
ಅವಧೂತ ವಿನಯ್ ಗುರೂಜಿ ಅವರು ಒಂದು ಕುತೂಹಲಕಾರಿ ವಿಷಯವನ್ನು ಮಂಡಿಸಿದ್ದಾರೆ. ಅವರ ಪ್ರಕಾರ ಸರ್ಪಲೋಕಕ್ಕೂ ಮನುಷ್ಯ ಲೋಕಕ್ಕೂ ಸಂಬಂಧವಿದೆ. ಪುರುಷನ ವೀರ್ಯಶಕ್ತಿ ಅಥವಾ ವೀರ್ಯದ ಪ್ರಮಾಣಕ್ಕೂ ಸರ್ಪಕ್ಕೂ ಸಂಬಂಧವಿದೆ. ಅದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ.
ಸರ್ಪಗಳಿರುವುದು ಸಮುದ್ರದಲ್ಲಿ, ಸಮುದ್ರದ ತಳದಲ್ಲಿ. ಹಾಗಾಗಿ ನಾಗಪಂಚಮಿಯಂದು ಹಾಕಿದ ಹಾಲು ಸಮುದ್ರಕ್ಕೆ ತಲುಪಬೇಕು ಎಂಬುದು ಆಶಯ. ನಾಗಗಳು ಯಾಕೆ ಚಿನ್ನದ ಬಣ್ಣ? ಚಿನ್ನ ಅಂದರೆ ತೇಜಸ್ಸು. ಅದು ತೇಜಸ್ಸಿನ ಪ್ರತೀಕ. ಸರ್ಪಗಳು ಎರಡು ರೀತಿಯಲ್ಲಿ ಮನುಷ್ಯನಿಗೆ ಸಹಾಯ. ಒಂದನೆಯದು ರೈತನಿಗೆ ಇಲಿಗಳ ನಿವಾರಣೆ. ಎರಡನೆಯದು ಆಧ್ಯಾತ್ಮಿಕ ದೃಷ್ಟಿಯಿಂದ ವಿಶ್ವದ ತೇಜಸ್ಸನ್ನು ಸೆಳೆದು ತಮ್ಮಲ್ಲಿ ನಿಕ್ಷೇಪಿಸಿಕೊಂಡು ಭೂಮಿಗೆ ಕೊಡುತ್ತೆ.
ಕುಕ್ಕೆ ಸುಬ್ರಹ್ಮಣ್ಯನಿಗೆ ಅಂದರೆ ಆದಿಶೇಷನಿಗೆ ಇನ್ನೊಂದು ಹೆಸರಿದೆ- ಅನಂತವೀರ್ಯ ಅಂತ. ಅಂದರೆ ಮಿತಿಯೇ ಇಲ್ಲದ ಶಕ್ತಿ ಅಂತ. ನಮ್ಮ ದೇಹದಲ್ಲಿರುವ ವೀರ್ಯದ ರೂಪ ಹೇಗಿರುತ್ತದೆ? ಅದು ಸುಬ್ರಹ್ಮಣ್ಯನ ಈಟಿಯ ರೂಪದಲ್ಲಿರುತ್ತದೆ. ವೀರ್ಯಕ್ಕೂ ಅದಕ್ಕೂ ವ್ಯತ್ಯಾಸವಿಲ್ಲ. ಒಬ್ಬ ಮನುಷ್ಯ ಸ್ತ್ರೀಯ ಗರ್ಭಪ್ರವೇಶ ಮಾಡುವುದು ವೀರ್ಯದ ಮೂಲಕ- ಸರ್ಪ ರೂಪದಲ್ಲಿ. ವೀರ್ಯದ ರೂಪ ಮತ್ತು ಚಲನೆಯನ್ನು ನೋಡಿದರೆ ಸರ್ಪದ ನೆನಪು ಆಗದೇ ಇರದು.
ಹೀಗೆ ನಮ್ಮ ಜೀವಸಂಕುಲಕ್ಕೂ ಸರ್ಪಕುಲಕ್ಕೂ ಹತ್ತಿರದ ಸಂಬಂಧವಿದೆ. ಆಮೇಲೆ ಆ ವೀರ್ಯ ಅಂಡದೊಡನೆ ಸೇರಿ ಭ್ರೂಣವಾಗಿ ಮಗುವಾಗುತ್ತೆ. ಭ್ರೂಣದಿಂದಲೇ ದಶಾವತಾರಗಳನ್ನು ತೋರಿಸುತ್ತೆ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ ನಂತರ ಹೊರಗೆ ಬಂದಾಗ ಪುಟ್ಟ ಮಗು ವಾಮನ. ಆ ವಾಮನನಿಗೆ ಜ್ಞಾನ ಸಿಕ್ಕಿದಾಗ ರಾಮ, ಕರ್ಮದಿಂದ ಪರಿಪುಷ್ಟವಾದಾಗ ಕೃಷ್ಣ, ಪೂರ್ಣವನ್ನು ತಿಳಿದಾಗ ಬುದ್ಧ, ನಂತರ ಸಮಾಜದ ಪುನರುತ್ಥಾನಕ್ಕಾಗಿ ಕಲ್ಕಿ.
ನಾಗಗಳು ಅಥವಾ ಸರ್ಪಗಳು ಕಶ್ಯಪ ಋಷಿಯ ಮಕ್ಕಳು. ಎಂಟು ನಾಗಗಳು ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ ಮತ್ತು ತಕ್ಷಕ. ನಗನಿಗೆ ಐದು ಹೆಡೆ. ಶೇಷನಿಗೆ ಏಳು ಹಾಗೂ ವಾಸುಕಿಗೆ ಐದು. ವಾಸುಕಿ ಅಂದರೆ ನಮ್ಮ ಲೋಕ. ನಮ್ಮನ್ನು ರಕ್ಷಣೆ ಮಾಡುತ್ತಾನೆ. ನಮ್ಮ ದೇಹದಲ್ಲಿ ಐದು ಪ್ರಾಣಗಳಿವೆ, ಪಂಚಭೂತಗಳಿವೆ. ಅದರ ಸಂಕೇತವಾಗಿ ಐದು ಹೆಡೆ. ಶೇಷನಿಗೆ ಏಳು ಹೆಡೆ ಅಂದರೆ ತಿರುಮಲದಲ್ಲಿ ಏಳು ಬಾಗಿಲಿದೆ, ಏಳು ಲೋಕಗಳನ್ನು ತನ್ನ ತಲೆ ಮೇಲೆ ಹೊತ್ತದ್ದರಿಂದ ಅವನಿಗೆ ಏಳು ಹೆಡೆ. ಅನಂತ ಪದ್ಮನಾಭನ ಮೇಲೆ ಮಲಗಿದವನು ನಾರಾಯಣ. ಅವನೇ ಎಲ್ಲ ಸರ್ಪಗಳಿಗೂ ನಾಗಗಳಿಗೂ ಅಧಿದೇವ.
ಸಂತಾನಹೀನತೆಯಿಂದ ಕೊರಗುತ್ತಿರುವವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಹರಕೆ ಸಲ್ಲಿಸುವುದನ್ನು ನಾವು ನೋಡುತ್ತೇವೆ. ಸೆಲೆಬ್ರಿಟಿಗಳು ಕೂಡ ಸುಬ್ರಹ್ಮಣ್ಯಕ್ಕೆ ಬಂದು ಸೇವೆ ಸಲ್ಲಿಸುತ್ತಾರೆ. ಆಶ್ಲೇಷಬಲಿ, ಸರ್ಪಸಂಸ್ಕಾರ ಮಾಡಿಸುತ್ತಾರೆ. ಮಕಕ್ಕಳಾಗಲಿಲ್ಲ ಎಂದರೆ ಜ್ಯೋತಿಷಿಗಳು ಕೂಡ ನೀಡುವ ಪರಿಹಾರ ಸುಬ್ರಹ್ಮಣ್ಯಕ್ಕೆ ಒಮ್ಮೆ ಹೋಗಿ ಬನ್ನಿ ಅಂತಲೇ. ಹೀಗೆ ಸಂತಾನಶಕ್ತಿಗೂ ಸರ್ಪದೇವರಿಗೂ ಸಂಬಂಧ ಇರುವುದು ಖಚಿತ. ಅದನ್ನೇ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.
ಜ್ಯೋತಿಷಿಗಳು ಹೇಳುವ ಪ್ರಕಾರ ಸರ್ಪ ಸಂಸ್ಕಾರ ಮಾಡುವುದರಿಂದ ಆ ಕುಟುಂಬಕ್ಕಿರುವ ಎಲ್ಲ ದೋಷಗಳೂ ನಿವಾರಣೆಯಾಗುತ್ತವೆ. ವಿಶೇಷವಾಗಿ ಸತ್ಸಂತಾನ ಪ್ರಾಪ್ತಿಗಾಗಿ, ಬಾಲಗ್ರಹ ನಿವಾರಣೆಗಾಗಿ, ದಾಂಪತ್ಯದಲ್ಲಿ ಸರಸ ಹಾಗೂ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಗಾಗಿ, ಉದ್ಯೋಗ ವ್ಯಾಪಾರ ಅಭಿವೃದ್ಧಿಗಾಗಿ, ಆರ್ಥಿಕ ಮುಗ್ಗಟ್ಟು ಪರಿಹಾರಕ್ಕಾಗಿ, ಕೋರ್ಟು ಕಛೇರಿಗಳಲ್ಲಿ, ಸುಗಮ ವ್ಯವಹಾರಕ್ಕೆ, ಆರೋಗ್ಯ ಭಾಗ್ಯಕ್ಕೆ ಈ ವಿಧಿಯಿಂದ ವಿಶೇಷ ಪ್ರಯೋಜನ ದೊರೆಯುತ್ತದೆ.