ದೇವರಿಗೆ ತೆಂಗಿನಕಾಯಿ ಒಡೆಯುವುದೇಕೆ?

By Web DeskFirst Published Jul 7, 2019, 1:20 PM IST
Highlights

ತೆಂಗಿನಕಾಯಿ ಇಲ್ಲದೆ ಹಿಂದೂ ಧರ್ಮದಲ್ಲಿ ಯಾವುದೇ ದೇವತಾ ಕಾರ್ಯಗಳೂ ಪೂರ್ಣವಾಗುವುದಿಲ್ಲ. ಉತ್ತರ ಭಾರತದ ದೇವಸ್ಥಾನಗಳು ಅಥವಾ ಧಾರ್ಮಿಕ ಕಾರ್ಯಗಳಲ್ಲಿ ತೆಂಗಿನ ಕಾಯಿ ಬಳಕೆ ಅಷ್ಟಾಗಿ ಇಲ್ಲವಾದರೂ ದಕ್ಷಿಣ ಭಾರತದಲ್ಲಿ ಇದರ ಬಳಕೆ ವ್ಯಾಪಕವಾಗಿದೆ. ದೇವಸ್ಥಾನಕ್ಕೆ ಹೋದವರು ಸಾಮಾನ್ಯವಾಗಿ ಹಣ್ಣು-ಕಾಯಿ ಮಾಡಿಸದೆ ಬರುವುದಿಲ್ಲ. ಹಣ್ಣು-ಕಾಯಿ ಮಾಡಿಸುವುದು ಅಂದರೆ ದೇವರಿಗೆ ತೆಂಗಿನಕಾಯಿ ಹಾಗೂ ಹಣ್ಣಿನ ನೈವೇದ್ಯ ಮಾಡಿ ಅದರ ಪ್ರಸಾದ ಸ್ವೀಕರಿಸುವುದು. ಹಾಗೆಯೇ, ಶುಭಕಾರ್ಯಗಳಲ್ಲಿ ಕಲಶ ಸ್ಥಾಪಿಸುವಾಗಲೂ ಕಲಶದ ಮೇಲೆ ತೆಂಗಿನ ಕಾಯಿ ಇಟ್ಟೇ ಇಡುತ್ತಾರೆ. ಬೇರೆ ಬೇರೆ ಸಂದರ್ಭಗಳಲ್ಲಿ ಬಳಸುವ ಪೂರ್ಣಕುಂಭ ಕೂಡ ತೆಂಗಿನಕಾಯಿ ಇಲ್ಲದೆ ಪೂರ್ಣವಾಗುವುದಿಲ್ಲ.

ಏಕೆ ತೆಂಗಿನ ಕಾಯಿಗೆ ಇಷ್ಟು ಪ್ರಾಶಸ್ತ್ಯ? 

ಏಕೆಂದರೆ, ಇದನ್ನು ಹಿಂದೂಗಳು ಸಂಪತ್ತಿನ ಫಲ, ಅಂದರೆ ಶ್ರೀಫಲ ಎಂದು ನಂಬುತ್ತಾರೆ. ದೇವರೇ ತೆಂಗಿನ ಮರವನ್ನು ಸ್ಟೃಸಿದ ಎಂಬ ನಂಬಿಕೆಯಿದೆ. ಅದನ್ನು ಕಲ್ಪವೃಕ್ಷ ಎಂದು ಗುರುತಿಸಲಾಗುತ್ತದೆ. ಅಂದರೆ ಅದು ಕೇಳಿದ್ದನ್ನು ಕೊಡುವ ಮರ ಎಂದರ್ಥ. ಪುರಾಣದ ಕತೆಯ ಪ್ರಕಾರ, ತ್ರಿಶಂಕು ರಾಜನು ಸ್ವರ್ಗಕ್ಕೆ ಹೋಗುವುದನ್ನು ತಪ್ಪಿಸಲು ಹಿಶ್ವಾಮಿತ್ರ ಮಹರ್ಶಿಗಳು ತೆಂಗಿನ ಮರವನ್ನು ಸೃಷ್ಟಿಸಿ, ಅದರ ಮೇಲೆ ತ್ರಿಶಂಕುವನ್ನು ಕೂರಿಸಿದ್ದರಂತೆ.

ತೆಂಗು ಬೆಳೆಯಲು ವಾತಾವರಣ ಹೇಗಿರಬೇಕು?

ತೆಂಗಿನ ಕಾಯಿಗೆ ಪೂಜಾಸ್ಥಾನ ಕೊಡುವುದಕ್ಕೆ ಅಥವಾ ಅದು ಪವಿತ್ರ ಫಲ ಎಂದು ನಂಬುವುದಕ್ಕೆ ಕಾರಣ ಅದರ ಬಹೂಪಯೋಗಿ ಗುಣವೇ ಆಗಿದೆ ಎಂದರೆ ತಪ್ಪಲ್ಲ. ಇನ್ನು, ಹಳೆಯ ಕಾಲದಲ್ಲಿ ದೇವರಿಗೆ ಮಾನವ ಬಲಿ ಅಥವಾ ಪ್ರಾಣಿ ಬಲಿ ನೀಡುವ ಪದ್ಧತಿ ಹೆಚ್ಚಿತ್ತು. ಅದು ತಪ್ಪು ಎಂದು ತಿಳಿಯತೊಡಗಿದಂತೆ ಅದರ ಬದಲಿಗೆ ತೆಂಗಿನ ಕಾಯಿಯನ್ನು ಒಡೆದು ನೈವೇದ್ಯ ಮಾಡುವ ಪದ್ಧತಿ ಬಂತು ಎಂದೂ ಹೇಳಲಾಗುತ್ತದೆ. ತೆಂಗಿನ ಕಾಯಿಯನ್ನು ಒಡೆಯುವುದು ಮನುಷ್ಯನ ಅಹಂಕಾರವನ್ನು ಭಗ್ನಗೊಳಿಸಿ ದೇವರಿಗೆ ಅರ್ಪಿಸುವುದರ ಅಥವಾ ದೇವರ ಮುಂದೆ ಬಿಟ್ಟು ಬರುವುದರ ಸಂಕೇತವೂ ಹೌದು.

ಕೊಬ್ಬರಿ ಎಣ್ಣೆ ದೇಹಕ್ಕೆ ‘ವಿಷ’ವೇ ?

- ಮಹಾಬಲ ಸೀತಾಳಬಾವಿ

click me!