
ಬೆಂಗಳೂರಿನಲ್ಲಿ ಆಟೋ, ಕ್ಯಾಬ್ಗಳ ದರ ಹೆಚ್ಚಾಗಿದೆ ಎಂದು ಜನಸಾಮಾನ್ಯರು ಚಿಂತೆಯಲ್ಲಿರುವಾಗಲೇ ಇನ್ನೊಂದು ಸ್ಕ್ಯಾಮ್ ಎಂದು ಓರ್ವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಂಗಳೂರಿನ ನಿವಾಸಿಯೊಬ್ಬರು ಸಿಟಿಯಲ್ಲಿ ಕ್ಯಾಬ್ನಲ್ಲಿ ಹೋಗುವಾಗ ಮಾಡಿದ ಮೋಸ ಎಂದು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ಕ್ಯಾಬ್ ಡ್ರೈವರ್ ಪ್ರಯಾಣ ದರವನ್ನು ಹೆಚ್ಚು ಮಾಡಲು ಹೊಸ ವಂಚನೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ರೆಡ್ಡಿಟ್ ಪೋಸ್ಟ್ನಲ್ಲಿ ಈ ವ್ಯಕ್ತಿಯು ಈ ಬಗ್ಗೆ ವಿವರಣೆ ಕೊಟ್ಟಿದ್ದು, ಉಳಿದವರಿಗೂ ಕೂಡ ಜಾಗರೂಕರಾಗಿ ಎಂದಿದ್ದಾರೆ.
“ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಜಕ್ಕೂರಿಗೆ ರಾಪಿಡೋ ರೈಡ್ ಬುಕ್ ಮಾಡಿದ್ದರು, ಆಪ್ನಲ್ಲಿ ಅಂದಾಜು ದರ ₹598 ಎಂದು ತೋರಿಸಿತ್ತು. ಅದು ನಾರ್ಮಲ್ ಆಗಿತ್ತು, ಅವರು ಡ್ರೈವರ್ಗೆ OTP ಕೊಟ್ಟು, ಇನ್ನೊಮ್ಮೆ ಆಪ್ನಲ್ಲಿ ಎಷ್ಟು ಹಣ ಆಗುವುದು ಎಂದು ಚೆಕ್ ಮಾಡಿಕೊಂಡರು. ಇನ್ನೇನು ಇಳಿಯುವ ಜಾಗ ಬಂದಾಗ ಡ್ರೈವರ್ 758 ರೂಪಾಯಿ ಎಂದು ಹೇಳಿದನು” ಎಂದಿದ್ದಾರೆ.
"ಇಳಿಯುವ ಜಾಗ ಬಂದಾಗ ಡ್ರೈವರ್, ತನ್ನ ಫೋನ್ನಲ್ಲಿ ₹758 ಆಗಿದೆ ಎಂದು ತೋರಿಸಿದನು. ಅದು ರಾಪಿಡೋ UI ನಂತೆ ಕಾಣುತ್ತಿತ್ತು, ಇಲ್ಲಿ ಏನೋ ತಪ್ಪಾಗಿದೆ, ಮಿಸ್ ಅನಿಸುತ್ತಿದೆ ಎಂದು ನನಗೆ ಅನಿಸಿತು. ನಾನು ನನ್ನ ಫೋನ್ನಲ್ಲಿ ರಾಪಿಡೋ ಆಪ್ ಚೆಕ್ ಮಾಡಿದೆ, ರೈಡ್ ಮುಗಿದಿಲ್ಲ ಎಂದು ತೋರಿಸಿತು" ಎಂದು ಬರೆದುಕೊಂಡಿದ್ದಾರೆ.
“ಡ್ರೈವರ್ ಬಳಿ ನಿಮ್ಮ ಆಪ್ ತೋರಿಸಿ ಎಂದು ಒತ್ತಾಯ ಮಾಡಿದರು. ಆಗ ಅವನು ಫೋನ್ ಕೊಟ್ಟನು, ಆ ಫೋನ್ನಲ್ಲಿ TownRide ಎಂಬ ನಕಲಿ ಆಪ್ ಇದ್ದು, ಅದರಲ್ಲಿ ಬಿಲ್ಲಿಂಗ್ ತೋರಿಸುತ್ತಿದೆ ಎನ್ನೋದು ಗೊತ್ತಾಯ್ತು. ಇದು ರಾಪಿಡೋ ಇಂಟರ್ಫೇಸ್ನಂತೆ ಕಾಣುತ್ತದೆ, ಆದರೆ ದರ ಮೊತ್ತವನ್ನು ನಾವು ಹೇಗೆ ಬೇಕಿದ್ರೂ ಬದಲಾಯಿಸಬಹುದು. ನಾನು ಡ್ರೈವರ್ ಬಳಿ ಇದರ ಬಗ್ಗೆ ಕೇಳಿದಾಗ, ತುಂಬ ಟೈಮ್ನಿಂದ ಬಳಸುತ್ತಿದ್ದೇನೆ ಎಂದು ಹೇಳಿದರು” ಎಂದಿದ್ದಾರೆ.
ನಾನು ಇದರ ಬಗ್ಗೆ ಡ್ರೈವರ್ ಜೊತೆ ಮಾತನಾಡಿದೆ, ಆಗ ಅವರು ಜಗಳಕ್ಕೆ ಇಳಿದರು. ಎಷ್ಟು ಹಣ ಇದೆಯೋ ಅಷ್ಟು ಹಣವನ್ನು ಕೊಡ್ತೀನಿ ಎಂದಾಗ ಒಪ್ಪಲಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
"ನಿಜಕ್ಕೂ ಏನಾಗುತ್ತಿದೆ ಎನ್ನೋದು ಗೊತ್ತಾಯ್ತು, ಧ್ವನಿ ಏರಿಸಿ ಮಾತನಾಡಿದೆ. ಆಮೇಲೆ ನಾನು ಮಾಡುತ್ತಿರುವುದು ತಪ್ಪು ಎಂದು ಅವರಿಗೆ ಗೊತ್ತಾಗಿ ಅಧಿಕೃತ ರ್ಯಾಪಿಡೋ ಆಪ್ನಲ್ಲಿ ತೋರಿಸಿದ ಮೊತ್ತವನ್ನು ಸ್ವೀಕರಿಸಲು ಒಪ್ಪಿಕೊಂಡರು” ಎಂದು ಹೇಳಿದ್ದಾರೆ.
ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ನನಗೆ ಕೂಡ ಇಂದು ಇದೇ ರೀತಿ ಆಯ್ತು, ನಾನು ಉಬರ್ ಬಳಸಿದ್ದೆ. ಒಂದು ಕ್ಷಣ ನನಗೆ ಹೆಚ್ಚಾದ ಬಿಲ್ ತೋರಿಸಿ, ಆಪ್ ಕ್ಲೋಸ್ ಮಾಡಿದರು. ಎಷ್ಟು ಬಿಲ್ ಆಗಿದೆಯೋ ಅಷ್ಟು ಕೊಡಲು ರೆಡಿಯಾದ ನಂತರ ಅವರು ಇನ್ನಷ್ಟು ಧ್ವನಿ ಎತ್ತಿ ಮಾತನಾಡಿದರು, ನಾನು ಕೇಳಲಿಲ್ಲ” ಎಂದು ಓದುಗರೊಬ್ಬರು ಹೇಳಿಕೊಂಡಿದ್ದಾರೆ.
Disclaimer: ಈ ಲೇಖನವನ್ನು ಎಷಿಯಾನೆಟ್ ಸುವರ್ಣ ನ್ಯೂಸ್ ಸಮರ್ಥಿಸಿಕೊಳ್ಳುವುದಿಲ್ಲ, ಇದು ಓದುಗರ ಅಭಿಪ್ರಾಯವಷ್ಟೇ..