
ಬೆಂಗಳೂರು (ಜೂ.6): ಕಾಡುಗೋಡಿ ಪೊಲೀಸರು ಅತ್ಯಂತ ರಹಸ್ಯ ಹಾಗೂ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಆರು ವರ್ಷದ ಹೆಣ್ಣುಮಗುವೊಂದು ಸಾವನ್ನಪ್ಪಿದ ಮೂರು ತಿಂಗಳ ಬಳಿಕ, ಆ ಪ್ರಕರಣವನ್ನು ಕೊಲೆ ಎಂದು ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಮಗುವಿನ ತಾಯಿ, ವೃತ್ತಿಯಿಂದ ವಕೀಲೆಯಾಗಿರುವ ಪಿ. ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಎನ್ನಲಾದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಜಿ.ಎಂ. ಮೋಹನ್ ಈಗ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಪ್ರಸ್ತುತ ಮೋಹನ್ನನ್ನು ಪೊಲೀಸರು 7 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಪ್ರಿಯಾಂಕಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ದಾವಣಗೆರೆಯಲ್ಲಿ 'ಕ್ಲೌಡ್9 ಇಂಟರ್ನ್ಯಾಷನಲ್ ಸ್ಕೂಲ್' ನಡೆಸುತ್ತಿರುವ ಮೃತ ಮಗುವಿನ ತಂದೆ ಪ್ರವೀಣ್ ಬಸಪ್ಪ ಅವರು ನೀಡಿದ ಅಧಿಕೃತ ಪೊಲೀಸ್ ದೂರಿನಿಂದಾಗಿ ಈ ದುರಂತದ ಹಿಂದಿನ ರಹಸ್ಯ ಬಯಲಾಗಿದೆ. ಪ್ರವೀಣ್ ಅವರ ಪ್ರಕಾರ, ಪ್ರಿಯಾಂಕಾ ಜೊತೆಗಿನ ಅವರ 17 ವರ್ಷಗಳ ವೈವಾಹಿಕ ಜೀವನವು 2025 ರ ಕೊನೆಯಲ್ಲಿ ಬಿರುಕು ಬಿಡಲು ಪ್ರಾರಂಭಿಸಿತು. 25 ಎಕರೆ ಪಿತ್ರಾರ್ಜಿತ ಭೂಮಿಗೆ ಸಂಬಂಧಿಸಿದ ಸಿವಿಲ್ ನ್ಯಾಯಾಲಯದ ವಿವಾದವೊಂದನ್ನು ನಿಭಾಯಿಸಲು ಪ್ರಿಯಾಂಕಾ ಬೆಂಗಳೂರಿಗೆ ಬಂದಿದ್ದಾಗ, ತನ್ನ ಕಾಲೇಜು ಸಹಪಾಠಿ ಹಾಗೂ ಹಳೆಯ ಪ್ರಿಯಕರನಾಗಿದ್ದ ಜಿ.ಎಂ. ಮೋಹನ್ನನ್ನು ಮತ್ತೆ ಭೇಟಿಯಾಗಿದ್ದಳು. ಮೋಹನ್ ತನಗೆ 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಹೇಳಿಕೊಂಡಿದ್ದ.
ಪ್ರಿಯಾಂಕಾಳ ಜೀವನಶೈಲಿ ರಾತ್ರೋರಾತ್ರಿ ಬದಲಾಯಿತು ಎಂದು ಪ್ರವೀಣ್ ಆರೋಪಿಸಿದ್ದಾರೆ. ಡಿಸೆಂಬರ್ 2025 ರ ವೇಳೆಗೆ ಆಕೆ ಕಾಶಿಯಲ್ಲಿ ಮೋಹನ್ನನ್ನು ರಹಸ್ಯವಾಗಿ ವಿವಾಹವಾಗಿದ್ದಳು ಮತ್ತು ಹೊಸ ವರ್ಷದ ಆಚರಣೆಗಾಗಿ ದುಬೈಗೆ ಅದ್ಧೂರಿ ಪ್ರವಾಸ ಕೈಗೊಂಡಿದ್ದಳು ಎನ್ನಲಾಗಿದೆ.
ಜನವರಿಯಲ್ಲಿ ಆಕೆ ಹಿಂತಿರುಗಿದ ನಂತರ, ತನ್ನ ಇಬ್ಬರು ಹೆಣ್ಣುಮಕ್ಕಳನ್ನು ನೋಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ವಿಚ್ಛೇದನದ ಪತ್ರಗಳಿಗೆ ಸಹಿ ಹಾಕುವಂತೆ ಪ್ರವೀಣ್ ಅವರನ್ನು ಒತ್ತಾಯಿಸಲಾಗಿತ್ತು. ವಿಚ್ಛೇದನದ ನಂತರ, ದಂಪತಿಯ ಹಿರಿಯ ಮಗಳು ಪ್ರವೀಣ್ ಜೊತೆ ಉಳಿದುಕೊಂಡರೆ, ಆರು ವರ್ಷದ ವೆನ್ನೆಲಾ ಸೀಗೇಹಳ್ಳಿಯ ಬಾಡಿಗೆ ವಿಲ್ಲಾದಲ್ಲಿ ಪ್ರಿಯಾಂಕಾ ಮತ್ತು ಮೋಹನ್ ಜೊತೆ ವಾಸಿಸಲು ಪ್ರಾರಂಭಿಸಿದಳು.
ಮಗುವಿನ ಕೊಲೆ ನಡೆದಿರುವ ಸಮಯ ಮಾರ್ಚ್ 24ರ ರಾತ್ರಿ ಆಗಿರಬಹುದು. ಅಂದು ಪ್ರಿಯಾಂಕಾಳ ಜನ್ಮದಿನವಾಗಿತ್ತು. ಆರಂಭದಲ್ಲಿ ಪ್ರಿಯಾಂಕಾ, ತಾನು ವೆನ್ನೆಲಾಗೆ ಬಿರಿಯಾನಿ ಮತ್ತು ಐಸ್ಕ್ರೀಮ್ ತಿನ್ನಿಸಿದ್ದಾಗಿ ಹೇಳಿದ್ದಾಳೆ. ತದನಂತರ ಆಕೆ ಮೋಹನ್ ಜೊತೆ ಕಾಫಿ ಶಾಪ್ಗೆ ಹೋಗುವಾಗ, ಆರು ವರ್ಷದ ವೆನ್ನೆಲಾಳನ್ನು ಕಾರಿನ ಎಸಿ (Air Conditioning) ಆನ್ ಮಾಡಿ, ಕಾರಿನ ಒಳಗೇ ಮಲಗಿಸಿ ಹೋಗಿದ್ದಾಳೆ ಎನ್ನಲಾಗಿದೆ. ನಂತರ ರಾತ್ರಿ ಮನೆಗೆ ಮರಳಿದಾಗ ಮಲಗಿದ್ದ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದ್ದಾಗಿ ಪ್ರಿಯಾಂಕಾ ಕುಟುಂಬಸ್ಥರಿಗೆ ತಿಳಿಸಿದ್ದಳು. ಆದರೆ ಮಾರನೇ ದಿನ ಬೆಳಿಗ್ಗೆ, ಅಂದರೆ ಮಾರ್ಚ್ 25 ರಂದು ವೆನ್ನೆಲಾ ಎದ್ದೇಳಲೇ ಇಲ್ಲ. ತಕ್ಷಣ ಆಕೆಯನ್ನು ವೈಟ್ಫೀಲ್ಡ್ನ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆಕೆ ಈಗಾಗಲೇ ಮೃತಪಟ್ಟಿರುವುದಾಗಿ (Brought Dead) ಘೋಷಿಸಿದರು.
ಏಪ್ರಿಲ್ 4 ರಂದು ಪ್ರವೀಣ್ ಅವರಿಗೆ ಮಗುವಿನ ಅಧಿಕೃತ ಮರಣೋತ್ತರ ಪರೀಕ್ಷೆಯ (Autopsy) ವರದಿ ಸಿಕ್ಕ ಬಳಿಕ ಈ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿತು. ವರದಿಯ ಬಗ್ಗೆ ಸ್ಪಷ್ಟತೆಗಾಗಿ, ಅವರು ಅದನ್ನು ಇಂಗ್ಲೆಂಡ್ನಲ್ಲಿ ಮಕ್ಕಳ ತಜ್ಞೆಯಾಗಿ ಕೆಲಸ ಮಾಡುತ್ತಿರುವ ತಮ್ಮ ಹಿರಿಯ ಸಹೋದರಿ ಡಾ. ಪೂರ್ಣಿಮಾ ಅವರೊಂದಿಗೆ ಹಂಚಿಕೊಂಡರು.
ವೈದ್ಯಕೀಯ ವರದಿಯಲ್ಲಿದ್ದ ತೀವ್ರ ವ್ಯತ್ಯಾಸಗಳನ್ನು ತಕ್ಷಣವೇ ಗಮನಿಸಿದ ಡಾ. ಪೂರ್ಣಿಮಾ, ಇದರಲ್ಲಿ ಏನೋ ಸಂಚು ನಡೆದಿರುವ ಬಲವಾದ ಅನುಮಾನ ವ್ಯಕ್ತಪಡಿಸಿದರು. ವೈದ್ಯಕೀಯ ತಜ್ಞರ ಈ ಅನುಮಾನಗಳ ಬೆನ್ನಲ್ಲೇ ಪ್ರವೀಣ್ ಕಾಡುಗೋಡಿ ಪೊಲೀಸರನ್ನು ಸಂಪರ್ಕಿಸಿ, ಪ್ರಿಯಾಂಕಾ ಮತ್ತು ಮೋಹನ್ ತಮ್ಮ ಹೊಸ ಜೀವನಕ್ಕೆ ಈ ಮಗು "ಅಡ್ಡಲಾಗಿದ್ದಾಳೆ" ಎಂಬ ಕಾರಣಕ್ಕೆ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪೊಲೀಸರು ಈಗ ಅಧಿಕೃತವಾಗಿ ಈ ಪ್ರಕರಣವನ್ನು ಕೊಲೆ ತನಿಖೆಯಾಗಿ ಬದಲಾಯಿಸಿದ್ದು, ಮಗುವನ್ನು ವಾಹನದಲ್ಲಿ ಇರಿಸುವ ಮೊದಲು ಉದ್ದೇಶಪೂರ್ವಕವಾಗಿ ಉಸಿರುಗಟ್ಟಿಸಿ ಅಥವಾ ವಿಷ ಉಣಿಸಿ ಕೊಲ್ಲಲಾಗಿದೆಯೇ ಎಂಬ ಬಗ್ಗೆ ತೀವ್ರವಾಗಿ ಗಮನ ಹರಿಸುತ್ತಿದ್ದಾರೆ. ಇಬ್ಬರೂ ಆರೋಪಿಗಳ ಹೆಚ್ಚಿನ ವಿಚಾರಣೆ ಪ್ರಸ್ತುತ ನಡೆಯುತ್ತಿದೆ.
ವೈಟ್ಫೀಲ್ಡ್ನ ಉಪ ಪೊಲೀಸ್ ಆಯುಕ್ತ (DCP) ಸೈದಲ್ ಅದಾವತ್ ಮಾಹಿತಿ ನೀಡಿ, ವೆನ್ನೆಲಾ ಸಾವನ್ನಪ್ಪಿದ ಬೆನ್ನಲ್ಲೇ ಮೋಹನ್ ಮುಂಗಡ ಜಾಮೀನು (Anticipatory Bail) ಪಡೆದಿದ್ದ ಎಂದು ತಿಳಿಸಿದ್ದಾರೆ.
"ಆದರೆ ಆಗ ನಮ್ಮ ಕೈಯಲ್ಲಿ ಸಂಪೂರ್ಣ ಮರಣೋತ್ತರ ಪರೀಕ್ಷೆಯ ವರದಿ ಇರಲಿಲ್ಲ. ಅಲ್ಲದೆ, ವೆನ್ನೆಲಾ ಉಸಿರುಗಟ್ಟುವಿಕೆಯಿಂದ (Asphyxiation) ಸಾವನ್ನಪ್ಪಿರಬಹುದು ಎಂದು ವೈದ್ಯರು ಶಂಕಿಸಿದ್ದರು. ಅಲ್ಲದೆ, ರಕ್ತದಲ್ಲಿ ಯಾವುದೇ ವಿಷದ ಅಂಶಗಳು ಪತ್ತೆಯಾಗಿರಲಿಲ್ಲ. ನಂತರ, ನಾವು ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಂಡು, ವಿಸೇರಾ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದೆವು. ಎಫ್ಎಸ್ಎಲ್ನಿಂದ ಸಂಪೂರ್ಣ ವರದಿಗಳು ಇನ್ನು ಬರಬೇಕಾಗಿದೆ, ಅವು ಶೀಘ್ರದಲ್ಲೇ ಸಿಗಲಿವೆ" ಎಂದು ಅದಾವತ್ ಹೇಳಿದ್ದಾರೆ. "ಪರಿಸ್ಥಿತಿಯ ಮತ್ತು ವೈದ್ಯಕೀಯ ಪುರಾವೆಗಳ ಆಧಾರದ ಮೇಲೆ, ನಾವು ನ್ಯಾಯಾಲಯವನ್ನು ಸಂಪರ್ಕಿಸಿ ಶುಕ್ರವಾರ ಮೋಹನ್ನ ಮುಂಗಡ ಜಾಮೀನನ್ನು ರದ್ದುಗೊಳಿಸಿದ್ದೇವೆ," ಎಂದು ಅವರು ತಿಳಿಸಿದ್ದಾರೆ.