'ಮೋದಿ ಪ್ರಧಾನಿ ಆಗಲು ಅಡ್ವಾಣಿ ಕಾರಣ, ಟಿಕೆಟ್ ರಹಸ್ಯ ಅವರೇ ಹೇಳಲಿ'
ಮೋದಿ ಪ್ರಧಾನಿ ಆಗಲು ಅಡ್ವಾಣಿ ಶ್ರಮವೂ ಕಾರಣ: ಉಮಾ| ಟಿಕೆಟ್ ಘೋಷಣೆ ಆಗದ್ದಕ್ಕೆ ಅಡ್ವಾಣಿಯೇ ಸ್ಪಷ್ಟನೆ ನೀಡಬೇಕು| ವಯಸ್ಸು ಮೀರಿದವರಿಗೆ ಟಿಕೆಟ್ ಇಲ್ಲ ಎಂಬ ನಿಯಮ ಇಲ್ಲ| ನಾನು ಈ ಹಿಂದೆಯೇ ಟಿಕೆಟ್ ಬೇಡ ಎಂದಿದ್ದೆ| ಮೇ ತಿಂಗಳಿಂದ 18 ತಿಂಗಳ ಕಾಲ ಗಂಗಾನದಿಗುಂಟ ಪಾದಯಾತ್ರೆ| ಮೋದಿಯೇ ಪುನಃ ಪ್ರಧಾನಿ ಆಗಲೆಂದು ಪ್ರಾರ್ಥಿಸುವೆ
ನವದೆಹಲಿ[ಮಾ.25]: ಇಂದು ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಏರಬೇಕು ಎಂದರೆ ಅದರ ಹಿಂದೆ ಬಿಜೆಪಿ ಮಹೋನ್ನತ ನಾಯಕ ಎಲ್.ಕೆ. ಅಡ್ವಾಣಿ ಅವರ ಶ್ರಮ ಇದೆ. ಅಡ್ವಾಣಿ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವತ್ತೂ ಹುದ್ದೆ ಬಯಸಿದವರಲ್ಲ ಎಂದು ಬಿಜೆಪಿ ನಾಯಕಿ ಉಮಾಭಾರತಿ ಹೇಳಿದರು. ಅಲ್ಲದೆ, ಅಡ್ವಾಣಿ ಅವರಿಗೆ ಈ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಘೋಷಣೆ ಆಗದೇ ಇರುವ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು ಎಂದೂ ಅಭಿಪ್ರಾಯಪಟ್ಟರು.
4 ದಾಖಲೆವೀರ ಸಂಸದರು ಈ ಬಾರಿ ಸಂಸತ್ತಿಗೆ ಇಲ್ಲ
ಚುನಾವಣಾ ನಿವೃತ್ತಿ ಹೊಂದಿ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕಗೊಂಡ ಮರುದಿನವಾದ ಭಾನುವಾರ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ‘ಅಡ್ವಾಣಿ ಅವರಿಗೆ ಟಿಕೆಟ್ ಘೋಷಣೆ ಆಗದೇ ಇರುವ ಬಗ್ಗೆ ಕವಿದಿರುವ ಮಂಜನ್ನು ಅವರೇ ಸ್ವಚ್ಛಗೊಳಿಸಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.
ಚುನಾವಣಾ ರಾಜಕೀಯಕ್ಕೆ ಅಡ್ವಾಣಿ ಗುಡ್ಬೈ
ಅಡ್ವಾಣಿ ಅವರು ಪ್ರತಿನಿಧಿಸುತ್ತಿದ್ದ ಗಾಂಧಿನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೆಸರು ಇತ್ತೀಚೆಗೆ ಘೋಷಣೆಯಾಗಿತ್ತು. ಪಕ್ಷದಲ್ಲಿ ವಯಸ್ಸು ಮೀರಿದವರಿಗೆ ಟಿಕೆಟ್ ಕೊಡಬಾರದು ಎಂಬ ಯಾವುದೇ ನಿಮಯ ಇಲ್ಲ. ಈ ಸಲ ಅನೇಕ ಯುವ ಸಂಸದರಿಗೂ ಟಿಕೆಟ್ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಾಲಿವುಡ್ ಸೂಪರ್ಸ್ಟಾರನ್ನೇ ಮಣಿಸಿದ್ದ ಅಡ್ವಾಣಿ
‘ನಾನು ಸ್ಪರ್ಧೆ ಮಾಡಲ್ಲ ಎಂದು ಈ ಹಿಂದೆಯೇ ಹೇಳಿದ್ದೆ’ ಎಂದ ಉಮಾ, ‘ಮೇನಿಂದ ಗಂಗಾನದಿಗುಂಟ 18 ತಿಂಗಳ ಪಾದಯಾತ್ರೆ ಕೈಗೊಳ್ಳುವೆ’ ಎಂದು ನುಡಿದರು. ‘ಮೋದಿ ಅವರು ಪುನಃ ಪ್ರಧಾನಿಯಾಗಬೇಕು. ದೇಶಕ್ಕೆ, ಬಡವರಿಗೆ ಮೋದಿ ಉಪಕಾರ ಮಾಡಿದ್ದು, ಅವರು ಪುನಃ ಅಧಿಕಾರಕ್ಕೆ ಬರಲು ನಾನು ದೇವರಲ್ಲಿ ಬೇಡಿಕೊಳ್ಳುವೆ. ಮೋದಿ ಅವರಿಗೆ ಪರ್ಯಾಯವಿಲ್ಲ’ ಎಂದೂ ಉಮಾ ನುಡಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...