ನೋಟ್ ಬ್ಯಾನ್ ವೇಳೆ ಸತ್ತವರೆಷ್ಟು?: ‘ಸತ್ಯ’ಬಾಯ್ಬಿಟ್ಟ ಕೇಂದ್ರ!

By Web DeskFirst Published Dec 19, 2018, 3:02 PM IST
Highlights

ನೋಟ್ ಬ್ಯಾನ್ ವೇಳೆ ಸತ್ತವರೆಷ್ಟು ಜನ ಅಂತಾ ಗೊತ್ತಾ?| ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಏನು?| ನೋಟ್ ಬ್ಯಾನ್ ವೇಳೆ ಪ್ರಾಣ ಕಳೆದುಕೊಂಡವರು ಕೇವಲ 4 ಜನ| ನೋಟ್ ಬ್ಯಾನ್ ವೇಳೆ ಮೂವರು ಎಸ್​ಬಿಐ ಸಿಬ್ಬಂದಿ, ಓರ್ವ ನಾಗರಿಕನ ಸಾವು| ರಾಜ್ಯಸಭೆಗೆ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ| ಕೇಂದ್ರದ ಮಾಹಿತಿಗೆ ವಿಪಕ್ಷಗಳ ತೀವ್ರ ವಿರೋಧ 

ನವದೆಹಲಿ (ಡಿ.19): ನೋಟು ಅಮಾನ್ಯೀಕರಣದ ವೇಳೆ  ಸೂಕ್ತ ಸಮಯದಲ್ಲಿ ಹಣ ಸಿಗದೇ ಮತ್ತು ಎಟಿಎಂ ಸರತಿ ಸಾಲಿನಲ್ಲಿ ನಿಂತ ಪರಿಣಾಮ ಹಲವಾರು ಜನ ಸಾವನ್ನಪ್ಪಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಕೊನೆಗೂ ಕೇಂದ್ರ ಸರ್ಕಾರ ಉತ್ತರ ನೀಡಿದೆ. 

ನೋಟು ಅಮಾನ್ಯೀಕರಣದ ಎರಡು ವರ್ಷದ ಬಳಿಕ ಕೇಂದ್ರ ಸರ್ಕಾರ ಈ  ಕುರಿತು ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, 2016ರಲ್ಲಿ ಏಕಾಏಕಿ ಹೆಚ್ಚು ಮುಖಬೆಲೆಯ ನೋಟು ಆಮಾನ್ಯೀಕರಣದಿಂದಾಗಿ ಅನೇಕರು ಜೀವ ಕಳೆದುಕೊಂಡಿದ್ದು ಸತ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.

ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಉಂಟಾದ ಪರಿಸ್ಥಿತಿಯಿಂದ, ಎಸ್​ಬಿಐ  ಮೂವರು ಸಿಬ್ಬಂದಿ ಹಾಗೂ ಒಬ್ಬರು ಗ್ರಾಹಕರು ಪ್ರಾಣ ಕಳೆದುಕೊಂಡಿದ್ದಾರೆ. ಇವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ ಎಂದು ಜೇಟ್ಲಿ ಸದನಕ್ಕೆ ಮಾಹಿತಿ ನೀಡಿದ್ದಾರೆ.

ನೋಟು ಅಮಾನ್ಯೀಕರಣದಿಂದ ದೇಶದ ಉದ್ಯಮ ಹಾಗೂ ಉದ್ಯೋಗಿಗಳ ಮೇಲೆ ಉಂಟಾದ ಪರಿಸ್ಥಿತಿಯ ಕುರಿತು ಯಾವುದೇ ನಿರ್ದಿಷ್ಟ ಅಧ್ಯಯನವನ್ನು ಕೈಗೊಳ್ಳಲಾಗಿಲ್ಲ ಎಂದು  ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದರು.

ಆದರೆ ಕೇಂದ್ರ ನೀಡಿರುವ ಮಾಹಿತಿಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೇವಲ ನಾಲ್ಕು ಜನ ಅಸುನೀಗಿದ್ದಾರೆ ಎಂದು ಸರ್ಕಾರ ಸುಳ್ಳು ಹೇಳುತ್ತಿದ್ದು, ಇನ್ನೂ ಹಲವಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ತಮ್ಮ ಹಳೆಯ ಆರೋಪವನ್ನು ಪುನರುಚ್ಛಸಿದ್ದಾರೆ.

click me!