲಿದೆ

ರಾಜ್ಯದ ಏಳು ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು  ಕರ್ನಾಟಕ ತಂತ್ರಜ್ಞಾನ ಸಂಸ್ಥೆ (Karnataka Institute of Technology) ಗಳನ್ನಾಗಿ ಉನ್ನತೀಕರಣ ಮಾಡಲು ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬೊಮ್ಮಾಯಿ ಬಜೆಟ್ ನಲ್ಲಿ ತಿಳಿಸಿದ್ದಾರೆ. ಚಾಮರಾಜನಗರ, ಬೀದರ್ , ಹಾವೇರಿ , ಹಾಸನ, ಕೊಡಗು , ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ವಿನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ.

ಮಿಕ್ಕಂತೆ, ಸ್ನಾತ ಕೋತ್ತರ ವೈದ್ಯಕೀಯ ಕೋರ್ಸ್ ಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ.  ಜೊತೆಗೆ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪ್ರಾರಂಭಿಸಲಾಗುವುದು.  ಸವಣೂರಿನಲ್ಲಿ ಹೊಸ ಆಯುರ್ವೆದ ಕಾಲೇಜು ಸ್ಥಾಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. 

ಬಡವರಿಗೆ ಕೂಡ ವೈದ್ಯಕೀಯ ಶಿಕ್ಷಣ ಅವಕಾಶ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದ್ದು, ಎಲ್ಲಾ ತಾಲೂಕಿನಲ್ಲಿ ನೀಟ್ ಪರೀಕ್ಷಾ ತರಬೇತಿ, ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಚಿಸುವ ಬಡ ವಿದ್ಯಾರ್ಥಿಗಳಿಗೆ ಬ್ಯಾಂಕ್‌ನಿಂದ ಶೈಕ್ಷಣಿಕ  ಸಾಲ ಒದಗಿಸುವ ನೆರವು ನೀಡಲಾಗುವುದೆಂದು ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಿಸಿದ್ದಾರೆ.

2021-22ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ 15,000  ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದಿಸಿದ್ದು,  ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಶಿಕ್ಷಕರ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಆಗುವವರೆಗೆ ಸುಮಾರು 27,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ  ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ.

KARNATAKA BUDGET 2022: ಕರ್ನಾಟಕದ ಅಭಿವೃದ್ಧಿಗಾಗಿ ಯಾವ ಇಲಾಖೆಗೆ ಎಷ್ಟು ಅನುದಾನ?

ಕೆ.ಪಿ.ಎಸ್.ಸಿ., ಯು.ಪಿ.ಎಸ್.ಸಿ., ಎಸ್.ಎಸ್.ಸಿ., ಬ್ಯಾಂಕಿಂಗ್, ರೈಲ್ವೆ, ಸಿ.ಡಿ.ಎಸ್., ನೀಟ್, ಜೆಇಇ ಮುಂತಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ "ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ" ಎಂಬ ಹೊಸ ಯೋಜನೆಯಡಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ವೇದಿಕೆಯ ಮೂಲಕ ಉಚಿತ ಕೋಚಿಂಗ್ ಸೌಲಭ್ಯವನ್ನು ನೀಡಲಾಗುವುದು. 

ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ರಾಜ್ಯಮಟ್ಟದ "ಆದರ್ಶ ಶಿಕ್ಷಕ/ಶಿಕ್ಷಕಿ" ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುವುದು. ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಇನ್ನಷ್ಟು ಬಲಪಡಿಸಲು ಹಾಗೂ ಮತ್ತಷ್ಟು ರಚನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. 

ವಿದ್ಯಾರ್ಥಿನಿಯರಲ್ಲಿ ಋತು ಚಕ್ರದ ನೈರ್ಮಲ್ಯವನ್ನು ಕಾಪಾಡಲು ಕ್ರಮವಹಿಸಲಾಗುವುದು. ಶುಚಿ ಯೋಜನೆಯಡಿಯಲ್ಲಿ ಸುಮಾರು 19 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪಕಿನ್‍ಗಳನ್ನು ವಿತರಿಸುತ್ತಿದ್ದು,  ಇದೀಗ ಮಧ್ಯಪ್ರದೇಶ ರಾಜ್ಯದ ಮಾದಯಲ್ಲಿ ಮೆನ್‍ಸ್ಟ್ರುಂವಲ್ ಕಪ್ (ಮುಟ್ಟಿನ ಕಪ್) ಗಳನ್ನು ವಿತರಿಸಲಾಗುವುದು.


 

click me!