
ಬೆಂಗಳೂರು: ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿ ಮೆರೆದಿದ್ದ ನಟ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೊಳ್ಳೆಗಳೇ ದೊಡ್ಡ ಚಾಲೆಂಜ್ ಆಗಿ ಪರಿಣಮಿಸಿವೆ. ಕಳೆದ ಎರಡು ದಿನಗಳಿಂದ ಸೊಳ್ಳೆಗಳ ಕಾಟಕ್ಕೆ ಸಿಲುಕಿರುವ ದರ್ಶನ್, ನಿದ್ರೆ ಇಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಇತ್ತೀಚೆಗೆ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಜೈಲು ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇದರಿಂದಾಗಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರಿಗೂ ಸಂಕಷ್ಟ ಎದುರಾಗಿದೆ. ಜೈಲಿನಲ್ಲಿ ನಿಷೇಧಿತ ವಸ್ತುಗಳಿಗೆ ಮತ್ತು ವಿಶೇಷ ಸೌಲಭ್ಯಗಳಿಗೆ ಅಧಿಕಾರಿಗಳು ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಯಾವುದೇ ರಾಜಾತಿಥ್ಯ ಸಿಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಹೈಫೈ ಲೈಫ್ ಲೀಡ್ ಮಾಡುತ್ತಿದ್ದ ದರ್ಶನ್ಗೆ ಸೊಳ್ಳೆಗಳ ಕಾಟ ನರಕ ದರ್ಶನ ಮಾಡಿಸುತ್ತಿದೆ. ಜೈಲಿನಲ್ಲಿ ಸೊಳ್ಳೆ ಪರದೆ ಒದಗಿಸಲು ಅವಕಾಶ ಇಲ್ಲದ ಕಾರಣ, ಕಳೆದ ಎರಡು ರಾತ್ರಿಗಳಿಂದ ದರ್ಶನ್ ಸರಿಯಾಗಿ ನಿದ್ರೆ ಮಾಡಿಲ್ಲ. ಸೊಳ್ಳೆಗಳ ಆರ್ಭಟಕ್ಕೆ ನಟ ಕಂಗಾಲಾಗಿದ್ದು, ಮುಖ ಹಾಗೂ ಕೈಕಾಲುಗಳ ಮೇಲೆ ಸೊಳ್ಳೆ ಕಚ್ಚಿದ ಗುರುತುಗಳು ಕಾಣಿಸಿಕೊಳ್ಳುತ್ತಿವೆ ಎಂದು ವರದಿಯಾಗಿದೆ.
ಸಿಸಿಟಿವಿ ಕ್ಯಾಮೆರಾಗಳು ಹಾಗೂ ಸಿಬ್ಬಂದಿ ತೀವ್ರ ನಿಗಾದಲ್ಲಿರುವ ದರ್ಶನ್, ಈಗ ಸಾಮಾನ್ಯ ಕೈದಿಗಳಂತೆ ದಿನ ಕಳೆಯುತ್ತಿದ್ದಾರೆ. ಇತ್ತ ಪವಿತ್ರಾ ಗೌಡ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಬ್ಬರಿಗೂ ಸೊಳ್ಳೆಗಳ ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಿಯಾದ ನಿದ್ರೆ ಇಲ್ಲದ ಕಾರಣ ದರ್ಶನ್ ಕಣ್ಣುಗಳು ಕೆಂಪಾಗಿದ್ದು, ಮುಖದಲ್ಲಿ ಆಯಾಸ ಎದ್ದು ಕಾಣಿಸುತ್ತಿದೆ. ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ಗೆ ಒಂದೆಡೆ ಕಾನೂನು ಹೋರಾಟದ ಚಿಂತೆಯಾದರೆ ಇನ್ನೊಂದೆಡೆ ಜೈಲಿನ ಒಳಗಿನ ಸೊಳ್ಳೆಗಳ ಕಾಟ ನಿದ್ದೆಗೆಡಿಸಿದೆ.