ಜಾತ್ರೆ ನಂತರದ ಸ್ಟಾಕ್‌ ಕ್ಲಿಯರೆನ್ಸ್‌ ಬಜೆಟ್‌: ಎಚ್‌.ಡಿ.ಕುಮಾರಸ್ವಾಮಿ ಟೀಕೆ

By Kannadaprabha NewsFirst Published Feb 18, 2023, 4:20 AM IST
Highlights

ಮೂರು ತಿಂಗಳಲ್ಲಿ ಚುನಾವಣೆ ಇರುವಾಗ ಶಾಸ್ತ್ರಕ್ಕೆ ಮಂಡಿಸಿರುವ ರಾಜ್ಯ ಮುಂಗಡ ಪತ್ರದಲ್ಲಿ ರಾಜ್ಯದ ಜನರ ಸಂಕಷ್ಟಗಳನ್ನು ಪರಿಹರಿಸಲು ಮೂರು ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. 

ಬೆಂಗಳೂರು (ಫೆ.18): ಮೂರು ತಿಂಗಳಲ್ಲಿ ಚುನಾವಣೆ ಇರುವಾಗ ಶಾಸ್ತ್ರಕ್ಕೆ ಮಂಡಿಸಿರುವ ರಾಜ್ಯ ಮುಂಗಡ ಪತ್ರದಲ್ಲಿ ರಾಜ್ಯದ ಜನರ ಸಂಕಷ್ಟಗಳನ್ನು ಪರಿಹರಿಸಲು ಮೂರು ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ರಾಜ್ಯ ಸರ್ಕಾರದ ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಈ ಬಜೆಟ್‌ ವರ್ಷಕೊಮ್ಮೆ ಜಾತ್ರೆ ಮುಗಿದ ಮೇಲೆ ಅಲ್ಲಿನ ಅಂಗಡಿಗಳು ಸ್ಟಾಕ್‌ ಕ್ಲಿಯರೆನ್ಸ್‌ ಸೇಲ್‌ ಬೋರ್ಡ್‌ ಹಾಕಿ ರಿಯಾಯಿತಿ ದರದ ಘೋಷಣೆ ಮಾಡುವಂತಿದೆ. ಮೂರು ವರ್ಷಗಳಲ್ಲಿ ಬಿಜೆಪಿ ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದೆ. 

ಕೈಗಾರಿಕೆ, ಮೂಲಸೌಕರ್ಯ, ಸಾರಿಗೆ, ಶಿಕ್ಷಣ, ಕೃಷಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಬಸವಳಿದಿದೆ. ಕೇಂದ್ರದ ಮುಂದೆ ಭಿಕ್ಷಾ ಪಾತ್ರೆ ಹಿಡಿದು ನಿಲ್ಲುವ ದುಸ್ಥಿತಿ ಬಂದಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನುದಾನವನ್ನು ಭಿಕ್ಷೆಯಂತೆ ಹಾಕುತ್ತಿದೆ. ಇನ್ನು ಈ ಬಜೆಟ್‌ನ ಹಣೆಬರಹಕ್ಕೆ ದಿಕ್ಕೆಲ್ಲಿ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ಗೆ ಯಾವುದೇ ಮಹತ್ವ ಇಲ್ಲ. ಇದು ಅತ್ಯಂತ ನೀರಸ ಹಾಗೂ ನಿರುಪಯುಕ್ತವಾಗಿದೆ. ಚುನಾವಣೆ ನಂತರ ಬರುವ ಸರ್ಕಾರ ಮಂಡಿಸುವ ಬಜೆಟ್‌ ಜಾರಿಗೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. 

Latest Videos

ಹಳ್ಳಿಗಳಿಗೆ ಹೋದರೆ ಡಬಲ್‌ ಎಂಜಿನ್‌ ವೈಫಲ್ಯ ತಿಳಿಯುತ್ತೆ: ಎಚ್‌ಡಿಕೆ

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎನ್ನುವುದು ಎಲ್ಲ ಕನ್ನಡಿಗರಿಗೂ ಗೊತ್ತಿರುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ನಾನು ಪಂಚರತ್ನ ರಥಯಾತ್ರೆ ನಡೆಸುವಾಗ ರಾಜ್ಯದ ಉದ್ದಗಲಕ್ಕೂ ಶಾಲಾ ಮಕ್ಕಳ ಕಷ್ಟವನ್ನು ಕಂಡೆ. ಶಾಲೆಗೆ ಹೋಗಲು ಬಸ್‌ ಇಲ್ಲದೆ ಕಾಡುಮೇಡುಗಳಲ್ಲಿ ಕ್ರೂರ ಮೃಗಗಳ ಭೀತಿಯ ನಡುವೆ ಮಕ್ಕಳು ನಡೆದು ಹೋಗುತ್ತಿದ್ದರು. ಅನೇಕ ಕಡೆ ಶಾಲೆ ಕಾಲೇಜುಗಳು ಕುಸಿದು ಬೀಳುವ ಸ್ಥಿತಿಯಲ್ಲಿದ್ದವು. ಈ ಬಗ್ಗೆ ನಾನು ದನಿಯತ್ತಿ ಸರ್ಕಾರವನ್ನು ಒತ್ತಾಯ ಮಾಡಿದ್ದೆ. ಈಗ ಮಕ್ಕಳ ಬಸ್ಸು ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. 

Karnataka Politics: ‘ಬೊಗಳುವ’ ವಿಚಾರಕ್ಕೆ ಬಿಜೆಪಿ-ಜೆಡಿಎಸ್‌ ವಾಕ್ಸಮರ!

ಆದರೆ, ಈ ಯೋಜನೆಯನ್ನು ಚುನಾವಣೆಗೆ ಮೊದಲೇ ಜಾರಿ ಮಾಡುತ್ತಾರಾ? ಅಥವಾ ಚುನಾವಣೆ ನಂತರ ಜಾರಿ ಮಾಡುತ್ತಾರಾ ಎಂಬುದರ ಬಗ್ಗೆ ಮುಖ್ಯಮಂತ್ರಿ ಏನೂ ಹೇಳದೆ ಬುದ್ಧಿವಂತಿಕೆಯಿಂದ ಜಾರಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಬಿಜೆಪಿಯಿಂದ ರಾಮನಗರದಲ್ಲಿ ರಾಮಮಂದಿರ ಕಟ್ಟಲು ಸಾಧ್ಯವಿಲ್ಲ. ರಾಮಮಂದಿರ ಘೋಷಣೆ ಬಜೆಟ್‌ ಬುಕ್‌ನಲ್ಲೇ ಉಳಿಯುತ್ತದೆ. ರಾಮಮಂದಿರ ನಿರ್ಮಾಣ ನನ್ನಿಂದ ಸಾಧ್ಯವಾಗಲಿದೆ. ರಾಮನಗರದಲ್ಲಿ ಯಾವುದೇ ಜಪ ಮಾಡಿದರೂ ಏನೂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

click me!