ಜಾವಾ ಮೀಟರ್, ಬೊಲೆರೋ ಕನ್ಸೋಲ್; ಮಹೀಂದ್ರ ವೆಂಟಿಲೇಟರ್ ಹಿಂದಿದೆ ರೋಚಕ ಕತೆ!

By Suvarna NewsFirst Published May 29, 2020, 2:52 PM IST
Highlights

ಕಾರು ಬೈಕ್ ನಿರ್ಮಾಣ ಮಾಡುತ್ತಿದ್ದ ಮಹೀಂದ್ರ ಕಂಪನಿ ಕೊರೋನಾ ವೈರಸ್ ಕಾರಣ, ಭಾರತಕ್ಕೆ ಅಗತ್ಯವಾಗಿ ಬೇಕಿರುವ ವೆಂಟಿಲೇಟರ್ ಉತ್ಪಾದನೆ ಮಾಡುತ್ತಿದೆ. ಆಟೋಮೊಬೈಲ್ ಕಂಪನಿ ದಿಢೀರ್ ಆಗಿ ವೆಂಟಿಲೇಟರ್ ಉತ್ಪಾದನೆ ಮಾಡುತ್ತಿರುವುದು ಹೇಗೆ? ತಯಾರಿ ಹೇಗಿತ್ತು? ವೆಂಟಿಲೇಟರ್ ಉತ್ಪಾದನೆಯಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ ವೈದ್ಯ ಈ ಕುರಿತು ವಿವರಿಸಿದ್ದಾರೆ.

ಬೆಂಗಳೂರು(ಮೇ.29): ಕೊರೋನಾ ವೈರಸ್ ಭಾರತಕ್ಕೆ ಅಪ್ಪಳಿಸಿದ ಮೇಲೆ ಜನರು ಬದುಕು ದುಸ್ತರವಾಗಿದೆ. ಇದರ ಜೊತೆಗೆ ಭಾರತ ಹಿಂದಿಗಿಂತಲೂ ಹೆಚ್ಚುಸ್ವಾವಲಂಬಿಯಾಗಿದೆ. ಇತರ ದೇಶದಿಂದ ಆಮದು ಮಾಡುತ್ತಿದ್ದ ಬಹುತೇಕ ವಸ್ತುಗಳು ಭಾರತದಲ್ಲೇ ಉತ್ಪಾದನೆಯಾಗುತ್ತಿದೆ. ಇದೀಗ ವೆಂಟೀಲೇಟರ್ ಕೂಡ. ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದಂತೆ ಮಹೀಂದ್ರ ಆಟೋಮೊಬೈಲ್ ಕಂಪನಿ ವೆಂಟಿಲೇಟರ್ ಉತ್ಪಾದನೆ ಮಾಡುತ್ತಿದೆ. ಕಾರು ಬೈಕ್ ನಿರ್ಮಾಣ ಮಾಡುತ್ತ ಭಾರತದ ದಿಗ್ಗಜ ಆಟೋಮೊಬೈಲ್ ಕಂಪನಿಯಾಗಿ ಬೆಳೆದಿರುವ ಮಹೀಂದ್ರ ದೀಢೀರ್ ವೆಂಟಿಲೇಟರ್ ಉತ್ಪಾದನೆಗೆ ಕೈಹಾಕಿ ಇದೀಗ ಯಶಸ್ವಿಯಾಗಿದೆ.

ಕಾರು ತಯಾರಿಕೆ ನಿಲ್ಲಿಸಿ ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರ!

ವೆಂಟಿಲೇಟರ್ ಉತ್ಪಾದನೆ ಸಾಕಷ್ಟು ಸೂಕ್ಷ್ಮ ವಿಚಾರ. ಕಾರಣ ಚಿಕಿತ್ಸೆ ಪಡೆಯುತ್ತಿರವವರಿಗೆ ಉಸಿರಾಟಕ್ಕಾಗಿ ವೆಂಟಿಲೇಟರ್ ಬಳಸಲಾಗುತ್ತಿದೆ. ಅದರಲ್ಲೂ ಕೊರೋನಾ ವೈರಸ್ ತಗುಲಿದ ಸೋಂಕಿತರಿಗೆ ವೆಂಟಿಲೇಟರ್ ಅವಶ್ಯಕತೆ ಇದೆ. ಹೀಗಾಗಿ ಇದು ಆಟೋಮೊಬೈಲ್ ಉತ್ಪಾದನೆಗಿಂತ ಸವಾಲಾಗಿದೆ.  ಸುಹಾಸ್ ಆಸ್ಪತ್ರೆ ಹಾಗೂ ಎಸ್ ಎಂಬೆಡೆಡ್ ಇಂಟೆನ್ಸೀವ್ ಕೇರ್ ಯುನಿಟ್ ವೈದ್ಯ ಜಗದೀಶ್ ಹೀರೆಮಠ್ , ಮಹೀಂದ್ರ ವೆಂಟಿಲೇಟರ್ ಉತ್ಪಾದನೆ ಕುರಿತು ವಿವರಣೆ ನೀಡಿದ್ದಾರೆ. 

48 ಗಂಟೆಯಲ್ಲಿ 7500ರು.ನ ವೆಂಟಿಲೇಟರ್‌ ಮಾದರಿ ತಯಾರಿಸಿದ ಮಹೀಂದ್ರಾ!

ಕೊರೋನಾ ವೈರಸ್‌ಗೂ ಮೊದಲು ಭಾರತ ವೆಂಟಿಲೇಟರ್ ಬಿಡಿ ಭಾಗಗಳನ್ನು ಅಮೆರಿಕಾ, ಸ್ವೀಡನ್ ಅಥವಾ ಫ್ರಾನ್ಸ್‌ನಿಂದ ಅಮದು ಮಾಡಿಕೊಂಡು ಇಲ್ಲಿ ಜೋಡಣೆ ಮಾಡಲಾಗುತ್ತಿತ್ತು. ಬಳಿಕ ಅದೇ ಕಂಪನಿ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಭಾರತ ಪ್ರತಿ ವರ್ಷ 5,000 ವೆಂಟಿಲೇಟರ್ ಈ ರೀತಿ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಕೊರೋನಾ ವೈರಸ್ ವಕ್ಕರಿಸಿದ ಬಳಿಕ 5,000 ವೆಂಟಿಲೇಟರ್ ಸಂಖ್ಯೆ ರಾಜ್ಯದ ಜಿಲ್ಲಾಸ್ಪತ್ರೆಗೂ ಸಾಲಲ್ಲ. ಈ ಸಂಕಷ್ಟದ ಸಮಯದಲ್ಲಿ ಮಹೀಂದ್ರ ವೆಂಟಿಲೇಟರ್ ಉತ್ಪಾದನೆಗೆ ಕೈಹಾಕಿದ್ದು ನಿಜಕ್ಕೂ ಗ್ರೇಟ್ ಎಂದು ಜಗದೀಶ್ ಹೀರೆಮಠ್ ಹೇಳಿದ್ದಾರೆ.

ಮಹೀಂದ್ರ ವೆಂಟಿಲೇಟರ್ ಉತ್ಪಾದನೆಯಲ್ಲಿ ವೈದ್ಯ ಜಗದೀಶ್ ಹೀರೆಮಠ್ ಐಸಿಯು ಕೇರ್‌ನಲ್ಲಿ ಬಳಸವು ವೆಂಟಿಲೇಟರ್ ಡೆವಲಪ್‌ಮೆಂಟ್ ಹಾಗು ಡಿಸೈನ್‌ನ ಡೋಮೈನ್ ತಜ್ಞ,ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಟೋಮೊಬೈಲ್ ಕಂಪನಿಗೆ ವೆಂಟಿಲೇಟರ್ ಉತ್ಪಾದನೆ ಸವಾಲಾಗಿತ್ತು. ಆದರೆ ಮಹೀಂದ್ರ ಅದನ್ನು ಸಾಧಿಸಿ ತೋರಿಸಿದೆ ಎಂದಿದ್ದಾರೆ.

ಮಹೀಂದ್ರ ತಯಾರಿಸಿರುವ ವೆಂಟಿಲೇಟರ್‌ನಲ್ಲಿ ಜಾವಾ ಬೈಕ್ ಪ್ರೆಶರ್ ಗೇಜ್, ಬೈಕ್‌ನ ಸ್ಪೀಡೋಮೀಟರ್, ಮಹೀಂದ್ರ ಆಟೋ ಬ್ಯಾಟರಿ ಹಾಗೂ ಬೊಲೆರೋ ಜೀಪ್‌ನ ಮುಂಭಾಗದ ಕನ್ಸೋಲ್ ಬಳಸಲಾಗಿದೆ. ಬೈಕ್ ಸ್ಪೀಡೋ ಮೀಟರ್ ಮೂಲಕ ರೋಗಿಯ ತೆಗೆದುಕೊಳ್ಳುವ ಆಮ್ಲಜನಕ ಪ್ರಮಾಣ ಹಾಗೂ ಹೊರಬಿಡುವ ಇಂಗಾಲದ ಡೈಆಕ್ಸೈಡ್ ಪ್ರಮಾಣ ತಿಳಿಯಲಿದೆ. ಇಷ್ಟೇ ಅಲ್ಲ ರೋಗಿಯ ಶ್ವಾಸಕೋಶದಲ್ಲಿನ ಒತ್ತಡ ಪ್ರಮಾಣ ಕೂಡ ತಿಳಿಯಲಿದೆ. 

ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ವೆಂಟಿಲೇಟರ್‌ನಲ್ಲಿ ಬಳಸಿರುವ ಮಹೀಂದ್ರ ಆಟೋ ಬ್ಯಾಟರಿ ನೆರವಾಗಲಿದೆ. ಈ ಮೂಲಕ ವೆಂಟಿಲೇಟರ್ ಕಾರ್ಯನಿರ್ವಹಿಸಲಿದೆ. ಇನ್ನು ವೆಂಟಿಲೇಟರ್‌ನಲ್ಲಿ ಬಳಸಿರುವ ಬೊಲೆರೋ ಕನ್ಸೋಲ್ ಮೂಲಕ ಟೈಡಲ್ ಪ್ರಮಾಣ ತಿಳಿಯಲಿದೆ. ರೋಗಿಯ ಉಸಿರಾಡುತ್ತಿರುವ ಗಾಳಿ ಪ್ರಾಮಾಣವೂ ಇದರಲ್ಲಿ ದಾಖಲಾಗಲಿದೆ. ಅಂದರೆ ರೋಗಿ ಉಸಿರಾಟ ನಿಧಾನವಾಗುತ್ತಿದೆಯೇ? ಅಥವಾ ವೇಗವಾಗಿ ಉಸಿರಾಡುತ್ತಿದ್ದಾರೆಯೇ? ಎಂಬ ಮಾಹಿತಿಗಳು ಟೈಡಲ್ ವಾಲ್ಯೂಮ್ ಮೂಲಕ ತಿಳಿಯಬಹುದಾಗಿದೆ.

ಅಲರಾಂ ಗಾಗಿ ಜಾವಾ ಬೈಕ್ ಸ್ಪೀಡೋಮೀಟರ್ ಬಳಸಲಾಗಿದೆ. ಈ ರೀತಿ ಆಟೋಮೊಬೈಲ್ ಬಿಡಿಭಾಗದಲ್ಲಿ ಉತ್ಯುತ್ತಮ ಗುಣಮಟ್ಟದ ಹಾಗೂ ಸ್ವದೇಶಿ ನಿರ್ಮಿತ ವೆಂಟಿಲೇಟರ್ ನಿರ್ಮಾಣವಾಗಿದೆ. ಇದೀಗ ಮಹೀಂದ್ರ ವೆಂಟಿಲೇಟರ್‌ನ್ನು ಹಿಂದುಸ್ತಾನ ಲೆಟೆಕ್ಸ್ ಲಿಮಿಟೆಡ್‌ಗೆ ಕಳುಹಿಸಿಕೊಡಲಾಗಿದ್ದು ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಡಾಕ್ಟರ್ ಜಗದೀಶ್ ಹೀರೆಮಠ್ ಹೇಳಿದ್ದಾರೆ.

click me!