Union Budget 2022: ಬಜೆಟ್‌ನಲ್ಲಿ ಸಿಕ್ಕಿದ್ದು ಕರ್ನಾಟಕಕ್ಕೆ 2 ಯೋಜನೆ... ಲೆಕ್ಕಕ್ಕುಂಟು ಆಟಕ್ಕಿಲ್ಲ!

By Kannadaprabha NewsFirst Published Feb 2, 2022, 3:48 AM IST
Highlights

* ಕರ್ನಾಟಕಕ್ಕೆ 2 ಯೋಜನೆ ಲೆಕ್ಕಕ್ಕುಂಟು ಆಟಕ್ಕಿಲ್ಲ
* ನಿಮ್ಹಾನ್ಸ್‌ ಅಡಿ 23 ಟೆಲಿ ಮೆಂಟಲ್‌ ಹೆಲ್ತ್‌ ಸೆಂಟರ್‌ ನಿರ್ಮಾಣ
* ಕಾವೇರಿ-ಪೆನ್ನಾರ್‌ ಜೋಡಣೆ ಯೋಜನೆ ಅನುಷ್ಠಾನಕ್ಕೆ ಉತ್ತೇಜನ
* 2 ಯೋಜನೆಗಳೂ ರಾಜ್ಯದ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ

ಬೆಂಗಳೂರು(ಫೆ. 02)  ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ (Union Budget) ಬಜೆಟ್‌ನಲ್ಲಿ ಕರ್ನಾಟಕಕ್ಕೆ (Karnataka) ನಂಟು ಹೊಂದಿರುವ ಎರಡು ಯೋಜನೆಗಳು ಘೋಷಣೆ ಆಗಿದ್ದು, ಎರಡೂ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ಬೆಂಗಳೂರಿನ (Bengaluru) ನಿಮ್ಹಾನ್ಸ್‌ (NIMANS)ಮೇಲುಸ್ತುವಾರಿಯಲ್ಲಿ 23 ಟೆಲಿ ಮೆಂಟಲ್‌ ಹೆಲ್ತ್‌ ಸೆಂಟರ್‌ ನಿರ್ಮಾಣ ಮತ್ತು ಕಾವೇರಿ-ಪೆನ್ನಾರ್‌ ನದಿ ಜೋಡಣೆ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ ಇವೆರಡು ಯೋಜನೆಗಳೂ ರಾಜ್ಯದ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿವೆ.

ನಿಮ್ಹಾನ್ಸ್‌ನಡಿ 23 ಟೆಲಿ ಮೆಂಟಲ್‌ ಹೆಲ್ತ್‌ ಸೆಂಟರ್‌: ಕೊರೋನಾ ಸಂಕಷ್ಟಕಾಲವು ಎಲ್ಲ ವಯೋಮಾನದವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ‘ರಾಷ್ಟ್ರೀಯ ಟೆಲಿ ಮೆಂಟಲ್‌ ಆರೋಗ್ಯ ಕಾರ್ಯಕ್ರಮ’ ಪ್ರಾರಂಭಿಸಿ ಅದರಡಿ ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ(ಕೌನ್ಸಲಿಂಗ್‌)ಮತ್ತು ಕಾಳಜಿ ಸೇವೆಗಳನ್ನು ಒದಗಿಸುವ ಸಲುವಾಗಿ 23 ಟೆಲಿ ಮೆಂಟಲ್‌ ಹೆಲ್ತ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌ಗಳನ್ನು ನಿರ್ಮಿಸಲಾಗುವುದು. ಬೆಂಗಳೂರಿನ ನಿಮ್ಹಾನ್ಸ್‌ ಇದಕ್ಕೆ ನೋಡೆಲ್‌ ಸೆಂಟರ್‌ ಆಗಿದ್ದರೆ, ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿಬಿ)ಯು ತಾಂತ್ರಿಕ ನೆರವು ಒದಗಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕೇಂದ್ರ ನಜೆಟ್ ಸಂಪೂರ್ಣ ಚಿತ್ರಣ

2.ರಾಜ್ಯದಲ್ಲಿ 2 ನದಿ ಯೋಜನಾ ಯೋಜನೆ: ದೇಶದ ಒಟ್ಟು ಐದು ಅಂತಾರಾಜ್ಯ ನದಿಜೋಡಣೆಗಳಲ್ಲೊಂದಾದ ಕಾವೇರಿ-ಪೆನ್ನಾರ್‌ (River Interlinking) ಯೋಜನೆಯ ಫಲಾನುಭವಿಗಳಲ್ಲಿ ಕರ್ನಾಟಕವೂ ಒಂದು. ಈ ಯೋಜನೆಗಳಲ್ಲಿ ಈಗಾಗಲೇ ಅಂತಿಮ ವಿಸ್ಕೃತ ಯೋಜನಾ ಕರಡು ವರದಿ ಸಿದ್ಧಗೊಂಡಿದೆ. ಫಲಾನುಭವಿ ರಾಜ್ಯಗಳಿಂದ ಒಪ್ಪಿಗೆ ಸಿಕ್ಕೊಡನೆ ಕೇಂದ್ರ ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ಉತ್ತೇಜನ ನೀಡಲಿದೆ ಎಂದು ಸಚಿವೆ ಹೇಳಿದ್ದಾರೆ.

ಆಳ ಸಮುದ್ರದಲ್ಲಿ   ಸಂಪನ್ಮೂಲ ಶೋಧ ಆಳ ಸಮುದ್ರದಲ್ಲಿ ಸಂಪನ್ಮೂಲ ಶೋಧ ಯೋಜನೆಗೆ ಮೊದಲ ಹೆಜ್ಜೆಯಾಗಿ 650 ಕೋಟಿ ರು. ತೆಗೆದಿರಿಸಲಾಗಿದೆ. ಕಳೆದ ವರ್ಷಕ್ಕಿಂತ 150 ಕೋಟಿ ಹೆಚ್ಚಿಸಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಲ್ಪಟ್ಟಿದ್ದ ಈ ಯೋನೆಗೆ ಕಳೆದ ಜೂನ್‌ನಲ್ಲಿ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿತ್ತು. ಈ ಯೋಜನೆಯಡಿ ಸಮುದ್ರದಡಿ 6 ಕಿ.ಮೀ.ವರೆಗೂ ಸಂಪನ್ಮೂಲಗಳನ್ನು ಹುಡುಕಬಹುದಾಗಿದೆ. ಅಲ್ಲದೇ ಸಮುದ್ರದಾಳದಲ್ಲಿ ಕಾರ್ಯಾಚರಿಸುವ ವಾಹನಗಳನ್ನು ಅಭಿವೃದ್ಧಿ ಪಡಿಸಬಹುದಾಗಿದೆ.

2 ಲಕ್ಷ ಅಂಗನವಾಡಿಗಳಿಗೆ ಆಧುನಿಕ ಸ್ಪರ್ಶ:  ಸಕ್ಷಮ್‌ ಅಂಗನವಾಡಿಗಳು ಯೋಜನೆಯಡಿ 2 ಲಕ್ಷ ಅಂಗನವಾಡಿಗಳನ್ನು ಹೊಸ ತಲೆಮಾರಿನ ಅಂಗನವಾಡಿಗಳಾದಗಿ ಪರಿವರ್ತಿಸಲಾಗುವುದು. ಈ ಸಕ್ಷಮ್‌ ಅಂಗನವಾಡಿಗಳಲ್ಲಿ ಉತ್ತಮವಾದ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಈ ಅಂಗನವಾಡಿಗಳು ಅಭಿವೃದ್ಧಿ ಹೊಂದಿದ ಶ್ರವಣ ಮತ್ತು ದೃಶ್ಯ ಸಾಧನಗಳನ್ನು ಹೊಂದಿರಲಿವೆ. ನವೀಕರಿಸಬಹುದಾದ ಇಂಧನದಿಂದ ಶಕ್ತಿಯನ್ನು ಪಡೆದುಕೊಳ್ಳುವ ಈ ಅಂಗನವಾಡಿಗಳು ಮಗುವಿನ ಆರಂಭಿಕ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಿವೆ. ಈ ಯೋಜನೆಯಡಿ 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ.

ನಾರೀಶಕ್ತಿ ಯೋಜನೆ: ದೇಶದ ಅಮೃತ ಕಾಲದ ಸಮಯದಲ್ಲಿ ಮಹಿಳಾ (Woman) ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಾರಿ ಯೋಜನೆ ಸರ್ಕಾರವನ್ನು ಜಾರಿಗೊಳಿಸಲಾಗಿದೆ. ಮಹಿಳಾ ಮತ್ತು ಮಹಿಳಾ ಸಚಿವಾಲಯದ ಯೋಜನೆಗಳನ್ನು ಪರಿಷ್ಕರಿಸಲಾಗಿದೆ. ಮಹಿಳಾ ಮಕ್ಕಳ ವಿಕಾಸಕ್ಕಾಗಿ ಇತ್ತೀಚಿಗೆ ಮಿಶನ್‌ ಶಕ್ತಿ, ಮಿಶನ್‌ ವಾತ್ಸಲ್ಯ ಮತ್ತು ಸಕ್ಷಮ್‌ ಅಂಗನವಾಡಿ ಯೋಜನೆಗಳನ್ನು ಇತ್ತೀಚಿಗೆ ಆರಂಭಿಸಲಾಯಿತು. ಬಜೆಟ್‌ ಮಂಡನೆಯ ವೇಳೆ ಈ ವಿಷಯಗಳ ಕುರಿತು ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಮತ್ತೊಮ್ಮೆ ಮಾತನಾಡಿದರು.

3.8 ಕೋಟಿ ಮನೆಗೆ ನಲ್ಲಿ ನೀರು:  2022-23ನೇ ಆರ್ಥಿಕ ವರ್ಷದಲ್ಲಿ ಪ್ರತಿಮನೆಗೂ ನಲ್ಲಿ ಮೂಲಕ ನೀರು ಕಲ್ಪಿಸಲು 60 ಸಾವಿರ ಕೋಟಿ ಹಂಚಿಕೆಯಾಗಿದೆ. ಈ ಹಣದಲ್ಲಿ ಸುಮಾರು 3.8ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ. ‘ಮನೆ ಮನೆಗೂ ನಲ್ಲಿ ನೀರು’ ಯೋಜನೆಯಡಿ ಒಟ್ಟು 8.7 ಕೋಟಿ ಮನೆಗಳಿಗೆ ನಲ್ಲಿ ನೀರು ಕಲ್ಪಿಸುವ ಗುರಿಯಿದ್ದು, ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ 5.5 ಕೋಟಿ ಮನೆಗಳಿಗೆ ನಲ್ಲಿ ನೀರು ಕಲ್ಪಿಸಲಾಗಿದೆ. ಉಳಿದ 3.8 ಕೋಟಿ ಮನೆಗಳಿಗೆ 60 ಸಾವಿರ ಕೋಟಿ ವೆಚ್ಚದಲ್ಲಿ ನಲ್ಲಿ ನೀರು ಕಲ್ಪಿಸಲಾಗುತ್ತದೆ.

click me!