BTS-2021: ಸ್ಟಾರ್ಟಪ್‌ ಉತ್ತೇಜನಕ್ಕೆ ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌, ಸಚಿವ ಅಶ್ವತ್ಥ್‌

By Kannadaprabha NewsFirst Published Nov 20, 2021, 6:41 AM IST
Highlights

*    ರಾಜ್ಯಾದ್ಯಂತ ನವೋದ್ಯಮಗಳ ವಿಸ್ತರಣೆ
*    5000 ಕೋಟಿ ರು. ಹೂಡಿಕೆ ಆಕರ್ಷಿಸಿದ ಬೆಂಗಳೂರು ಟೆಕ್‌ ಶೃಂಗ
*    ಮಂಗಳೂರಿನಲ್ಲಿ ಫಿನ್‌ಟೆಕ್‌ ಬ್ಯಾಕ್‌ ಆಫೀಸ್‌
 

ಬೆಂಗಳೂರು(ನ.20):  ‘ಬೆಂಗಳೂರು ತಂತ್ರಜ್ಞಾನ ಶೃಂಗವು’(Bengaluru Technology Summit) (BTS) ಬಂಡವಾಳ ಆಕರ್ಷಣೆ ಹಾಗೂ ಹೊಸ ಉದ್ದಿಮೆಗಳ ಸ್ಥಾಪನೆಗೆ ರಹದಾರಿಯಾಗುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದು, ಬಿಟಿಎಸ್‌ ವೇದಿಕೆಯಿಂದಾಗಿ ರಾಜ್ಯಕ್ಕೆ(Karnataka) 5 ಸಾವಿರ ಕೋಟಿಗೂ ಅಧಿಕ ಬಂಡವಾಳ ಹರಿದು ಬರುವುದು ಖಚಿತವಾಗಿದೆ.

ಅಲ್ಲದೆ, ವಿಧಾನಪರಿಷತ್‌ ಚುನಾವಣೆ(Vidhan Parishat Election) ನೀತಿ ಸಂಹಿತೆ(Code of Conduct) ಹಿನ್ನೆಲೆಯಲ್ಲಿ ಹೊಸ ಒಡಂಬಡಿಕೆ ಪ್ರಕಟಿಸದಿದ್ದರೂ ರಾಜ್ಯದಲ್ಲಿ ಹೊಸ ಉದ್ದಿಮೆಗಳು ತಲೆ ಎತ್ತಲಿವೆ ಎಂಬ ಭರವಸೆಯನ್ನು ರಾಜ್ಯ ಸರ್ಕಾರ(Government of Karnataka) ರವಾನಿಸಿದೆ. ಅಲ್ಲದೆ, ಬೆಂಗಳೂರು(Bengaluru) ಹೊರತಾದ ನಗರಗಳಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲು ‘ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌’(Beyond Startup Grid) ಸ್ಥಾಪನೆ ಹಾಗೂ ಅಮೇರಿಕಾದ(America) ಸಿಲಿಕಾನ್‌ ಸಿಟಿ ಹಾಗೂ ಭಾರತದ(India) ಸಿಲಿಕಾನ್‌ ಸಿಟಿ(Silicon City) ಬೆಂಗಳೂರಿನ ನಡುವೆ ನವ್ಯೋದ್ಯಮ ಸೇತುವೆಯಾಗಿ ‘ಸಿಲಿಕಾನ್‌ ವ್ಯಾಲಿ(Silicon Valley)ಕಾರ್ಯಪಡೆ’ ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಇನ್ನು ಮಂಗಳೂರಿನಲ್ಲಿ(Mangaluru) ಫಿನ್‌ಟೆಕ್‌ ಬ್ಯಾಕ್‌ ಆಫೀಸ್‌(Fintech Back Office) ತೆರೆಯುವುದು. 4 ಲಕ್ಷಕ್ಕೂ ಹೆಚ್ಚು ಕೌಶಲ್ಯವುಳ್ಳ ವ್ಯಕ್ತಿಗಳಿಗೆ ಉದ್ಯೋಗ(Job) ಸೃಷ್ಟಿಯಂತಹ ಹಲವು ಭರವಸೆಗಳನ್ನು ಬೆಂಗಳೂರು ತಂತ್ರಜ್ಞಾನ ಶೃಂಗದ ಮೂಲಕ ರಾಜ್ಯ ಸರ್ಕಾರ ಪ್ರಕಟಿಸಿದೆ.

BTS-2021| ನಾನು ಕರ್ನಾಟಕದ ಹೆಮ್ಮೆಯ ಪುತ್ರಿ: Apple ಉಪಾಧ್ಯಕ್ಷೆ ಪ್ರಿಯಾ

ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌:

ಶುಕ್ರವಾರ ಸಂಜೆ ಬಿಟಿಎಸ್‌-2021ನ(BTS-2021) ಸಮಾರೋಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಐಟಿ-ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ(CN Ashwathnarayan), ಬೆಂಗಳೂರಿನಾಚೆಗೂ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ‘ಬಿಯಾಂಡ್‌ ಸ್ಟಾರ್ಟಪ್‌ ಗ್ರಿಡ್‌’ ಸ್ಥಾಪಿಸಲಾಗುತ್ತದೆ ಎಂದು ಪ್ರಕಟಿಸಿದರು.

ಹುಬ್ಬಳ್ಳಿ(Hubballi), ಮೈಸೂರು(Mysuru), ಮಂಗಳೂರು ಕ್ಲಸ್ಟರ್‌ಗಳಲ್ಲಿ ನವೋದ್ಯಮಗಳ ಸ್ಥಾಪನೆಗೆ ಒತ್ತು ನೀಡಲಾಗಿದ್ದು, ಅದಕ್ಕೆ ಅಗತ್ಯವಿರುವ ಪೋ›ತ್ಸಾಹಧನ, ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಬಾರಿಯ ಶೃಂಗಸಭೆಯ ಆದ್ಯತೆಯೂ ಇದೇ ಆಗಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಕಂಪನಿಗಳು ಬೆಂಗಳೂರಿನಾಚೆಗೂ ಉದ್ಯಮ ಸ್ಥಾಪನೆಗೆ ಒಲವು ತೋರಿವೆ. ಮಹಿಳಾ ಉದ್ಯಮಶೀಲತೆಗೂ ಒತ್ತು ನೀಡಲಾಗಿದೆ ಎಂದರು.

5000 ಕೋಟಿ ಬಂಡವಾಳ ನಿರೀಕ್ಷೆ:

ಎಚ್‌ಸಿಎಲ್‌, ಅಪ್ಲಯ್ಡ್‌ ಮೆಟೀರಿಯಲ್‌, ರಾಕಾನ್‌ ಮುಂತಾದ ಕಂಪೆನಿಗಳು ರಾಜ್ಯದಲ್ಲಿ ಒಟ್ಟು 5 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಬಂಡವಾಳ(Investment) ಹೂಡಲು ಮುಂದೆ ಬಂದಿವೆ. ಈ ಹೂಡಿಕೆಯಿಂದಾಗಿ ಸೆಮಿಕಂಡಕ್ಟರ್‌, ಇಲೆಕ್ಟ್ರಾನಿಕ್‌, ಸೌರ ಕೋಶಗಳು, ವಾಶಿಂಗ್‌ ಮಶೀನ್‌ ಮತ್ತು ಹವಾ ನಿಯಂತ್ರಕಗಳಿಗೆ ಅಳವಡಿಸುವ ಮೋಟಾರುಗಳ ಉತ್ಪಾದನೆ ಸಾಧ್ಯವಾಗಲಿದೆ. ರಾಜ್ಯದಲ್ಲಿ ನೇರವಾಗಿ 15 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಆಗಲಿದೆ ಎಂದು ಹೇಳಿದರು.

‘ನವ್ಯೋದ್ಯಮ ಸಿಲಿಕಾನ್‌ ವ್ಯಾಲಿ ಕಾರ್ಯಪಡೆ’:

ಪ್ರತಿಭಾವಂತ ಉದ್ಯೋಗಿಗಳ ಕೊರತೆ ಎದುರಿಸುತ್ತಿರುವ ಅಮೆರಿಕದ ಸಿಲಿಕಾನ್‌ ವ್ಯಾಲಿಯ ನವೋದ್ಯಮಗಳಿಗೆ ಭಾರತದ ಸಿಲಿಕಾನ್‌ ವ್ಯಾಲಿ ಎಂದೆ ಕರೆಯಲ್ಪಡುವ ಬೆಂಗಳೂರಿನಿಂದ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವಂತೆ ನವೋದ್ಯಮ ಸಿಲಿಕ್ಯಾನ್‌ ವ್ಯಾಲಿ ಬ್ರಿಡ್ಜ್‌ ರಚನೆ ಮಾಡಲಾಗುವುದು. ಅಮೇರಿಕಾದಲ್ಲಿರುವ ಸ್ಟಾರ್ಟಪ್‌ಗಳಿಗೆ ಇಲ್ಲಿಂದಲೇ ಮಾನವಸಂಪನ್ಮೂಲ(Human Resources) ಒದಗಿಸಲು ‘ನವ್ಯೋದ್ಯಮ ಸಿಲಿಕಾನ್‌ ವ್ಯಾಲಿ ಕಾರ್ಯಪಡೆ’ ರಚಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು

BTS 2021; ಸಂಶೋಧನೆಗಳಿಂದ ಕೃಷಿ ಸುಧಾರಣೆಯಾಗಬೇಕು; ವೆಂಕಯ್ಯ ನಾಯ್ಡು

4 ಲಕ್ಷ ಉದ್ಯೋಗಿಗಳ ಕೊರತೆ:

ಐಟಿ-ಬಿಟಿ(It-Bt) ಸೇರಿದಂತೆ ಅನೇಕ ಉದ್ಯಮಗಳಲ್ಲಿ ಕೌಶಲ್ಯವುಳ್ಳ ಉದ್ಯೋಗಿಗಳ ಕೊರತೆ ಇದೆ. ನಾವು ಇನ್ನೂ 4 ಲಕ್ಷ ಉದ್ಯೋಗ ನೀಡಲು ಸಿದ್ಧ. ಅದರ ಅವಶ್ಯಕತೆ ತಮಗಿದೆ ಎಂದು ಕಂಪನಿಗಳು ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರವು ಕೌಶಲ್ಯವುಳ್ಳ ಮಾನವ ಸಂಪನ್ಮೂಲ ಒದಗಿಸಲು ಶಿಕ್ಷಣ ಹಾಗೂ ತರಬೇತಿ ವಿಧಾನಗಳಲ್ಲಿ ಹಲವು ಸುಧಾರಣೆಗಳನ್ನು ತಂದಿದೆ. ಕಳೆದ 6 ತಿಂಗಳಲ್ಲಿ 10 ಲಕ್ಷ ಮಂದಿ ಉದ್ಯೋಗ ಬದಲಾಯಿಸಿದ್ದು ಮಾನವ ಸಂಪನ್ಮೂಲದ ಅಗತ್ಯ ಮತ್ತು ಮಹತ್ವವನ್ನು ಸಾರುತ್ತಿದೆ. ಹೀಗಾಗಿ ಕಾಲೇಜುಗಳನ್ನು ದತ್ತು ಪಡೆದುಕೊಂಡು ಅಲ್ಲಿ ತರಬೇತಿ ನೀಡಿ, ತಮಗೆ ಬೇಕಾದ ಮಾನವ ಸಂಪನ್ಮೂಲ ಪಡೆದುಕೊಳ್ಳಲು ಕಂಪನಿಗಳಿಗೆ ಅವಕಾಶ ನೀಡುವುದು ಸೇರಿದಂತೆ ಹಲವು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ಮಂಗಳೂರಿನಲ್ಲಿ ಫಿನ್‌ಟೆಕ್‌ ಬ್ಯಾಕ್‌ ಆಫೀಸ್‌:

ಫಿನ್‌ಟೆಕ್‌ ಕಂಪನಿಗಳು, ಅದರಲ್ಲೂ ಸ್ಟಾರ್ಟಪ್‌ಗಳು ಹೆಚ್ಚು ಹೆಚ್ಚು ಬೆಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಫಿನ್‌ಟೆಕ್‌ ಕಾರ್ಯಪಡೆ ರಚಿಸಲಾಗಿದೆ. ಮಂಗಳೂರಿನಲ್ಲಿ ಫಿನ್‌ಟೆಕ್‌ ಉತ್ಕೃಷ್ಟತಾ ಕೇಂದ್ರವನ್ನು ತೆರೆದು ಅಲ್ಲಿ ಫಿನ್‌ಟೆಕ್‌ ಬ್ಯಾಕ್‌ ಆಫೀಸ್‌ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
 

click me!