
ಯಾವುದೇ ವಿಷಯ ನಿಗೂಢವಾಗಿದ್ದಾಗ ಅಥವಾ ಉತ್ತರ ಸಿಗದಿದ್ದಾಗ 'ಅದೊಂದು ಚಿದಂಬರ ರಹಸ್ಯ' ಅಂತ ಹೇಳೋದನ್ನು ನೀವು ಕೇಳಿರ್ತೀರಾ. ಹಾಗಿದ್ರೆ, ನಿಜವಾಗಿಯೂ ಈ ಚಿದಂಬರ ರಹಸ್ಯ ಅಂದ್ರೆ ಏನು? ಇದರ ಹಿಂದಿರುವ ವೈದಿಕ ಮತ್ತು ತಾತ್ವಿಕ ಅರ್ಥವನ್ನು ಇಲ್ಲಿ ತಿಳಿಯೋಣ.
ನಮ್ಮ ದೈನಂದಿನ ಮಾತುಕತೆಯಲ್ಲಿ 'ಚಿದಂಬರ ರಹಸ್ಯ' ಅನ್ನೋ ಪದವನ್ನು ನಾವು ಕೇಳುತ್ತಲೇ ಇರುತ್ತೇವೆ. ಯಾವುದೇ ವಿಷಯ ಅರ್ಥವಾಗದಿದ್ದಾಗ ಅಥವಾ ತುಂಬಾ ರಹಸ್ಯವಾಗಿದ್ದಾಗ, ಅದನ್ನು ಚಿದಂಬರ ರಹಸ್ಯಕ್ಕೆ ಹೋಲಿಸುತ್ತೇವೆ. ಕಾಲಕ್ರಮೇಣ ಇದು ಒಂದು ಜನಪ್ರಿಯ ನುಡಿಗಟ್ಟಾಗಿ ಬದಲಾಗಿದೆ. ಆದರೆ, ಈ ಪದದ ಹಿಂದೆ ಆಳವಾದ ಆಧ್ಯಾತ್ಮಿಕ ಅರ್ಥ ಮತ್ತು ಒಂದು ದೊಡ್ಡ ಪೌರಾಣಿಕ ಹಿನ್ನೆಲೆ ಇದೆ. ತಮಿಳುನಾಡಿನ ಪ್ರಸಿದ್ಧ ಚಿದಂಬರಂ ನಟರಾಜ ಸ್ವಾಮಿ ದೇವಸ್ಥಾನದಿಂದ ಈ ಪದ ಹುಟ್ಟಿಕೊಂಡಿದೆ. ಅಸಲಿಗೆ ಈ ರಹಸ್ಯವೇನು? ಗರ್ಭಗುಡಿಯ ಪರದೆಯ ಹಿಂದೆ ಏನಿದೆ? ಶಿವ ಅಲ್ಲಿ ಯಾಕೆ ನೃತ್ಯ ಮಾಡಿದ ಅನ್ನೋದನ್ನು ಈಗ ತಿಳಿಯೋಣ.
ಹಿಂದೂ ತತ್ವಶಾಸ್ತ್ರದಲ್ಲಿ ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳಿಗೆ ಬಹಳ ಮಹತ್ವವಿದೆ. ತಮಿಳುನಾಡಿನ ಚಿದಂಬರಂ ದೇವಾಲಯವು ಪಂಚಭೂತ ಕ್ಷೇತ್ರಗಳಲ್ಲಿ 'ಆಕಾಶ ಕ್ಷೇತ್ರ' ಅಂತ ಪ್ರಸಿದ್ಧವಾಗಿದೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಸ್ವಾಮಿಯು ಪೃಥ್ವಿ, ಅಗ್ನಿ, ತೇಜಸ್ಸು ಮತ್ತು ವಾಯು ರೂಪದಲ್ಲಿ, ಅಂದರೆ ನಮ್ಮ ಕಣ್ಣಿಗೆ ಕಾಣುವ ಲಿಂಗ ರೂಪದಲ್ಲಿ ದರ್ಶನ ನೀಡುತ್ತಾನೆ. ಆದರೆ ಚಿದಂಬರಂ ಮಾತ್ರ ಶಿವನು ನಿರೂಪಿ(ನಿರಾಕಾರ)ಯಾಗಿ, ಅಂದರೆ ಆಕಾಶ ಅಥವಾ ಶೂನ್ಯದ ರೂಪದಲ್ಲಿ ನೆಲೆಸಿದ್ದಾನೆ. ಈ ದೇವಾಲಯದ ಗರ್ಭಗುಡಿಯಲ್ಲಿ ನಟರಾಜ ಸ್ವಾಮಿಯ ಬಲಭಾಗದಲ್ಲಿ ಒಂದು ಪರದೆ ಇರುತ್ತದೆ. ಪೂಜಾರಿ ಆ ಪರದೆಯನ್ನು ಸರಿಸಿ ದೀಪಾರಾಧನೆ ಮಾಡಿದಾಗ, ಅಲ್ಲಿ ಭೌತಿಕವಾಗಿ ಯಾವುದೇ ವಿಗ್ರಹ ಅಥವಾ ಶಿವಲಿಂಗ ಕಾಣಿಸುವುದಿಲ್ಲ. ಕೇವಲ ಚಿನ್ನದ ಬಿಲ್ವಪತ್ರೆಗಳ ಮಾಲೆ ತೂಗಾಡುತ್ತಿರುವುದು ಕಾಣಿಸುತ್ತದೆ. ಕಣ್ಣಿಗೆ ಏನೂ ಕಾಣದಿರುವುದೇ ಇಲ್ಲಿನ ನಿಜವಾದ ರಹಸ್ಯ.
ಕಣ್ಣಿಗೆ ಕಾಣದ ಆ ಖಾಲಿ ಜಾಗವೇ 'ಚಿದಂಬರ ರಹಸ್ಯ'. ಇದರ ಅರ್ಥ, ದೇವರು ಕೇವಲ ಒಂದು ನಿರ್ದಿಷ್ಟ ರೂಪಕ್ಕೆ ಸೀಮಿತನಲ್ಲ, ಆತ ನಿರಾಕಾರ, ಸರ್ವವ್ಯಾಪಿ ಮತ್ತು ಆಕಾಶದಂತೆ ಅನಂತ ಎಂದು ಹೇಳುವುದೇ ಆಗಿದೆ. 'ಚಿತ್' ಎಂದರೆ 'ಚೈತನ್ಯ' ಅಥವಾ 'ಜ್ಞಾನ' ಮತ್ತು 'ಅಂಬರಂ' ಎಂದರೆ 'ಆಕಾಶ'. ಅಂದರೆ, ಜ್ಞಾನವೇ ಆಕಾಶದ ರೂಪದಲ್ಲಿದೆ ಎಂಬ ತಾತ್ವಿಕ ಸಂದೇಶವನ್ನು ಇದು ನೀಡುತ್ತದೆ ಎಂದು ಪುರಾಣಗಳು ಹೇಳುತ್ತವೆ. ಇಲ್ಲಿ ಗರ್ಭಗುಡಿಯ ಪರದೆಯನ್ನು ಮನುಷ್ಯನ 'ಅಜ್ಞಾನ' ಅಥವಾ 'ಮಾಯೆ'ಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಮ್ಮಲ್ಲಿರುವ ಅಜ್ಞಾನವೆಂಬ ಪರದೆ ಸರಿದಾಗ ಮಾತ್ರವೇ ಒಳಗಿರುವ ಪರಮಾತ್ಮನ ಚೈತನ್ಯವನ್ನು ಗುರುತಿಸಲು ಸಾಧ್ಯ ಎಂದು ಇದು ಸೂಚಿಸುತ್ತದೆ. ದೇವರನ್ನು ಹೊರಗೆ ಹುಡುಕುವ ಬದಲು ನಮ್ಮೊಳಗಿನ ಚೈತನ್ಯದಲ್ಲೇ ಕಾಣಬೇಕು ಎನ್ನುವುದೇ ಈ ಕ್ಷೇತ್ರದ ಸಂದೇಶ.
ಈ ಕ್ಷೇತ್ರದ ಹಿಂದೆ ಒಂದು ಕುತೂಹಲಕಾರಿ ಪೌರಾಣಿಕ ಕಥೆಯಿದೆ. ಹಿಂದೆ ತಾರಕಾವನದಲ್ಲಿ ವಾಸಿಸುತ್ತಿದ್ದ ಕೆಲವು ಋಷಿಗಳಿಗೆ ತಮ್ಮ ತಪೋಬಲ, ಮಂತ್ರಶಕ್ತಿ ಮತ್ತು ಕರ್ಮಗಳ ಬಗ್ಗೆ ತೀವ್ರ ಅಹಂಕಾರವಿತ್ತು. ತಮ್ಮಿಂದಲೇ ಈ ವಿಶ್ವ ನಡೆಯುತ್ತಿದೆ, ದೇವರ ಅಗತ್ಯವಿಲ್ಲ ಎಂದು ಅವರು ಭಾವಿಸಿದ್ದರು. ಅವರ ಅಹಂಕಾರವನ್ನು ಮುರಿಯಲು, ಪರಮಶಿವನು ಭಿಕ್ಷಾಟನಾ ಮೂರ್ತಿಯಾಗಿ ಅಂದರೆ ಅತ್ಯಂತ ಸುಂದರ ರೂಪದಲ್ಲಿ ಮತ್ತು ವಿಷ್ಣುವು ಮೋಹಿನಿ ರೂಪದಲ್ಲಿ ಆ ವನಕ್ಕೆ ಪ್ರವೇಶಿಸಿದರು. ಋಷಿಪತ್ನಿಯರು ಭಿಕ್ಷಾಟನಾ ಮೂರ್ತಿಯ ಸೌಂದರ್ಯಕ್ಕೆ ಮರುಳಾದರೆ, ಋಷಿಗಳು ಮೋಹಿನಿಯನ್ನು ನೋಡಿ ತಮ್ಮ ತಪಸ್ಸನ್ನೇ ಮರೆತರು. ಸತ್ಯ ತಿಳಿದ ಋಷಿಗಳು ಕೋಪದಿಂದ ಶಿವನನ್ನು ನಾಶಮಾಡಲು ಅಭಿಚಾರ ಹೋಮ ಮಾಡಿದರು. ಆ ಹೋಮದಿಂದ ಭಯಂಕರ ಹಾವುಗಳು, ಹುಲಿ ಮತ್ತು ಅಪಸ್ಮಾರ ಎಂಬ ರಾಕ್ಷಸನನ್ನು ಸೃಷ್ಟಿಸಿ ಶಿವನ ಮೇಲೆ ಕಳುಹಿಸಿದರು.
ಶಿವನು ಆ ಹಾವುಗಳನ್ನು ತನ್ನ ಆಭರಣಗಳನ್ನಾಗಿ ಮತ್ತು ಹುಲಿಯ ಚರ್ಮವನ್ನು ವಸ್ತ್ರವಾಗಿ ಧರಿಸಿದನು. ಅಜ್ಞಾನದ ಸಂಕೇತವಾದ ಅಪಸ್ಮಾರ ಎಂಬ ರಾಕ್ಷಸನನ್ನು ತನ್ನ ಬಲಗಾಲಿನಿಂದ ಮೆಟ್ಟಿ ಹಿಡಿದು ದಿವ್ಯವಾದ ಆನಂದ ತಾಂಡವವನ್ನು ಮಾಡಿದನು. ಈ ದೃಶ್ಯವನ್ನು ಕಂಡ ಋಷಿಗಳಿಗೆ ಜ್ಞಾನೋದಯವಾಗಿ, ತಮ್ಮ ಅಜ್ಞಾನವನ್ನು ಬಿಟ್ಟು ಶಿವನಿಗೆ ಶರಣಾದರು. ಈ ಆನಂದ ತಾಂಡವವು ಸೃಷ್ಟಿ, ಸ್ಥಿತಿ, ಲಯ, ತಿರೋಭಾವ ಮತ್ತು ಅನುಗ್ರಹ ಎಂಬ ಐದು ವಿಶ್ವಕಾರ್ಯಗಳ ಸಂಕೇತವಾಗಿದೆ ಎಂದು ಪುರಾಣಗಳು ಹೇಳುತ್ತವೆ. ನಂತರ, ಪತಂಜಲಿ ಮಹರ್ಷಿ ಮತ್ತು ವ್ಯಾಘ್ರಪಾದ ಮಹರ್ಷಿಗಳ ಕೋರಿಕೆಯ ಮೇರೆಗೆ, ಶಿವನು ಈ ಚಿದಂಬರಂನಲ್ಲಿ (ತಿಲ್ಲೈ ವನ) ನಿರಂತರವಾಗಿ ಆನಂದ ತಾಂಡವವಾಡುತ್ತಾ, ನಿರೂಪಿ(ನಿರಾಕಾರ)ಯಾಗಿ ಆಕಾಶ ರೂಪದಲ್ಲಿ ನೆಲೆಸಿರುವುದಾಗಿ ವರ ನೀಡಿದನು.
ದೇವಾಲಯದ ಪರದೆಯ ಹಿಂದೆ ಅಡಗಿರುವ ಈ ವಿಶೇಷ ಆಧ್ಯಾತ್ಮಿಕ ಅರ್ಥದಿಂದಾಗಿ, ಹೊರಗೆ ಹೇಳಲಾಗದ ರಹಸ್ಯ ಅಥವಾ ಎಲ್ಲರಿಗೂ ಸುಲಭವಾಗಿ ತಿಳಿಯದ ವಿಷಯಗಳನ್ನು 'ಚಿದಂಬರ ರಹಸ್ಯ' ಎಂದು ಕರೆಯುವುದು ಜನರ ಬಳಕೆಯಲ್ಲಿ ರೂಢಿಯಾಯಿತು. ಆದರೆ ದೇವಾಲಯದ ಸಂಪ್ರದಾಯದ ಪ್ರಕಾರ, ಇದು ಕೇವಲ ಮುಚ್ಚಿಟ್ಟ ರಹಸ್ಯವಲ್ಲ, ಬದಲಿಗೆ ಶೂನ್ಯದಲ್ಲೂ ದೈವತ್ವವಿದೆ ಎಂಬ ಮಹಾನ್ ಸತ್ಯವನ್ನು ಸಾರುವ ಆಧ್ಯಾತ್ಮಿಕ ಸಂಕೇತವಾಗಿದೆ ಎಂದು ಪಂಡಿತರು ಹೇಳುತ್ತಾರೆ.