ಬೆಂಗಳೂರು: ಸಿಲಿಕಾನ್ ಸಿಟಿಯ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ ಬೆಂಗಳೂರು ಪ್ರಾಧಿಕಾರದ ಕಚೇರಿಯನ್ನು (Bangalore Development Authority) ಕೆಡವಿ, ಅದೇ ಸ್ಥಳದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧವನ್ನು ವ್ಯಕ್ತಪಡಿಸಿದೆ. ಈ ಸಂಬಂಧ ಬಿಡಿಎ ಅಧ್ಯಕ್ಷ ಎನ್ಎ ಹ್ಯಾರಿಸ್ (NA Haris) ಪತ್ರ ಬರೆಯಲಾಗಿದ್ದು, ಕೂಡಲೇ ಈ ಪ್ರಸ್ತಾವನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಲಾಗಿದೆ. ಎಚ್ ಶಿವರಾಮೇಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಬರೆದ ಪತ್ರದಲ್ಲಿ ಕೆಲವೊಂದು ಅಂಶಗಳನ್ನು ಉಲ್ಲೇಖಿಸಲಾಗಿದೆ.
ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ (CITB) ಸ್ಥಳದಲ್ಲಿರುವ ಬಿಡಿಎ ಪ್ರಧಾನ ಕಚೇರಿಯು ಬೆಂಗಳೂರು ಇತಿಹಾಸದ ಪ್ರಮುಖ ಕಟ್ಟಡವಾಗಿದೆ. ಬೆಂಗಳೂರನ್ನು ಆಧುನಿಕ ನಗರವನ್ನಾಗಿ ಮಾಡಲು 1945ರಲ್ಲಿ ಅಂದಿನ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ CITB ಸ್ಥಾಪಿಸಿದ್ದರು. ಹಾಗಾಗಿ ಕಟ್ಟಡ ತನ್ನದೇ ಆದ ಇತಿಹಾಸವನ್ನು ಹೊಂದಿದೆ.
ಕಳೆದ ಎರಡು ವರ್ಷಗಳಲ್ಲಿ ಆವರಣದ ನವೀಕರಣಕ್ಕಾಗಿ ಬೆಂಗಳೂರು ಪ್ರಾಧಿಕಾರ ಬರೋಬ್ಬರಿ 15 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಕಟ್ಟಡಗಳ ನವೀಕರಣಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡಿದ ಬಳಿಕ ಮತ್ತೆ ಮರುನಿರ್ಮಾಣ ಮಾಡೋದ್ಯಾಕೆ ಎಂದು ಕರವೇ ಪ್ರಶ್ನೆ ಮಾಡಿದೆ.
ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಕಟ್ಟಡಗಳನ್ನು ಉಳಿಸೋದರ ಜೊತೆ ಸಂಸ್ಕರಿಸಿಕೊಂಡುವ ಹೋಗುವ ಕೆಲಸಗಳನ್ನು ಮಾಡಬೇಕು. ಇದನ್ನು ಜಯಚಾಮರಾಜೇಂದ್ರ ಒಡೆಯರ್ ಅವರ ಸ್ಮಾರಕವಾಗಿ ಸ್ಥಳವನ್ನು ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಇದನ್ನೂ ಓದಿ: ಬನಶಂಕರಿ ಬಸ್ ನಿಲ್ದಾಣದ ಬಳಿಯ ಟ್ರಾಫಿಕ್ಗೆ ಮುಕ್ತಿ: ಅಧಿಕಾರಿಗಳಿಂದ ಹೊಸ ಪ್ಲಾನ್?