ಬೆಂಗಳೂರು: ಪೀಣ್ಯ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ನೀರಿನ ಸಂಸ್ಕರಣೆಗೆ ಜಪಾನ್ ಟೆಕ್ನಾಲಜಿ ಬಳಕೆ

By Sathish Kumar KHFirst Published Apr 16, 2024, 9:37 PM IST
Highlights

ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಎಲ್ಲ ಕೈಗಾರಿಕೆಗಳಿಗೆ ರಾಸಾಯನಿಕ ತ್ಯಾಜ್ಯ ನೀರಿನ ಸಂಸ್ಕರಣೆಗೆ ಜಪಾನ್ ಟೆಕ್ನಾಲಜಿ ಬಳಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಬೆಂಗಳೂರು (ಏ.16): ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತಿರುವ ರಾಸಾಯನಿಕ ತ್ಯಾಜ್ಯ ನೀರನ್ನು  ಸಂಸ್ಕರಣೆ ಮಾಡುವುದಕ್ಕಾಗಿ ಜಪಾನೀಸ್‌ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ವಿಶ್ವದ ಪ್ರಮುಖ ಪರಿಸರ ಸ್ನೇಹೀ ಕೈಗಾರಿಕಾ ಪ್ರದೇಶವನ್ನಾಗಿಸಲು ಬೆಂಗಳೂರು ಜಲಮಂಡಳಿ ಮುಂದಾಗಿದೆ. 

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಜಲಮಂಡಳಿ ವತಿಯಿಂದ ವಿಶೇಷವಾಗಿ ಆಹ್ವಾನಿಸಲಾಗಿದ್ದ ಜಪಾನ್‌ ಮೂಲದ ತಂತ್ರಜ್ಞಾನ ಸಂಸ್ಥೆಯ ಪ್ರತಿನಿಧಿಯೊಂದಿಗೆ ಭೇಟಿ ನೀಡಿದ ಜಲಮಂಡಳಿ ಅಧ್ಯಕ್ಷ ಡಾ ರಾಮ್‌ ಪ್ರಸಾತ್‌ ಮನೋಹರ್‌, ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ತ್ಯಾಜ್ಯ ನೀರು ಉತ್ಪಾದನೆ ಹಾಗೂ ಅದರ ನಿರ್ವಹಣೆಯ ಬಗ್ಗೆ ವಿಸ್ತ್ರುತ ಮಾಹಿತಿಯನ್ನು ಪಡೆದುಕೊಂಡರು. ಪೀಣ್ಯ ಕೈಗಾರಿಕಾ ಪ್ರದೇಶ ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ ಹಲವಾರು ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯ ನೀರನ್ನು  ಉತ್ಪತ್ತಿ ಮಾಡುತ್ತವೆ. ಕೆಲವು ದೊಡ್ಡ ಸಂಸ್ಥೆಗಳು ತಮ್ಮದೇ ಆದ ಇ.ಟಿ.ಪಿಯನ್ನು ಹೊಂದಿದ್ದು ಅದರ ಮೂಲಕ ಸಂಸ್ಕರಣೆ ಮಾಡುತ್ತಿವೆ. 

ಆದರೆ ಹೆಚ್ಚಿನ ಸಂಖ್ಯೆಯಲ್ಲಿರುವಂತಹ ಹಲವಾರು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು, ತಮ್ಮದೇ ಆದ ಸಂಸ್ಕರಣಾ ವ್ಯವಸ್ಥೆಯನ್ನು ಹೊಂದದೆ ಬೇರೆ ಮಾರ್ಗಗಳ ಮೂಲಕ  ತ್ಯಾಜ್ಯ ನೀರು ವಿಲೇವಾರಿ ಮಾಡುತ್ತಿವೆ. ಇದು ಹೆಚ್ಚು ಖರ್ಚು ಆಗುವ ವ್ಯವಸ್ಥೆಯಾಗಿದೆ. ಅಲ್ಲದೇ, ನೀರಿಗೆ ಹೆಚ್ಚಿನ ಖರ್ಚನ್ನು ಭರಿಸುವುದರ ಮೂಲಕ ಉದ್ದಿಮೆಗಳು ತಮ್ಮ ಲಾಭದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಸಂಸ್ಕರಣೆ ಇಲ್ಲದೆ ಭೂಮಿಗೆ ಸೇರುವ ಕಲುಷಿತ ನೀರಿನಿಂದ  ಜಲಮೂಲಗಳು ಹಾಗೂ ಅಂತರ್ಜಲ ಕಲುಷಿತವಾಗುತ್ತಿದೆ. 

ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್‌ ಏರಿಯಾ ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರು ಪೂರೈಕೆ; ರಾಮ್ ಪ್ರಸಾತ್ ಮನೋಹರ್

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಜಪಾನ ತಂತ್ರಜ್ಞಾನದ ಮೊಬೈಲ್‌ ಇ.ಟಿ.ಪಿ ಅಳವಡಿಸಲು ಜಲಮಂಡಳಿ ಮುಂದಾಗಿದೆ. ಈ ಮೊಬೈಲ್‌ ಇ.ಟಿ.ಪಿ ಕೈಗಾರಿಕೆಗಳ ಬಾಗಿಲಿನಲ್ಲೇ ರಾಸಾಯನಿಕ ತ್ಯಾಜ್ಯ ನೀರನ್ನು  ಸಂಸ್ಕರಣೆ ಮಾಡಲಿದ್ದು, ಸಂಸ್ಕರಿಸಿದ ನೀರನ್ನ ಮರುಬಳಕೆಗೆ ಕೈಗಾರಿಕೆಗಳಿಗೆ ವಾಪಸ್‌ ನೀಡಲಿದೆ. ಇದರಿಂದ ಕೈಗಾರಿಕೆಗಳಿಗೆ ನೀರಿನ ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಕಡಿಮೆ ದರದಲ್ಲಿ ಗ್ರಾಹಕರಿಗೆ ಉತ್ಪನ್ನ ನೀಡಬಹುದು. ಅಲ್ಲದೇ, ಪರಿಸರ ಸ್ನೇಹಿ ಉದ್ದಿಮೆಯಾಗಿ ಬೆಳೆಯಲು ಸಹಾಯ ಮಾಡಲಿದೆ. 

ಈ ತಂತ್ರಜ್ಞಾನದ ಪ್ರದರ್ಶನವನ್ನು ಏಪ್ರಿಲ್‌ 23 ರಂದು ಆಯೋಜಿಸಲಾಗುವುದು. ಮೂರು ದಿನಗಳ ಕಾಲ ವಿವಿಧ ಕೈಗಾರಿಕೆಗಳ ಬಾಗಿಲಿಗೆ ತೆರಳಲಿರುವ ಮೊಬೈಲ್‌ ಇ.ಟಿ.ಪಿ ಕೈಗಾರಿಕೆಗಳಿಗೆ ಆಗುವ ಅನುಕೂಲತೆಯ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಿದೆ. ಈ ಎಲ್ಲಾ ಕ್ರಮಗಳ ಅಳವಡಿಕೆಯ ಮೂಲಕ ಜಲಮಾಲಿನ್ಯವನ್ನು ತಡೆಗಟ್ಟಿ ವಿಶ್ವದ ಪ್ರಮುಖ ಪರಿಸರ ಸ್ನೇಹೀ ಕೈಗಾರಿಕಾ ಪ್ರದೇಶ ಮಾಡುವ ಗುರಿ ಜಲಮಂಡಳಿಯದ್ದಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು. 

ರಾಯಲ್ ಲೇಕ್ ಫ್ರೆಂಟ್ ರೆಸಿಡೆನ್ಸಿಗೆ ಡಿಮ್ಯಾಂಡ್ ನೋಟಿಸ್ ಕೊಟ್ಟ ಬೆಂಗಳೂರು ಜಲಮಂಡಳಿ; ಹಣ ಕಟ್ಟಿದರಷ್ಟೇ ನೀರು!

ಈ ಸಂಧರ್ಭದಲ್ಲಿ ಪೀಣ್ಯ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಆರೀಫ್‌, ನಿಯೋಜಿತ ಅಧ್ಯಕ್ಷರಾದ ಶಿವಕುಮಾರ್, ACE ಸಂಸ್ಥೆಯ ಟಿ ಕೆ ರಮೇಶ್,  ಜಪಾನ್ ಸಂಸ್ಥೆಯ ಪ್ರತಿನಿಧಿ  ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಜಲಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

click me!