ಕೇರಳ ಸ್ಟೋರಿ ಚಿತ್ರಕ್ಕಾಗಿ ತರಗತಿ ಸಮಯ ಬದಲಾವಣೆ, ಆದೇಶ ವೈರಲ್ ಬೆನ್ನಲ್ಲೇ ಕ್ಷಮೆ ಕೋರಿದ ಪ್ರಿನ್ಸಿಪಾಲ್!

By Suvarna NewsFirst Published May 24, 2023, 6:15 PM IST
Highlights

ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ದಿ ಕೇರಳ ಸ್ಟೋರಿ ಚಿತ್ರ ವೀಕ್ಷಣೆಗೆ ಇಳಕಲ್‌ನ ಕಾಲೇಜು ವ್ಯವಸ್ಥೆ ಮಾಡಿದೆ. ಇದಕ್ಕಾಗಿ ತರಗತಿ ಸಮಯವನ್ನೂ ಬದಲಾವಣೆ ಮಾಡಿದ್ದಾರೆ. ಆದರೆ ಈ ಆದೇಶ ವೈರಲ್ ಆದ ಬೆನ್ನಲ್ಲೇ ಪ್ರಾಂಶಪಾಲರು ಆದೇಶ ಹಿಂಪಡೆದು ಕ್ಷಮೆ ಕೋರಿದ್ದಾರೆ.

ಇಳಕಲ್(ಮೇ.24): ಕೇರಳ ಸ್ಟೋರಿ ಚಿತ್ರ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಿದೆ. ಆರಂಭದಲ್ಲಿ ಚಿತ್ರ ಬಿಡುಗಡೆ ವಿವಾದ, ಬಳಿಕ ಚಿತ್ರ ಕಾನೂನು ಹೋರಾಟ ಸೇರಿದಂತೆ ಹಲವು ಅಡೆ ತಡೆಗಳು ಎದುರಾಗಿದೆ. ಇದೀಗ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದರೂ ವಿವಾದ ಮುಗಿದಿಲ್ಲ. ಬಾಗಲಕೋಟೆ ಜಿಲ್ಲೆಯ ಇಳಕಲ್‌ ಆರ್ಯುವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಕಾಲೇಜು ವ್ಯವಸ್ಥೆ ಮಾಡಿದೆ. ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಚಿತ್ರ ಪ್ರದರ್ಶನ ಮಾಡಲು ಕಾಲೇಜು ಪ್ರಿನ್ಸಿಪಾಲ್ ಆದೇಶ ಹೊರಡಿಸಿದ್ದರು. ಇದಕ್ಕಾಗಿ ತರಗತಿ ಸಮಯವನ್ನು ಬದಲಾಯಿಸಿದ್ದರು. ಆದರೆ ಈ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಇದೀಗ ಆದೇಶ ಹಿಂಪಡೆದಿದ್ದಾರೆ. ಇಷ್ಟೇ ಅಲ್ಲ ಕ್ಷಮೆ ಕೋರಿದ್ದಾರೆ.

ಇಳಕಲ್ ವಿಜಯ ಮಹಾಂತೇಶ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಕೆಸಿ ದಾಸ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರು. ದಿ ಕೇರಳ ಸ್ಟೋರಿ ಚಿತ್ರವನ್ನು ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿದ್ದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರಿಗೆ ಪಟ್ಟಣದ ಶ್ರಿನಿವಾಸ ಚಿತ್ರಮಂದಿರದಲ್ಲಿ ಉಚಿತವಾಗಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ವರೆಗೆ ಉಚಿತವಾಗಿ ಚಿತ್ರ ಪ್ರದರ್ಶನ ಮಾಡಲು ಪ್ರಿನ್ಸಿಪಾಲ್ ಅವಕಾಶ ಮಾಡಿಕೊಟ್ಟಿದ್ದರು. ಈ ಕುರಿತು ಕಾಲೇಜು ವಿದ್ಯಾರ್ಥಿನಿಯರಿಗೆ ನೋಟಿಸ್ ನೀಡಲಾಗಿತ್ತು.

ಇಳಕಲ್ ಕಾಲೇಜು ಪ್ರಾಂಶುಪಾಲರ ವಿವಾದ, ತರಗತಿ ರದ್ದುಗೊಳಿಸಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಅವಕಾಶ

ಬೆಳಗ್ಗೆ 9 ಗಂಟೆಯಿಂದ 11 ಗಂಟೆ ವರೆಗೆ ತರಗತಿಗಳು ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ ಚಿತ್ರ ವೀಕ್ಷಣೆ ಕಾರಣ ಮಧ್ಯಾಹ್ನ ನಂತರದ ತರಗತಿಗಳನ್ನು ರದ್ದು ಮಾಡಿ ಪ್ರಿನ್ಸಿಪಾಲ್ ಕೆಸಿ ದಾಸ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಭಾರಿ ವಿವಾದಕ್ಕೆ ಕಾರಣಾಗಿತ್ತು. ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ತಕ್ಷಣವೇ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ ಪ್ರಿನ್ಸಿಪಾಲ್‌ಗೆ ಖಡಕ್ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಪ್ರಿನ್ಸಿಪಾಲ್ ತಮ್ಮ ಆದೇಶ ಹಿಂಪಡೆದಿದ್ದಾರೆ.

ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವ ಕುರಿತು ವಿದ್ಯಾರ್ಥಿನಿಯರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಇದು ನಿಯಮ ವಿರುದ್ಧವಾಗಿದ್ದು, ಈ ಆದೇಶವನ್ನು ಹಿಂಪಡೆಯಲಾಗಿದೆ.ನನ್ನ ನಿರ್ಧಾರ ತಪ್ಪಾಗಿದೆ. ಇದಕ್ಕಾಗಿ ಕ್ಷಮೆ ಕೋರುತ್ತಿದೆ. ಭವಿಷ್ಯದಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ ಎಂದು ಕೆಸಿ ದಾಸ ಪ್ರಕಟಣೆ ಹೊರಡಿಸಿದ್ದಾರೆ.

'ದಿ ಕೇರಳ ಸ್ಟೋರಿ'ಯಲ್ಲಿ ಶಿವನನ್ನು ಗೇಲಿ ಮಾಡಿದ ಮಹಿಳೆ; ಸದ್ಗುರುವಿನ ಹಳೆಯ ಉತ್ತರ ವೈರಲ್

ರಾಜ್ಯದ ಹಲವು ಭಾಗದಲ್ಲಿ ದಿ ಕೇರಳ ಸ್ಟೋರಿ ಚಿತ್ರ ಉಚಿತ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇತ್ತೀಚೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ದೇಶದಾದ್ಯಂತ ಸಂಚಲನ ಮೂಡಿಸಿರುವ ದಿ ಕೇರಳ ಸ್ಟೋರಿ ಚಲನಚಿತ್ರವನ್ನು ಹಿಂದೂಗಳು ಒಟ್ಟಾಗಿ ಕುಳಿತುಕೊಂಡು ವೀಕ್ಷಣೆ ಮಾಡಲು ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಮೂರು ದಿನಗಳ ಕಾಲ ಉಚಿತ ವ್ಯವಸ್ಥೆ ಕಲ್ಪಿಸಿದ್ದರು. ಚಿತ್ರಮಂದಿರದಲ್ಲಿ ಇರುವ ಕುರ್ಚಿಗಳು ತುಂಬಿದ ಮೇಲೆ ಬಂದ ಜನರು ಮರಳಿ ಹೋಗದೆ, ನೆಲದ ಮೇಲೆ ಕುಳಿತು ವೀಕ್ಷಿಸಿರುವುದು ವಿಶೇಷವಾಗಿತ್ತು.

click me!