
ವಾಷಿಂಗ್ಟನ್(ಅ.08): ಕೊರೋನಾ ವೈರಸ್ನ ಪರಿಣಾಮವಾಗಿ 2021ರ ವೇಳೆಗೆ ವಿಶ್ವದ 15 ಕೋಟಿ ಜನರು ತೀವ್ರ ಬಡತನಕ್ಕೆ ಸಿಲುಕುವ ಅಪಾಯವಿದೆ ಎಂದು ವಿಶ್ವಬ್ಯಾಂಕ್ ವರದಿಯೊಂದು ಎಚ್ಚರಿಕೆ ನೀಡಿದೆ.
ಕೊರೋನಾ ಮಹಾಮಾರಿಯಿಂದಾಗಿ ಈ ವರ್ಷ 8.8 ಕೋಟಿ ಮಂದಿ ಬಡತನಕ್ಕೆ ಸಿಲುಕಲಿದ್ದು, ಒಟ್ಟು 11.5 ಕೋಟಿ ಮಂದಿ ಕಡು ಬಡತನವನ್ನು ಎದುರಿಸಲಿದ್ದಾರೆ. ಆರ್ಥಿಕ ಹಿಂಜರಿಕೆಯ ಗಂಭೀರತೆಗೆ ಅನುಗುಣವಾಗಿ ಇವರ ಸಂಖ್ಯೆ 2021ರ ವೇಳೆಗೆ 15 ಕೋಟಿಗೆ ಏರಿಕೆ ಆಗುವ ಸಾಧ್ಯತೆಗಳಿವೆ. ಹೀಗಾಗಿ ಕೊರೋನಾ ಮುಗಿದ ಬಳಿಕ ವಿಭಿನ್ನ ಆರ್ಥಿಕತೆಗೆ ದೇಶಗಳು ಸಿದ್ಧವಾಗಬೇಕಿದೆ.
ಹೊಸ ಉದ್ದಿಮೆ ಹಾಗೂ ವಲಯಗಳಿಗೆ ಬಂಡವಾಳ ಹೂಡಿಕೆ, ಕಾರ್ಮಿಕರ ಬಳಕೆ, ಕೌಶಲ್ಯ ಮತ್ತು ನಾವೀನ್ಯತೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ವಿಶ್ವ ಬ್ಯಾಂಕಿನ ವರದಿ ತಿಳಿಸಿದೆ.
ಒಂದು ವೇಳೆ ವಿಶ್ವವನ್ನು ಕೊರೋನಾ ವೈರಸ್ ಆವರಿಸಿಕೊಳ್ಳದೇ ಇದ್ದಿದ್ದರೆ ಬಡತನ ಪ್ರಮಾಣ 2020ರಲ್ಲಿ ಶೇ.7.9ಕ್ಕೆ ಇಳಿಯುವ ನಿರೀಕ್ಷೆ ಇತ್ತು. ಆದರೆ, ಕೊರೋನಾ ಮಹಾಮಾರಿ ಹಾಗೂ ಜಾಗತಿಕ ಆರ್ಥಿಕ ಹಿಂಜರಿಕೆಯಿಂದಾಗಿ ವಿಶ್ವದ ಜನಸಂಖ್ಯೆಯ ಶೇ.1.4ರಷ್ಟುಮಂದಿ ಬಡತನಕ್ಕೆ ತಳ್ಳಲ್ಪಡಲಿದ್ದಾರೆ. ಅದರಲ್ಲೂ ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಈಗಾಗಲೇ ಬಡವರು ಎನಿಸಿಕೊಂಡವರು ಇನ್ನಷ್ಟುಕಡು ಬಡತನಕ್ಕೆ ಸಿಲುಕಲಿದ್ದಾರೆ. ಹೀಗಾಗಿ 2030ರ ವೇಳೆಗೆ ವಿಶ್ವವನ್ನು ಬಡತನದಿಂದ ಮುಕ್ತಗೊಳಿಸುವ ಗುರಿ ಸಾಧಿಸುವುದು ಅಸಾಧ್ಯ ಎಂದು ವರದಿ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.