Bank Deposit Insurance: ಬ್ಯಾಂಕ್‌ಗಳು ನಷ್ಟಕ್ಕೆ ಒಳಗಾದರೂ ಠೇವಣಿ ಹಣ ಸುರಕ್ಷಿತ: ಮೋದಿ

By Kannadaprabha NewsFirst Published Dec 13, 2021, 7:31 AM IST
Highlights

*5 ಲಕ್ಷ ರು.ವರೆಗಿನ ಠೇವಣಿ ವಾಪಸ್‌ಗೆ ಆದ್ಯತೆ
*ಯೋಜನೆಯಿಂದ ಠೇವಣಿದಾರರಲ್ಲಿ ವಿಶ್ವಾಸ ವೃದ್ಧಿ
*ಈಗಾಗಲೇ 1 ಲಕ್ಷ ಠೇವಣಿದಾರಿಗೆ 1300 ಕೋಟಿ ರು. ವಾಪಸ್‌
*ಶೀಘ್ರ ಇನ್ನೂ 3 ಲಕ್ಷ ಠೇವಣಿದಾರರಿಗೆ ಹಣ ವಾಪಸ್ಸು
*ಬಡವರು, ಮಧ್ಯಮವರ್ಗದ ಸಂಕಷ್ಟಕ್ಕೆ ನಮ್ಮ ಸ್ಪಂದನೆ: ಪ್ರಧಾನಿ

ನವದೆಹಲಿ (ಡಿ. 13): ಬ್ಯಾಂಕ್‌ಗಳು ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ (Banks At Loss) ಠೇವಣಿದಾರ ನಷ್ಟಭರಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ‘ಠೇವಣಿ ವಿಮಾ ಯೋಜನೆ’ಯಿಂದ (Bank Deposit Insurance), ಠೇವಣಿದಾರರಲ್ಲಿ ವಿಶ್ವಾಸ ಮೂಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi)ಹೇಳಿದರು. ಕೇಂದ್ರ ಸರ್ಕಾರವು ಇತ್ತೀಚೆಗೆ ಬ್ಯಾಂಕ್‌ಗಳು ನಷ್ಟಕ್ಕೀಡಾದರೆ ಠೇವಣಿದಾರರಿಗೆ ಈವರೆಗಿನ 1 ಲಕ್ಷ ರು. ಬದಲು 5 ಲಕ್ಷ ರು.ವರೆಗಿನ ಠೇವಣಿಗೆ ವಿಮಾ ಮೊತ್ತ ಲಭಿಸುವ ಯೋಜನೆಗೆ ಚಾಲನೆ ನೀಡಿತ್ತು. 

ಈ ಕುರಿತಾದ ‘ಠೇವಣಿದಾರರಿಗೆ ಮೊದಲ ಆದ್ಯತೆ: ಕಾಳಮಿತಿಯಲ್ಲಿ 5 ಲಕ್ಷ ರು.ವರೆಗಿನ ಠೇವಣಿ ವಿಮೆ ವಾಪಸ್‌’ ಹೆಸರಿನ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ, ‘ಯೋಜನೆ ಆರಂಭವಾದ ನಂತರ ಕೆಲವೇ ದಿನಗಳಲ್ಲಿ 1 ಲಕ್ಷ ಠೇವಣಿದಾರರಿಗೆ 1300 ಕೋಟಿ ರು. ಠೇವಣಿ ಹಣ ಲಭಿಸಿದೆ. ಇನ್ನೂ ಇಂಥ 3 ಲಕ್ಷ ಠೇವಣಿದಾರರಿಗೆ ಆರ್‌ಬಿಐ ಮಾರಿಟೋರಿಯಂ ಅಡಿಯಲ್ಲಿ ಠೇವಣಿ ಹಣ ವಾಪಸು ಲಭಿಸಲಿದೆ’ ಎಂದು ಘೋಷಿಸಿದರು.

ಬ್ಯಾಂಕ್‌ಗಳು ನಷ್ಟಕ್ಕೊಳಗಾದರೂ ಠೇವಣಿ ಸುರಕ್ಷಿತ!

ಈಗ ಸಂಕಷ್ಟದಲ್ಲಿರುವ 16 ಪಟ್ಟಣ ಸಹಕಾರ ಬ್ಯಾಂಕ್‌ಗಳ ಠೇವಣಿದಾರರಿಗೆ ಮೊದಲ ಹಂತದಲ್ಲಿ ಠೇವಣಿ ಹಣ ವಾಪಸು ಲಭಿಸತೊಡಗಿದೆ. ಎರಡನೇ ಹಂತದ ಠೇವಣಿ ಹಣವನ್ನು 2021ರ ಡಿಸೆಂಬರ್‌ 31ರಂದು ಬಿಡುಗಡೆ ಮಾಡಲಾಗುತ್ತದೆ. ಇದನ್ನು ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, ‘ಬ್ಯಾಂಕ್‌ಗಳು ನಷ್ಟಕ್ಕೊಳಗಾದರೂ ಠೇವಣಿದಾರರ ಹಣ ಸುರಕ್ಷಿತವಾಗಿರಲಿದೆ ಎಂಬುದನ್ನು ಠೇವಣಿ ವಿಮಾ ಯೋಜನೆ ಸಾಬೀತುಪಡಿಸಿದೆ. ಇದರಿಂದಾಗಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಿದೆ’ ಎಂದರು.

60ರ ದಶಕದಲ್ಲೇ ಜಾರಿಗೆ ಬಂದಿದ್ದ ಯೋಜನೆ!

‘60ರ ದಶಕದಲ್ಲೇ ಈ ಯೋಜನೆ ಜಾರಿಗೆ ಬಂದಿತ್ತಾದರೂ, ಮೊದಲು 50 ಸಾವಿರ ರು.ವರೆಗಿನ ಠೇವಣಿ ಹಣ ಮಾತ್ರ ಬ್ಯಾಂಕ್‌ ನಷ್ಟಕ್ಕೊಳಗಾದರೆ ಠೇವಣಿದಾರರಿಗೆ ಲಭಿಸುತ್ತಿತ್ತು. ನಂತರ ಅದನ್ನು 1 ಲಕ್ಷ ರು.ಗೆ ವಿಸ್ತರಿಸಲಾಯಿತು. ಆದರೆ ಬಡವರು ಹಾಗೂ ಮಧ್ಯಮ ವರ್ಗದವರ ಸಂಕಷ್ಟಅರಿತು 5 ಲಕ್ಷ ರು.ಗೆ ಠೇವಣಿ ವಿಮೆ ವಿಸ್ತರಿಸಲಾಗಿದೆ. ಬ್ಯಾಂಕ್‌ ದಿವಾಳಿ ಎಂದು ಘೋಷಣೆಯಾದರೂ 90 ದಿನದಲ್ಲಿ ಹಣವು ಠೇವಣಿದಾರರ ಕೈಗೆ ಸುರಕ್ಷಿತವಾಗಿ ಮರಳಲಿದೆ’ ಎಂದು ಮೋದಿ ಹೇಳಿದರು.‘ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದು. ಅಂತೆಯೇ ಠೇವಣಿದಾರರ ಹಣದ ಹಿತ ಕಾಯುವುದೂ ಅಷ್ಟೇ ಮಹತ್ವದ್ದು’ ಎಂದು ಅವರು ಒತ್ತಿ ಹೇಳಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿಕ ಬದಲಾವಣೆ!

2014 ರ ನಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಕ್ರಾಂತಿಕಾರಿಕ ಬದಲಾವಣೆ ಆಗಿದೆ. ಪ್ರಧಾನಿ ನರೇಂದ್ರ(Narendra Modi) ಮೋದಿ ಅವರು 2014 ರ ನಂತರ ಡಿಪಾಸಿಟಿ ಕ್ಷೇತ್ರದಲ್ಲಿ ಬದಲಾವಣೆ ತಂದಿದ್ದಾರೆ. ಆರ್‌ಬಿಐ ಬ್ಯಾಂಕ್ ಸೇರಿದಂತೆ ಎಲ್ಲಾ ಕ್ಷೇತ್ರದ ಬ್ಯಾಂಕ್‌ಗಳಲ್ಲೂ ಫೈನಾನ್ಸಿಯಲ್ ಸ್ಟೆಬಿಲಿಟಿ ಬಂದಿದೆ ಎಂದು ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ಹೇಳಿದ್ದಾರೆ.

LIC Stake: ಇಂಡಸ್ ಇಂಡ್ ಬ್ಯಾಂಕಿನಲ್ಲಿ ಎಲ್ಐಸಿ ಷೇರು ಹೆಚ್ಚಳಕ್ಕೆ ಆರ್ ಬಿಐ ಅನುಮತಿ

ದಾವಣಗೆರೆ ನಗರದಲ್ಲಿ 7 ರಾಜ್ಯಗಳ 16  ಅರ್ಬನ್ ಕೋ ಅಪರೇಟಿವ್ ಬ್ಯಾಂಕ್‌  ಫಲಾನುಭವಿಗಳ ಜೊತೆ ಪ್ರಧಾನಿ ವರ್ಚುವಲ್‌ ಸಂವಾದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ರಾಜೀವ್‌ ಚಂದ್ರಶೇಖರ್‌, ಠೇವಣಿದಾರರು ಬ್ಯಾಂಕಿಂಗ್ ವ್ಯವಸ್ಥೆಯ ಪ್ರಮುಖ ಪಾಲುದಾರರಾಗಿದ್ದಾರೆ.  ಅವರ ಹಿತರಕ್ಷಣೆ ಕೇಂದ್ರ ಸರ್ಕಾರ ಮಹತ್ತರ ಸುಧಾರಣೆ ಮಾಡಿದೆ. ವಿಮೆ‌ ಪರಿಹಾರವನ್ನು 1 ಲಕ್ಷದಿಂದ‌ 5 ಲಕ್ಷಕ್ಕೆ ಹೆಚ್ಚಿಸಿದೆ. ಶೇ. 80 ರಷ್ಟು ಠೇವಣಿದಾರರ ಹಿತಾಸಕ್ತಿ ರಕ್ಷಣೆಗೆ ಕೇಂದ್ರ ಸರ್ಕಾರ(Central Government) ಮುಂದಾಗಿದೆ ಅಂತ ತಿಳಿಸಿದ್ದಾರೆ. 

click me!