ಬಜೆಟ್‌ಗೂ ಮುನ್ನವೇ ಆಫರ್: ಈರುಳ್ಳಿ ಬೆಳೆಗಾರರಿಗೆ ಬಂಪರ್!

By Web DeskFirst Published Feb 8, 2019, 11:36 AM IST
Highlights

ಈರಳ್ಳಿ ಬೆಳೆಗಾರರಿಗೆ ದೋಸ್ತಿ ಸರ್ಕಾರದಿಂದ ಬಂಪರ್ ಆಫರ್| ಈರುಳ್ಳಿ ಬೆಳೆಗಾರರಿಗೆ ಸಹಾಯಧನ ನೀಡಲು ಮುಂದಾದ ರಾಜ್ಯ ಸರ್ಕಾರ| ಪ್ರತಿ ಕ್ವಿಂಟಾಲ್‌ಗೆ 700 ರೂ. ಬೆಲೆ ನಿಗದಿ| ವ್ಯತ್ಯಾಸದ ಮೊತ್ತ ಗರಿಷ್ಠ ಪ್ರತಿ ಕ್ವಿಂಟಾಲ್‌ಗೆ 200 ರೂ.| ಸರ್ಕಾರದ ನಿಧಾರ್ಧಾರಕ್ಕೆ ಈರುಳ್ಳಿ ಬೆಳೆಗಾರರು ಫುಲ್ ಖುಷ್

ಬೆಂಗಳೂರು(ಫೆ.08): ಇಂದಿನ ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ಬಜೆಗೂ ಮೊದಲೇ ರಾಜ್ಯದ ರೈತ ಸಮುದಾಯಕ್ಕೆ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ.

ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ಪ್ರತಿ ಕ್ವಿಂಟಾಲ್‌ಗೆ 700 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. 

ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಇದರನ್ವಯ ಮಾರುಕಟ್ಟೆಯಲ್ಲಿ ಮಾರಾಟವಾದ ಈರುಳ್ಳಿ ಧಾರಣೆಗೆ ವ್ಯತ್ಯಾಸದ ಮೊತ್ತವನ್ನು ಪ್ರೋತ್ಸಾಹ ಧನವಾಗಿ ರೈತರಿಗೆ ಪಾವತಿಸಲು ಸರ್ಕಾರ ಮುಂದಾಗಿದೆ.  

ಅದರಂತೆ ಈರುಳ್ಳಿ ಬೆಳೆಯ ಉತ್ಪಾದನಾ ವೆಚ್ಚ ಆಧರಿಸಿ ಪ್ರತಿ ಕ್ವಿಂಟಾಲ್‌ಗೆ 700 ರೂ. ಬೆಲೆ ನಿಗದಿ ಮಾಡಲಾಗಿದ್ದು, ಮಾರಾಟವಾಗುವ ಉತ್ಪನ್ನಕ್ಕೆ ವ್ಯತ್ಯಾಸದ ಮೊತ್ತವಾಗಿ ಗರಿಷ್ಠ ಪ್ರತಿ ಕ್ವಿಂಟಾಲ್‌ಗೆ 200 ರೂ.ಗೆ ಮಿತಿಗೊಳಿಸಲಾಗಿದೆ. 

ಉದಾಹರಣೆಗೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ ಈರುಳ್ಳಿ 550 ರೂ.ಗೆ ಮಾರಾಟವಾದರೆ 150 ರೂ, 650ಕ್ಕೆ ಮಾರಾಟವಾದರೆ ವ್ಯತ್ಯಾಸದ ಮೊತ್ತ 50 ರೂ. ಹಾಗೂ 500 ರೂ.ಗೆ ಮಾರಾಟವಾದಲ್ಲಿ 200 ರೂ.ಗಳನ್ನು ಪ್ರೋತ್ಸಾಹಧನವಾಗಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. 

ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಈರುಳ್ಳಿ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದು, ಶೀಘ್ರ ಮತ್ತು ಪ್ರಾಮಾಣಿಕವಾಗಿ  ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

click me!