
ನವದೆಹಲಿ: ಇಂಡಿಗೋ-ಏರ್ ಇಂಡಿಯಾ ಸಂಸ್ಥೆಯ ಪಾರಮ್ಯದ ಭಾರತದ ವಿಮಾನಯಾನ ಕ್ಷೇತ್ರಕ್ಕೆ ಧುಮುಕಲು ಅದಾನಿ ಸಮೂಹ ಸಜ್ಜಾಗಿದ್ದು, ಈ ಸಂಬಂಧ ನಿಯಮಾವಳಿ ಬದಲಾವಣೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಏರ್ಪೋರ್ಟ್ ನಿರ್ವಹಿಸುವ ಸಂಸ್ಥೆಗಳಿಗೆ ಯಾವುದೇ ವಿಮಾನಯಾನ ಸಂಸ್ಥೆಯಲ್ಲಿ ಶೇ.10ಕ್ಕಿಂತ ಹೆಚ್ಚು ಪಾಲು ಹೊಂದುವಂತಿಲ್ಲ ಎಂಬ ನಿಯಮ ಇದೆ. ಈ ಅಡೆತಡೆ ನಿವಾರಿಸುವಂತೆ ಇದೀಗ ಕೇಂದ್ರಕ್ಕೆ ಅದಾನಿ ಸಮೂಹ ಆಗ್ರಹಿಸಿದೆ.
ಅದಾನಿ ಗ್ರೂಪ್ ಮತ್ತು ಜಿಎಂಆರ್ ಏರ್ಪೋರ್ಟ್ನಂಥ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳಿಗೆ ವಿಮಾನಯಾನ ಕ್ಷೇತ್ರಕ್ಕೆ ಕಾಲಿಡಲು ಅವಕಾಶ ನೀಡುವ ಪ್ರಸ್ತಾಪ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸದ್ಯ ಭಾರತದಲ್ಲಿ ಇಂಡಿಗೋ ಮತ್ತು ಏರ್ಇಂಡಿಯಾವು ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ.90ರಷ್ಟು ಪಾಲು ಹೊಂದಿವೆ. ಒಂದು ವೇಳೆ ಅದಾನಿ, ಜಿಎಂಆರ್ನಂಥ ಕಂಪನಿಗಳಿಗೆ ವಿಮಾನಯಾನ ಸೇವೆ ಕಲ್ಪಿಸಲು ಅವಕಾಶ ನೀಡಿದರೆ ಸ್ಪರ್ಧೆ ಹೆಚ್ಚಾಗಲಿದ್ದು, ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ. ಸದ್ಯ ಅದಾನಿ ಪ್ರಸ್ತಾಪ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಅಭಿಪ್ರಾಯ ಕೇಳಿದೆ.
ಅದಾನಿ ಸಂಸ್ಥೆ ಈಗಾಗಲೇ ದೇಶದಲ್ಲಿ 8 ಏರ್ಪೋರ್ಟ್ಗಳನ್ನು ನಿರ್ವಹಿಸುತ್ತಿದೆ. ಪೈಲಟ್ಗಳಿಗೂ ತರಬೇತಿ ನೀಡುತ್ತಿದೆ. ಏರ್ಪೋರ್ಟ್ ನಿರ್ವಹಣೆ ಮತ್ತು ರಿಪೇರಿ, ಗ್ರೌಂಡ್ ನಿರ್ವಹಣೆ ಕ್ಷೇತ್ರದಲ್ಲೂ ಇದೆ. ಅಲ್ಲದೆ, ಬ್ರೆಜಿಲ್ನ ಎಂಬ್ರೇಯರ್ ವಿಮಾನವನ್ನು ಭಾರತದಲ್ಲಿ ಉತ್ಪಾದನೆಗೂ ಮುಂದಾಗಿದೆ.
ಹಾಲಿ ನಿಯಮಾವಳಿಗಳ ಪ್ರಕಾರ, ದೇಶದ ವಿಮಾನ ನಿಲ್ದಾಣಗಳನ್ನು (ಏರ್ಪೋರ್ಟ್) ನಿರ್ವಹಿಸುವ ಕಂಪನಿಗಳು ಯಾವುದೇ ನಿಗದಿತ ವಿಮಾನಯಾನ (ಏರ್ಲೈನ್ಸ್) ಸಂಸ್ಥೆಯಲ್ಲಿ ಶೇ. 10 ಕ್ಕಿಂತ ಹೆಚ್ಚು ಪಾಲನ್ನು ಹೊಂದುವಂತಿಲ್ಲ. ಈ ಹಿತಾಸಕ್ತಿ ಸಂಘರ್ಷದ ನಿಯಮವನ್ನು ಸಡಿಲಗೊಳಿಸುವಂತೆ ಅದಾನಿ ಸಮೂಹವು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವಿನಂತಿಸಿದೆ.
ಕೇಂದ್ರ ಸರ್ಕಾರವು 2006 ರಲ್ಲಿ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಿದ ಸಂದರ್ಭದಲ್ಲಿ ಒಪ್ಪಂದದಲ್ಲಿ ಒಂದು ಮುಖ್ಯ ಷರತ್ತನ್ನು ವಿಧಿಸಿತ್ತು. ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ನಿರ್ವಾಹಕರು ಯಾವುದೇ ವಿಮಾನಯಾನ ಸಂಸ್ಥೆಯ ಮಾಲೀಕತ್ವ ಪಡೆದರೆ, ಅವರು ತಮ್ಮದೇ ವಿಮಾನಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದು ಎಂಬ ಕಾರಣಕ್ಕೆ ಈ ನಿರ್ಬಂಧ ಹೇರಲಾಗಿತ್ತು.
ಪ್ರಸ್ತುತ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶೇ. 74 ರಷ್ಟು ಪಾಲನ್ನು ಅದಾನಿ ಗ್ರೂಪ್ ಹೊಂದಿದ್ದರೆ, ದೆಹಲಿ ವಿಮಾನ ನಿಲ್ದಾಣದ ಬಹುಪಾಲು ಒಡೆತನವನ್ನು ಜಿಎಂಆರ್ (GMR) ಸಂಸ್ಥೆ ಹೊಂದಿದೆ. ಹೀಗಾಗಿ, ಈ ಎರಡೂ ದೈತ್ಯ ಸಂಸ್ಥೆಗಳು ವಿಮಾನಯಾನ ಕ್ಷೇತ್ರಕ್ಕೆ ನೇರವಾಗಿ ಕಾಲಿಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಈ ಹಳೆಯ ನಿಯಮವನ್ನು ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡಲು ಸಾಧ್ಯವೇ ಎಂಬ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಕಾನೂನು ಅಭಿಪ್ರಾಯವನ್ನು ಕೇಳಿದೆ. ಈ ತಿದ್ದುಪಡಿ ಜಾರಿಗೆ ಬರಬೇಕಾದರೆ ಕೇಂದ್ರ ಸಚಿವ ಸಂಪುಟದ (Cabinet) ಅನುಮೋದನೆ ಅಗತ್ಯವಾಗಿರುತ್ತದೆ.
ಕಳೆದ ಕೆಲವು ವರ್ಷಗಳಿಂದ ಅದಾನಿ ಗ್ರೂಪ್ ವಾಯುಯಾನದ ಇಡೀ ವ್ಯವಸ್ಥೆಯಲ್ಲಿ ತನ್ನ ನೆಟ್ವರ್ಕ್ ಅನ್ನು ಸ್ಥಿರವಾಗಿ ವಿಸ್ತರಿಸುತ್ತಿದೆ. ಇದರ ಜೊತೆಗೆ, ಅದಾನಿ ಸಮೂಹವು ಬ್ರೆಜಿಲ್ನ ಪ್ರಸಿದ್ಧ ವಿಮಾನ ತಯಾರಕ ಕಂಪನಿಯಾದ 'ಎಂಬ್ರೇರ್' (Embraer) ಜೊತೆ ಪಾಲುದಾರಿಕೆ ಮಾಡಿಕೊಂಡು ಭಾರತದಲ್ಲೇ ವಿಮಾನ ಉತ್ಪಾದನೆಗೆ ಮುಂದಾಗಿದೆ. ಆದರೆ, ಭಾರತದ ಹಾಲಿ ವಿಮಾನಯಾನ ಸಂಸ್ಥೆಗಳಿಂದ ಎಂಬ್ರೇರ್ ವಿಮಾನಗಳನ್ನು ಖರೀದಿಸಲು ನಿರೀಕ್ಷಿತ ಮಟ್ಟದ ಆರ್ಡರ್ಗಳು ಲಭ್ಯವಾಗುತ್ತಿಲ್ಲ. ಹೀಗಾಗಿ, ತಾನೇ ಸ್ವತಃ ಒಂದು ವಿಮಾನಯಾನ ಸಂಸ್ಥೆಯನ್ನು ಹೊಂದಿದ್ದರೆ, ತನ್ನದೇ ಉತ್ಪಾದನಾ ಯೋಜನೆಯನ್ನು ವಾಣಿಜ್ಯಿಕವಾಗಿ ಯಶಸ್ವಿಗೊಳಿಸಬಹುದು ಎಂಬುದು ಅದಾನಿ ಗ್ರೂಪ್ನ ಲೆಕ್ಕಾಚಾರವಾಗಿದೆ.
ಒಂದು ವೇಳೆ ಈ ನಿಯಮಕ್ಕೆ ತಿದ್ದುಪಡಿ ತಂದರೂ ಸಹ, ವಿಮಾನ ನಿಲ್ದಾಣ ಮತ್ತು ವಿಮಾನಯಾನ ವ್ಯವಹಾರಗಳ ನಡುವೆ ಸಮಾನ ಅಂತರ ಕಾಯ್ದುಕೊಳ್ಳಲು (Arms-length relationship) ಕಠಿಣ ಸುರಕ್ಷತಾ ಕ್ರಮಗಳನ್ನು ತರಲು ಸರ್ಕಾರ ಯೋಚಿಸಿದೆ. ಸ್ಲಾಟ್ ಹಂಚಿಕೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳದಂತೆ ನಿರ್ಬಂಧಿಸುವುದು ಹಾಗೂ ಎರಡೂ ಸಂಸ್ಥೆಗಳಲ್ಲಿ ಒಂದೇ ನಿರ್ವಹಣಾ ಸಿಬ್ಬಂದಿ (Common Management) ಇರುವುದನ್ನು ನಿಷೇಧಿಸುವ ಮೂಲಕ ಯಾವುದೇ ಅನ್ಯಾಯದ ಪ್ರಯೋಜನಗಳನ್ನು ತಡೆಯಲು ಹೊಸ ನಿಯಮಾವಳಿಗಳನ್ನು ರೂಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.