
ಬೆಂಗಳೂರು: ರಾಜಧಾನಿಯ ಜನನಿಬಿಡ ಪ್ರದೇಶದ ಬೆಂಗಳೂರು ಕೇಂದ್ರ ನಗರ ನಿಗಮಕ್ಕೆ ಸೇರಿದ 119 ಆಸ್ತಿಗಳ ಗುತ್ತಿಗೆ ಅವಧಿ ಮುಗಿದರೂ, ಇಲ್ಲಿವರೆಗೆ ಇವುಗಳನ್ನು ಅಧಿಕಾರಿಗಳು ಮರಳಿ ಪಡೆದುಕೊಂಡಿಲ್ಲ. ಗುತ್ತಿಗೆದಾರರು ಆಸ್ತಿಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದರೂ ಒಪ್ಪಂದವನ್ನು ಮರುನವೀಕರಣ ಮಾಡಿಲ್ಲ. ಹಾಗಾಗಿ ಗುತ್ತಿಗೆದಾರರು ಈ ಹಿಂದಿನ ಒಪ್ಪಂದದ ಮೌಲ್ಯದಲ್ಲಿಯೇ ಗುತ್ತಿಗೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ 119 ಆಸ್ತಿಗಳನ್ನು ಸಾಂಸ್ಕೃತಿಕ ಸಂಸ್ಥೆ, ಶಿಕ್ಷಣ ಸಂಸ್ಥೆ, ಅಂಚೆ ಕಚೇರಿ ಮತ್ತು ಇತರ ಸಾರ್ವಜನಿಕ ಹಿತದೃಷ್ಟಿ ಹಾಗೂ ಕೆಲವನ್ನು ಖಾಸಗಿಯವರಿಗೆ ನೀಡಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಗಮ ಆದಾಯ ಕಳೆದುಕೊಳ್ಳುತ್ತಿದೆ.
ಹಲಸೂರಿನ 30 x 40 ಅಡಿ ಆಸ್ತಿಯನ್ನು 1976 ರಲ್ಲಿ ಮಾಜಿ ಕಾರ್ಪೊರೇಟರ್ ಒಬ್ಬರಿಗೆ ತಿಂಗಳಿಗೆ 2,000 ರೂ.ಗಳಂತೆ 30 ವರ್ಷಗಳ ಕಾಲ ಗುತ್ತಿಗೆಗೆ ನೀಡಲಾಗಿತ್ತು. 2006 ರಲ್ಲೇ ಗುತ್ತಿಗೆ ಅವಧಿ ಮುಗಿದಿದ್ದರೂ, 2025 ರಲ್ಲಿ ನೋಟಿಸ್ ನೀಡಿ ಆಸ್ತಿಯನ್ನು ಮರಳಿ ಪಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
1988 ರಿಂದ 1991 ರ ನಡುವೆ ಕೇವಲ ಮೂರು ವರ್ಷಗಳವರೆಗೆ ತಿಂಗಳಿಗೆ 25 ರೂ.ಗಳ ಸಣ್ಣ ಮೊತ್ತಕ್ಕೆ ಗುತ್ತಿಗೆ ನೀಡಿದ ಮತ್ತೊಂದು ಆಸ್ತಿಯನ್ನು ಇನ್ನೂ ನಿಗಮದ ವಶಕ್ಕೆ ತೆಗೆದುಕೊಂಡಿಲ್ಲ.
ಕೆಲ ಗುತ್ತಿಗೆದಾರರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವುದರಿಂದ ಆಸ್ತಿಗಳನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಪ್ರಸ್ತುತ ವಕೀಲರ ಮೂಲಕ ತ್ವರಿತ ಇತ್ಯರ್ಥಕ್ಕೆ ಶ್ರಮಿಸಲಾಗುತ್ತಿದ್ದು, ಪ್ರಕರಣ ಮುಗಿದ ತಕ್ಷಣ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಜಗದೀಶ್ ಜಿ ತಿಳಿಸಿದ್ದಾರೆ.
ದಾವೆಯಲ್ಲಿಲ್ಲದ ಅನೇಕ ಆಸ್ತಿಗಳನ್ನೂ ಸಹ ವಾಪಸ್ ಪಡೆದಿಲ್ಲದಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಆಸ್ತಿಗಳನ್ನು ಮರಳಿ ಪಡೆಯಲು ಅಥವಾ ಪ್ರಸ್ತುತ ಮಾರುಕಟ್ಟೆ ದರಕ್ಕೆ ಒಪ್ಪಂದ ನವೀಕರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಗೃಹಜ್ಯೋತಿ ಫ್ರೀ ಕರೆಂಟ್ ಅಂತ ಹೇಳಿ ಜನರ ಜೇಬಿಗೆ ಕತ್ತರಿ ಹಾಕಿತಾ ಬೆಸ್ಕಾಂ? ಸಣ್ಣ ಮನೆಗಳಿಗೂ ಬಂತು ₹5 ಸಾವಿರ ಬಿಲ್!