
ನವದೆಹಲಿ(ಜು.6): 7ನೇ ವೇತನ ಆಯೋಗದ ವರದಿಯ ಆಧಾರದ ಮೇಲೆ ಅಧಿಕಾರಶಾಹಿಯ ಹಲವು ವಿಭಾಗಗಳು ವೇತನ ಏರಿಕೆಯನ್ನು ಈಗಾಗಲೇ ಸ್ವೀಕರಿಸಿವೆ. ಆದರೆ ಬೃಹತ್ ಸಂಖ್ಯೆಯಲ್ಲಿರುವ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ನೀಡಲು ಸರ್ಕಾರ ತನ್ನ ಖಜಾನೆಯನ್ನು ನೀರಿನಂತೆ ಹರಿಸಬೇಕಾಗಿದೆ. ಖಜಾನೆ ಎಷ್ಟು ತುಂಬಿದೆ ಎಂಬುದರ ಮೇಲೆ 7ನೇ ವೇತನ ಆಯೋಗದ ಅನುಮೋದನೆ ಅವಲಂಬಿಸಿದೆ.
ಪ್ರಸಕ್ತ ಎನ್ ಡಿಎ ಸರ್ಕಾರ ಪ್ರತೀ ಕ್ವಿಂಟಾಲ್ ಭತ್ತಕ್ಕೆ 200 ರೂ. ಬೆಂಬಲ ಬೆಲೆ ಘೋಷಿಸಿದೆ. ಅರ್ಥಶಾಸ್ತ್ರಜ್ಞರ ಪ್ರಕಾರ, ಇದು ಚಿಲ್ಲರೆ ಹಣದುಬ್ಬರವನ್ನು 70 ಆಧಾರದ ಅಂಕಗಳಿಂದ ಹೆಚ್ಚಿಸುತ್ತದೆ. ಸಗಟು ಹಣದುಬ್ಬರವು 38 ಬಿಪಿಎಸ್ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಸನ್ನಿವೇಶದಲ್ಲಿ ಕೇಂದ್ರ ನೌಕರರ 7ನೇ ವೇತನ ಆಯೋಗ ಆಧಾರಿತ ಬೇಡಿಕೆಗಳನ್ನು ಕೇಂದ್ರ ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸಿಬ್ಬಂದಿ 7 ನೇ ಸಿಪಿಸಿ ಫಿಟ್ಮೆಂಟ್ ಫ್ಯಾಕ್ಟರ್ ನಲ್ಲಿ 3.68 ಪಟ್ಟು ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗೆ ಅವರು ತಮ್ಮ ವೇತನಗಳ ಅಸಮರ್ಪಕ ಸ್ವರೂಪವನ್ನು ಉಲ್ಲೇಖಿಸಿದ್ದಾರೆ. ಆದರೆ ಈ ಬೇಡಿಕೆಗೆ ಕೇಂದ್ರ ಸ್ಪಂದಿಸಿ ವೇತನ ಹೆಚ್ಚಳಕ್ಕೆ ಕೈಗೊಳ್ಳುವ ಯಾವುದೇ ಹೆಜ್ಜೆ ಹಣದುಬ್ಬರವನ್ನೂ ಹೆಚ್ಚಿಸಬಹುದು ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ .
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ ಸುಮಾರು 50 ಲಕ್ಷ ಇದ್ದು, ಇಷ್ಟೇ ಸಂಖ್ಯೆಯ ನಿವೃತ್ತ ನೌಕರರೂ ಇದ್ದಾರೆ. ಈ ಸಂದರ್ಭದಲ್ಲಿ ವೇತನ ಹೆಚ್ಚಳ ಖಂಡಿತವಾಗಿ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಹಣದುಬ್ಬರಕ್ಕೆ ನಾಂದಿ ಹಾಡುತ್ತದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆದಾಗ್ಯೂ, ವೇಗವಾಗಿ ಬೆಳೆಯುತ್ತಿರುವ ಭಾರತೀಯ ಆರ್ಥಿಕತೆಯು ಎಲ್ಲರಲ್ಲಿಯೂ ಆಶಾಭಾವನೆ ಮೂಡಿಸಿದ್ದು, 7ನೇ ವೇತನ ಆಯೋಗದ ವರದಿಯ ಶಿಫಾರಸ್ಸನ್ನು ಕೇಂದ್ರ ಒಪ್ಪಿದರೂ ಶೇ. 8 ರಷ್ಟು ಜಿಡಿಪಿ ಬೆಳವಣಿಗೆಯನ್ನು ಹೊಂದುವ ನಿರೀಕ್ಷೆಯಿದೆ ಎನ್ನಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.