
ಬೆಂಗಳೂರು (ಏ.18): ಧಾರವಾಡದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶಾಸಕ ವಿನಯ್ ಕುಲಕರ್ಣಿ ಅವರ ಜೈಲು ವಾಸದ ಮೊದಲ ರಾತ್ರಿ ಅತ್ಯಂತ ಕಷ್ಟಕರವಾಗಿತ್ತು. ರಾಜಕೀಯವಾಗಿ ಉತ್ತುಂಗದಲ್ಲಿದ್ದ ಶಾಸಕ ಈಗ ಜೈಲಿನ ಕತ್ತಲ ಕೋಣೆಯಲ್ಲಿ ಸಾಮಾನ್ಯ ಕೈದಿಯಂತೆ ಕಾಲ ಕಳೆಯುವಂತಾಗಿದೆ.
ನೆನ್ನೆ ಜೈಲಿಗೆ ಬಂದ ವಿನಯ್ ಕುಲಕರ್ಣಿಗೆ ಜೈಲಾಧಿಕಾರಿಗಳು ತಾತ್ಕಾಲಿಕವಾಗಿ UTP ನಂಬರ್ - 3674 (ವಿಚಾರಣಾಧೀನ ಕೈದಿ) ನೀಡಿದ್ದರು. ಆದರೆ, ಇಂದು ಬೆಳಿಗ್ಗೆ 11 ಗಂಟೆಯ ವೇಳೆಗೆ ಕಾನೂನು ಪ್ರಕ್ರಿಯೆಗಳ ನಂತರ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ ಅಪರಾಧಿಗಳಿಗೆ CTP (ಸಜಾ ಬಂಧಿ ಖೈದಿ) ನಂಬರ್ ಅಧಿಕೃತವಾಗಿ ನೀಡಲಾಗುತ್ತಿದೆ. ಈ ಮೂಲಕ ಶಾಸಕ ಎಂಬ ಹಣೆಪಟ್ಟಿ ಕಳಚಿ 'ಅಪರಾಧಿ' ಎಂಬ ಮುದ್ರೆ ಜೈಲಿನ ದಾಖಲೆಗಳಲ್ಲಿ ಭದ್ರವಾಗಿದೆ.
ವಿನಯ್ ಕುಲಕರ್ಣಿ ಮತ್ತು ಈ ಪ್ರಕರಣದ ಇತರ 17 ಅಪರಾಧಿಗಳನ್ನು ಸದ್ಯಕ್ಕೆ ಡಿ ಬ್ಯಾರಕ್ನ ಕ್ವಾರಂಟೈನ್ ಸೆಲ್ನಲ್ಲಿ ಇರಿಸಲಾಗಿದೆ. ನಿಯಮದ ಪ್ರಕಾರ ಮುಂದಿನ 10 ದಿನಗಳ ಕಾಲ ಇವರೆಲ್ಲರೂ ಇದೇ ಸೆಲ್ನಲ್ಲಿ ಇರಲಿದ್ದು, ಆ ಬಳಿಕ ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ. ವಿಶೇಷವೆಂದರೆ, ನಟ ದರ್ಶನ್ ಇರುವ ಬ್ಯಾರಕ್ ಮಾರ್ಗವಾಗಿಯೇ ಸ್ವಲ್ಪ ದೂರದಲ್ಲಿ ಕುಲಕರ್ಣಿ ಅವರ ವಾಸ್ತವ್ಯದ ಬ್ಯಾರಕ್ ಇದೆ.
ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ವಿನಯ್ ಕುಲಕರ್ಣಿ ನೆನ್ನೆ ಇಡೀ ರಾತ್ರಿ ಚಿಂತೆಗೀಡಾಗಿದ್ದರು ಎಂದು ತಿಳಿದುಬಂದಿದೆ. ನೆನ್ನೆ ರಾತ್ರಿ ಜೈಲಿನಲ್ಲಿ ಚಪಾತಿ ನೀಡಲಾಗಿತ್ತು. ಆದರೆ, ಕುಲಕರ್ಣಿ ಸರಿಯಾಗಿ ಊಟ ಮಾಡದೆ ಬೇಸರದಲ್ಲಿದ್ದರು. ಬ್ಯಾರಕ್ನ ಒಳಗೆ ವಿನಯ್ ಕುಲಕರ್ಣಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದ್ದು, ರಾಜಕೀಯ ಭವಿಷ್ಯ ಹಾಗೂ ಕುಟುಂಬದ ವಿಚಾರವಾಗಿ ತೀವ್ರ ಆತಂಕದಲ್ಲಿದ್ದಾರೆ. ರಾತ್ರಿಯೆಲ್ಲಾ ಮೌನವಾಗಿದ್ದ ಶಾಸಕರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಿದ್ದೆಗೆ ಜಾರಿದ್ದರು. ಮತ್ತೆ ಬೆಳಿಗ್ಗೆ ಬೇಗ ಎಚ್ಚರಗೊಂಡು ಸಹ ಕೈದಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ವಿನಯ್ ಕುಲಕರ್ಣಿ ಮಾತ್ರವಲ್ಲದೆ, ಪ್ರಕರಣದ ಇತರೆ ಅಪರಾಧಿಗಳು ಕೂಡ ತಮ್ಮ ಕುಟುಂಬದ ಸದಸ್ಯರನ್ನು ನೆನೆದು ಜೈಲಿನಲ್ಲಿ ಕಣ್ಣೀರು ಹಾಕಿದ್ದಾರೆ. ಇಷ್ಟು ವರ್ಷಗಳ ಕಾಲ ಹೊರಗಿದ್ದ ಇವರು, ಏಕಾಏಕಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವುದು ಇಡೀ ತಂಡವನ್ನು ಹತಾಶೆಗೆ ದೂಡಿದೆ.