
ನವದೆಹಲಿ(ಜ.01) ಹೊಸ ವರ್ಷವನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಗಿದೆ. ಹೊಸ ವರ್ಷದಿಂದ ಹಲವು ನಿಯಮಗಳು ಬದಲಾಗಿದೆ. ಗ್ಯಾಸ್, ಯುಪಿಐ ಪಾವತಿ, ವ್ಯಾಟ್ಸಾಪ್ ಪಾವತಿ ಮಿತಿ ಸೇರಿದಂತೆ ಹಲವು ಬದಲಾವಣೆಗಳು ಜನವರಿ 1 ರಿಂದಲೇ ಜಾರಿಯಾಗಿದೆ. ಇದೇ ರೀತಿ ಮಹತ್ತರ ಬದಲಾವಣೆ ತಂಡ ಮತ್ತೊಂದು ಯೋಜನೆ ಎಂದರೆ ಅದು ನೌಕರರ ಪಿಂಚಣಿ ಯೋಜನೆ(EPS) ನವೆಂಬರ್ 10 ರಂದು ಕಾರ್ಮಿಕ ಸಚಿವಾಲಯ ಈ ಬದಲಾವಣೆಗೆ ಅನುಮೋದನೆ ನೀಡಿತ್ತು. ಇದೀಗ ಜನವರಿ 1 ರಿಂದ ಜಾರಿಯಾಗುತ್ತಿದೆ.ಹೊಸ ನಿಯಮದ ಪ್ರಕಾರ ನೌಕರರ ತಮ್ಮ ಪಿಂಚಣಿ ಹಣವನ್ನು ದೇಶದ ಯಾವುದೇ ಭಾಗದಲ್ಲಿ, ತಮ್ಮ ಬ್ಯಾಂಕ್ಗಳ ಇತರ ಶಾಖೆಯಿಂದ ಪಡೆಯಲು ಸಾಧ್ಯವಿದೆ. ಈ ಮೂಲಕ ಭಾರಿ ಸಮಸ್ಯೆ ಎದುರಿಸುತ್ತಿದ್ದ ಹಲವು ಹಿರಿಯ ನೌಕರರು, ಸ್ಥಳಾಂತರಗೊಂಡಿರುವ ನೌಕರರಿಗೆ ಅತ್ಯಂತ ಅನುಕೂಲ ಮಾಡಿಕೊಟ್ಟಿದೆ. ನಿಯಮ ಬದಲಾವಣೆಯಿಂದ ಬರೋಬ್ಬರಿ 70 ಮಿಲಿಯನ್ ಫಲಾನುಭವಿಗಳಿಗೆ ಉಪಯೋಗವಾಗಲಿದೆ.
ನೌಕರರ ಪಿಂಚಣಿ ಯೋಜನೆಯ ಫಲಾನುಭವಿಗಳು ತಮ್ಮ ಬ್ಯಾಂಕ್ ಶಾಖೆಗೆ ತೆರಳಿ ಪಿಂಚಣಿ ಹಣ ಪಡೆಯಬೇಕಿತ್ತು. ಪ್ರತಿ ತಿಂಗಳು ಈ ಪಿಂಚಣಿ ಹಣಕ್ಕಾಗಿ ಹಲವರು ಪ್ರಯಾಣ ಮಾಡಬೇಕಿತ್ತು. ಸ್ಥಳಾಂತರ ಗೊಂಡಿರುವ ನೌಕರರು, ಬೇರೆಡೆ ನಿವೃತ್ತಿ ಜೀವನದಲ್ಲಿರುವ ನೌಕರರು, ತಮ್ಮ ಮೂಲ ಶಾಖೆಗೆ ತೆರಳಿ ಪ್ರತಿ ತಿಂಗಳು ಹಣ ಪಡೆಯಬೇಕಿತ್ತು. ಆದರೆ ಹೊಸ ನಿಯಮದ ಅಡಿಯಲ್ಲಿ ಫಲಾನುಭವಿಗಳು ತಾವಿದ್ದಲ್ಲೇ ಹತ್ತಿರದ ಬ್ಯಾಂಕ್ಗೆ ತೆರಳಿ ತಮ್ಮ ತಿಂಗಳ ಪಿಂಚಣಿ ಹಣವನ್ನು ಪಡೆಯಬಹುದು.
ಉದ್ಯೋಗ ಭವಿಷ್ಯ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!
ಪ್ರಮುಖವಾಗಿ ನಿವೃತ್ತಿ ಹೊಂದಿದ ನೌಕರರು ಪಿಂಚಣಿ ಹಣಕ್ಕಾಗಿ ಅಲೆದಾಡುವ ಪರಿಸ್ಥಿತಿ ಇತ್ತು. ಇದು ಹಿರಿಯರಿಗೆ ಸೇರಿದಂತೆ ಎಲ್ಲರಿಗೂ ಪ್ರಯಾಸದ ಕೆಲಸವಾಗಿತ್ತು. ಪಿಂಚಣಿ ಹಣ ಪಡೆಯಲು ಒಂದು ದಿನ ಮೀಸಲಿಡಬೇಕಿತ್ತು. ಇಷ್ಟೇ ಅಲ್ಲ ಹಣ ಖರ್ಚು ಮಾಡಿಕೊಂಡು ತೆರಳಿ ಮರಳಿ ಬರುವಷ್ಟರಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತಿತ್ತು. ಆದರೆ ಹೊಸ ನಿಯಮದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಹುಡುಕಲಾಗಿದೆ.
ಪಿಂಚಣಿದಾರರು ತಮ್ಮ ಮೂಲ ಬ್ಯಾಂಕ್ ಖಾತೆಯಿಂದ ಹಣ ಪಡೆದಂತೆ ಸುಲಭವಾಗಿ ಇತರ ಶಾಖೆಗಳಿಂದ ಹಣ ಪಡೆಯಲು ಸಾಧ್ಯವಿದೆ. ಕೇವಲ ಆಧಾರ್ ಕಾರ್ಡ್ ಲಿಂಕ್ ಇರುವ ಖಾತೆ ಅಥವಾ ಗುರುತಿನ ದಾಖಲೆ ಚೀಟಿ ಇಟ್ಟುಕೊಂಡಿರಬೇಕು. ಇತರ ಶಾಖೆಗಳಲ್ಲಿ ತೋರಿಸಿ ದೃಢೀಕರಣ ಮಾಡಿಕೊಂಡು ಪಿಂಚಣಿ ಹಣ ಪಡೆಯಲು ಸಾಧ್ಯವಿದೆ.
ಈ ಕುರಿತು ಮಾತನಾಡಿರು ಕಾರ್ಮಿಕ ಸಚಿವ ಮನ್ಸುಕ್ ಮಾಂಡವಿಯಾ, ನಿವೃತ್ತಿ ಹೊಂದಿರುವ, ಹಿರಿಯ ನಾಗರೀಕರ ಜೀವನ ಸುಲಭಗೊಳಿಸಲು ಈ ಮಹತ್ವದ ಹೆಜ್ಜೆ ಸಹಕಾರಿಯಾಗಿದೆ. ಪಿಂಚಣಿಗಾಗಿ ಅಲೆದಾಡ ಇನ್ನು ಇರುವುದಿಲ್ಲ ಎಂದಿದ್ದಾರೆ. ತಮ್ಮ ವಿಶ್ರಾಂತಿ ಜೀವನದಲ್ಲಿ ಬದುಕನ್ನು ತ್ತಷ್ಟು ಸುಂದರವಾಗಿ ಕಳೆಯಲು ಇದು ನೆರವಾಗಲಿದೆ. ಪಿಂಚಣಿ ಹಣ ಪಡೆಯುವ ಹರಸಾಹಸ ಇನ್ನು ಇರುವುದಿಲ್ಲ ಎಂದು ಮಾಂಡವಿಯಾ ಹೇಳಿದ್ದಾರೆ.
ಸದ್ಯ ಇಪಿಎಸ್ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ತರ ಬದಲಾವಣೆಗೆ ತೆರೆದುಕೊಳ್ಳಲಿದೆ. ಈ ಮೂಲಕ ಬ್ಯಾಂಕ್ ತೆರಳದೆ ನೇರವಾಗಿ ಖಾತೆಗೆ ಜಮಾವಣೆ ಮಾಡುವ, ಪಡೆದುಕೊಳ್ಳುವ ಡಿಜಿಟಲ್ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿ, ವರ್ಗಾವಣೆ ಲಭ್ಯವಿದೆ. ಭಾರತ ಅತೀ ಹೆಚ್ಚು ಯುಪಿಐ ಪಾವತಿ ವಹಿವಾಟು ನಡೆಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ನಗದು ಹಣದ ವಹಿವಾಟುಗಳು ಕಡಿಮೆಯಾಗಿದೆ. ಪಾವತಿ, ಹಣ ವರ್ಗಾವಣೆ ಸೇರಿದಂತೆ ಹಲವು ಸೌಲಭ್ಯಗಳು ಸುಲಭವಾಗಿ ಇದೀಗ ಲಭ್ಯವಿದೆ.
ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಇಪಿಎಫ್ ಸದಸ್ಯರಿಗೆ ಅವಕಾಶ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.