ರಾಜ್ಯವೇ ಬೆಚ್ಚಿ ಬೀಳುವಂತ ಸುದ್ದಿ: ಶಂಕಿತ ಉಗ್ರರಿಗೂ ಕರ್ನಾಟಕ ಸೇಫ್!

By Web DeskFirst Published Nov 3, 2019, 10:03 AM IST
Highlights

ಉಗ್ರವಾದ ನಂಟಿರುವವರಿಗೂ ದಾಖಲೆ, ಬಾಡಿಗೆ ಮನೆ ಸೇರಿ ಎಲ್ಲವೂ ಸುಲಭವಾಗಿ ಲಭ್ಯ | ಯಾರೂ ಹೇಳೋರಿಲ್ಲ, ಕೇಳೋರಿಲ್ಲ|ಜೆಎಂಬಿ ಶಂಕಿತರು ತಮ್ಮ ಭಯೋತ್ಪಾದನಾ ಚಟುವಟಿಕೆಗಳಿಗೆ ಕರ್ನಾಟಕವನ್ನು‘ಸ್ಲೀಪರ್ ಸೆಲ್’ ಆಗಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ| ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಸೇರಿದಂತೆ ಹಲವು ದಾಖಲೆ ಒದಗಿಸಲು ದಲ್ಲಾಳಿಗಳ ಜಾಲವೇ ಕಾರ್ಯ ಪ್ರವೃತ್ತವಾಗಿದೆ| 

ಬೆಂಗಳೂರು[ನ.3]: ಹಣಕ್ಕಾಗಿ ದಾಖಲೆ ಸೃಷ್ಟಿಸಿಕೊಡುವವರು, ಪೊಲೀಸರ ನಿರ್ಲಕ್ಷ್ಯ ಹಾಗೂ ಹೊಸಬರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡದೇ ಇರುವ ಪರಿಣಾಮ ಬಾಂಗ್ಲಾ ನುಸುಳುಕೋರರು ಹಾಗೂ ಆದೇಶದ ‘ಜಮಾತ್ ಉಲ್‌ ಮುಜಾಹಿದೀನ್ ಬಾಂಗ್ಲಾದೇಶ’(ಜೆಎಂಬಿ) ಉಗ್ರರಿಗೆ ಕರುನಾಡು ಸುರಕ್ಷಿತ ತಾಣವಾಗಿ ಮಾರ್ಪಾಡಾಗುತ್ತಿದೆ.

ಜೆಎಂಬಿ ಶಂಕಿತರು ತಮ್ಮ ಭಯೋತ್ಪಾದನಾ ಚಟುವಟಿಕೆಗಳಿಗೆ ಕರ್ನಾಟಕವನ್ನು‘ಸ್ಲೀಪರ್ ಸೆಲ್’ ಆಗಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎಂಬುದು ನಿಜಕ್ಕೂ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸ್ಥಳೀಯ ರಾಜಕಾರಣಿಗಳು ಬಾಂಗ್ಲಾ ನುಸುಳಕೋರರನ್ನು ‘ವೋಟ್ ಬ್ಯಾಂಕ್’ ಆಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಒಂದು ಕಡೆಯಾದರೆ, ನಕಲಿ ದಾಖಲೆ ಒದಗಿಸುವುದನ್ನೇ ದಂಧೆಯನ್ನಾಗಿಸಿ ಕೊಂಡಿರುವ ದಲ್ಲಾಳಿಗಳಿಂದ ಸುಲಭವಾಗಿ ದಾಖಲೆ ಸಿಗುತ್ತಿರುವುದು ಮತ್ತೊಂದು ಕಂಟಕವಾಗಿದೆ. ಇನ್ನು ಈ ವಿಚಾರದಲ್ಲಿ ರಾಜ್ಯದ ಪೊಲೀಸರ ನಿರ್ಲಕ್ಷ್ಯ ಕೂಡ ಹೆಚ್ಚಿದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉದ್ಯೋಗ ಅರಸಿ ಗಡಿಯಲ್ಲಿ ಯೋಧರ ಕಣ್ತಪ್ಪಿಸಿ ದೇಶ ಪ್ರವೇಶಿಸಿರುವ ಬಾಂಗ್ಲಾ ನುಸುಳಕೋರರು ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ದಲ್ಲಿ ನೆಲೆಕಂಡುಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಜೆಎಂಬಿ ಉಗ್ರರೂ ಹೊರತಾಗಿಲ್ಲ. ಮುಸ್ಲಿಮರು ಹೆಚ್ಚಿರುವ ಪ್ರದೇಶದಲ್ಲಿ ನೆಲೆ ಕಂಡುಕೊಂಡರೆ ಯಾವುದರ ಬಗ್ಗೆಯೂ ಪ್ರಶ್ನೆಗಳು ಎದುರಾಗುವುದಿಲ್ಲ. ಅಲ್ಲದೆ, ಕೊಲ್ಕತ್ತಾದವರು ಎಂದು ಹೇಳುವ ಮೂಲಕ ಇವರು ರಾಜ್ಯದವರೇ ಆಗಿ ಬಿಡುತ್ತಾರೆ. ತಮ್ಮ ಸಮುದಾಯದವರು ಎಂಬ ಕಾರಣಕ್ಕೆ ಸುಲಭವಾಗಿ ಬಾಡಿಗೆಗೆ ಮನೆಯೂ ಸಿಗುತ್ತದೆ. ಇವರಿಗೆ ಬೇಕಾದ ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ ಸೇರಿದಂತೆ ಹಲವು ದಾಖಲೆ ಒದಗಿಸಲು ದಲ್ಲಾಳಿಗಳ ಜಾಲವೇ ಕಾರ್ಯ ಪ್ರವೃತ್ತವಾಗಿದೆ. 

3 ರಾಜ್ಯಕ್ಕೆ ಬೆಳಗಾವಿಯೇ ಬಾಂಗ್ಲನ್ನರ ನೆಲೆ

ಹಣ ಪಡೆದು ಇವರಿಗೆ ಬೇಕಾದ ದಾಖಲೆಗಳನ್ನು ಮಾಡಿಸಿಕೊಡುತ್ತಾರೆ. ಈ ದಂಧೆಗೆ ಕಡಿವಾಣ ಹಾಕಬೇಕಾಗಿದ್ದು, ಇವರ ಮೇಲೆ ಹದ್ದಿನ ಕಣ್ಣಿಡಬೇಕಿದೆ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು. ಇತ್ತೀಚೆಗೆ ಬೆಂಗಳೂರಿನ ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆ ಹೊಂದಿದ್ದ ಸುಮಾರು 15 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಪತ್ತೆ ಹಚ್ಚಿದ್ದರು. 

ಜೆಎಂಬಿ ಉಗ್ರರಿಂದಲೇ ಸೃಷ್ಟಿ: 

ಬಾಂಗ್ಲಾ ವಲಸಿಗರು ದಲ್ಲಾಳಿಗಳ ಮೂಲಕ ದಾಖಲೆಗಳನ್ನು ಪಡೆದುಕೊಂಡರೆ, ಜೆಎಂಬಿ ಶಂಕಿತರು ತಾವೇ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.  ಖುದ್ದು ಶಂಕಿತರೇ ಹಾಲೋಗ್ರಾಮ್ ಬಳಸಿ ಗುರುತಿನ ಚೀಟಿ ಸೇರಿದಂತೆ ಇತರೆ ದಾಖಲೆ ಸೃಷ್ಟಿಸಿಕೊಂಡಿರುವುದು ತನಿಖೆ ವೇಳೆ ತಿಳಿದಿದೆ ಎಂದು ಹೈದ್ರಾಬಾದ್ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿ ತಿಳಿಸಿದರು.

ಬಾಂಗ್ಲಾ ವಲಸಿಗರಿಂದ ಬೆಂಗಳೂರಲ್ಲಿ ನಡೀತಿದೆ ವೇಶ್ಯಾವಾಟಿಕೆ ದಂಧೆ!

ಕರ್ನಾಟಕದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ಇಲ್ಲಿನ ಸ್ಥಳೀಯರು ಮತ್ತು ಪೊಲೀಸರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಸುರಕ್ಷಿತವಾಗಿ ಇರಲು ದೇಶದ ಇತರೆ ದೇಶಗಳಿಗಿಂತ ಕರ್ನಾಟಕ ಸುರಕ್ಷಿತ ಎಂಬ ಕಾರಣಕ್ಕೆ ಕರ್ನಾಟಕವನ್ನು ಆಯ್ದುಕೊಂಡಿದ್ದಾಗಿ ಶಂಕಿತರು ಬಾಯ್ಬಿಟ್ಟಿದ್ದಾರೆ. ಇದನ್ನು ಕೇಳಿದ ನಮಗೆ ಅಚ್ಚರಿ ಉಂಟಾಗುವಂತೆ ಮಾಡಿದೆ. ಇಂತಹ ಪರಿಸ್ಥಿತಿ ಇರುವ ರಾಜ್ಯವನ್ನು ಪೊಲೀಸರಲ್ಲ, ಯಾವುದೋ ಶಕ್ತಿಯೊಂದು ಕಾಯುತ್ತಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದರು. ಅಲ್ಲದೆ, ಸ್ಥಳೀಯ ರಾಜಕಾರಣಿಗಳು ವೋಟ್ ಬ್ಯಾಂಕ್ ಆಗಿಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. 

ಸ್ಥಳೀಯ ಖಾಕಿ ಪಡೆ ನಿರ್ಲಕ್ಯ್ಷ?

ಪ್ರತಿಯೊಂದು ಪೊಲೀಸ್ ಠಾಣಾ ಮಟ್ಟದಲ್ಲೂ ವಿಶೇಷ ಘಟಕ (ಎಸ್‌ಬಿ) ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಆ ಠಾಣಾ ವ್ಯಾಪ್ತಿಯಲ್ಲಿರುವ ಅನುಮಾನಿತ ಹಾಗೂ ಹೊಸಬರ ಬಗ್ಗೆ ಮಾಹಿತಿ ಕಲೆ ಹಾಕುವುದೇ ಇವರ ಕೆಲಸ. ಆದರೆ ಇತ್ತೀಚೆಗೆ ಎನ್‌ಐಎ ತನಿಖೆ ವೇಳೆ ಕರ್ನಾಟಕದಲ್ಲಿ ಜೆಎಂಬಿ ಶಂಕಿತರು 22 ಅಡಗುತಾಣ ಮಾಡಿಕೊಂಡಿದ್ದರು ಎಂದು ಎನ್‌ಐಎ ಐಜಿಪಿಯೇ ಹೇಳಿದ್ದಾರೆ. ಹಾಗಾದರೆ ಠಾಣಾ ವ್ಯಾಪ್ತಿಯಲ್ಲಿ ಎಸ್‌ಬಿ ಸಿಬ್ಬಂದಿ ಏನು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಬೇಕು. ಇದನ್ನು ನೋಡಿದರೆ ಪೊಲೀಸರ ನಿರ್ಲಕ್ಷ್ಯ ಕಾಣುತ್ತದೆ ಎಂದು ನಿವೃತ್ತ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು, ಕರ್ನಾಟಕವನ್ನು ಯಾವುದೋ ಶಕ್ತಿ ಇಲ್ಲಿಯ ತನಕ ಕಾಪಾಡುತ್ತಿದೆ. ಶಂಕಿತರು ಮತ್ತು ಬಾಂಗ್ಲಾ ನುಸುಳುಕೋರರು ಇಲ್ಲಿನವರಂತೆ ಜೀವನ ಸಾಗಿಸುತ್ತಾರೆ ಎಂದರೆ ಅಚ್ಚರಿ. ಪೊಲೀಸ್‌ ಮಾತ್ರವಲ್ಲ, ಮನೆ ನೀಡುವುದರಿಂದ ಹಿಡಿದು ತಮ್ಮ ಅಕ್ಕ-ಪಕ್ಕದವರ ಬಗ್ಗೆ ನಿಗಾವಹಿಸುವುದು ಜನರ ಜವಾಬ್ದಾರಿ ಕೂಡ ಎಂದು ಹೆಸರು ಹೇಳಲು ಇಚ್ಛಿಸದ ಎನ್‌ಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಪ್ರತಿ ವರ್ಷ ರಾಜ್ಯಕ್ಕೆ ಹಿಂಡು ಹಿಂಡು ಅಕ್ರಮ ಬಾಂಗ್ಲಾವಲಸಿಗರು ಬರುತ್ತಿದ್ದಾರೆ. ಆದರೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ವಲಸೆ ತಡೆಗಟ್ಟಲು ಸರ್ಕಾರ ಕ್ರಮ ಜರುಗಿಸುತ್ತಿಲ್ಲ. ಅಕ್ರಮ ವಲಸಿಗರ ಪತ್ತೆ ಸಂಬಂಧ ಎನ್‌ಐಎ ತನಿಖೆಗೆ ಒತ್ತಾಯಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ ಎಂದು  ಹಿಂದೂ ಪರ ಸಂಘಟನೆ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಅವರು ತಿಳಿಸಿದ್ದಾರೆ. 
 

click me!