
ನವದೆಹಲಿ (ಫೆ.1): ಕೇಂದ್ರ ಸರ್ಕಾರವು ದಶಕಗಳ ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ, ಹೊಸ 'ಆದಾಯ ತೆರಿಗೆ ಕಾಯ್ದೆ 2025' ಅನ್ನು ಪರಿಚಯಿಸಿದೆ. ಇದು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ವಿವಿಧ ವ್ಯವಸ್ಥೆಗಳು ಮತ್ತು ಅನುಸರಣೆಯನ್ನು ಸರಾಗಗೊಳಿಸುವ ಮತ್ತು ಮೊಕದ್ದಮೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಾ ಘೋಷಿಸಿದರು.
ಈ ಬಾರಿಯ ಬಜೆಟ್ನಲ್ಲಿ ವೈಯಕ್ತಿಕ ಆದಾಯ ತೆರಿಗೆಯ ದರ ಅಥವಾ ಸ್ಲ್ಯಾಬ್ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
ತೆರಿಗೆ ಸಲ್ಲಿಕೆಯನ್ನು ಸುಲಭಗೊಳಿಸಲು ಸರ್ಕಾರವು ಹಂತ-ಹಂತದ (Staggered) ಸಮಯವನ್ನು ನಿಗದಿಪಡಿಸಿದೆ:
ವೈಯಕ್ತಿಕ ಸಲ್ಲಿಕೆ (ITR 1 ಮತ್ತು 2): ಜುಲೈ 31ರವರೆಗೆ ಕಾಲಾವಕಾಶವಿರುತ್ತದೆ.
ಉದ್ಯಮ ಮತ್ತು ಟ್ರಸ್ಟ್ (Non-audit cases): ಆಗಸ್ಟ್ 31ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ತಿದ್ದುಪಡಿ (Revised Returns): ಈ ಮೊದಲು ಡಿಸೆಂಬರ್ 31ಕ್ಕೆ ಇದ್ದ ಕಾಲಾವಕಾಶವನ್ನು ಮಾರ್ಚ್ 31ರವರೆಗೆ ಹೆಚ್ಚಿಸಲಾಗಿದೆ (ಅಲ್ಪ ಮೊತ್ತದ ದಂಡದೊಂದಿಗೆ).
ಹೊಸ ಕಾನೂನಿನಲ್ಲಿ ಸೆಕ್ಷನ್ಗಳ ಸಂಖ್ಯೆಯನ್ನು ಶೇ. 50 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಕಾನೂನು ಗೋಜಲುಗಳು ತಪ್ಪಲಿವೆ.
ಇನ್ಮುಂದೆ 'Assessment Year' ಮತ್ತು 'Previous Year' ಎಂಬ ಗೊಂದಲ ಇರುವುದಿಲ್ಲ. ಬದಲಾಗಿ ಕೇವಲ 'Tax Year' (ತೆರಿಗೆ ವರ್ಷ) ಎಂಬ ಒಂದೇ ವ್ಯವಸ್ಥೆ ಇರಲಿದೆ.
ನಿಗದಿತ ದಿನಾಂಕದ ನಂತರ ಐಟಿಆರ್ ಸಲ್ಲಿಸಿದರೂ ದಂಡವಿಲ್ಲದೆ ಟಿಡಿಎಸ್ (TDS) ಮರುಪಾವತಿ ಪಡೆಯಲು ಅವಕಾಶ ನೀಡಲಾಗಿದೆ.
ಅಪಘಾತ ಪರಿಹಾರ: ಮೋಟಾರು ವಾಹನ ಅಪಘಾತ ವಿಮಾ ನ್ಯಾಯಮಂಡಳಿಯಿಂದ (MACT) ವ್ಯಕ್ತಿಗಳಿಗೆ ಸಿಗುವ ಬಡ್ಡಿಗೆ ತೆರಿಗೆ ಇರುವುದಿಲ್ಲ.
ವಿದೇಶಿ ಪ್ರವಾಸ ಮತ್ತು ಶಿಕ್ಷಣ: ವಿದೇಶಿ ಪ್ರವಾಸ ಪ್ಯಾಕೇಜ್ಗಳು ಹಾಗೂ ವಿದೇಶಿ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಯ ಹಣ ವರ್ಗಾವಣೆ ಮೇಲಿನ ಟಿಸಿಎಸ್ (TCS) ದರವನ್ನು ಶೇ. 2 ಕ್ಕೆ ಇಳಿಸಲಾಗಿದೆ.
ವಿದೇಶಿ ಆಸ್ತಿ ಬಹಿರಂಗ: 20 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ವಿದೇಶಿ ಆಸ್ತಿ ಬಹಿರಂಗಪಡಿಸದಿದ್ದಲ್ಲಿ ಅಕ್ಟೋಬರ್ 1, 2024ರಿಂದ ಅನ್ವಯವಾಗುವಂತೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ.
ಸಣ್ಣಪುಟ್ಟ ತಪ್ಪುಗಳಿಗಾಗಿ ಜೈಲು ಶಿಕ್ಷೆ ವಿಧಿಸುವುದನ್ನು ನಿಲ್ಲಿಸಿ, ಕೇವಲ ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ದಾಖಲೆ ಪತ್ರಗಳ ಹಾಜರುಪಡಿಸುವಿಕೆಯಲ್ಲಿನ ವಿಳಂಬದಂತಹ ಸಣ್ಣ ತಪ್ಪುಗಳನ್ನು ಇನ್ಮುಂದೆ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.