ಸಾರಾಂಶ
ರಾಜ್ಯದಲ್ಲಿ 52 ಲಕ್ಷ ಜಮೀನುಗಳ ಖಾತೆಗಳು ಇನ್ನೂ ನಿಧನ ಹೊಂದಿದವರ ಹೆಸರಿನಲ್ಲೇ ಇವೆ. ಈ ಹಿಂದೆ ಪೌತಿ ಖಾತೆ ಅಭಿಯಾನ ರಾಜ್ಯದಲ್ಲಿ ನಡೆದಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿಲ್ಲ.
ಬೆಂಗಳೂರು (ಮೇ.12): ರಾಜ್ಯದಲ್ಲಿ ಹಲವು ದಶಕಗಳಿಂದ 50 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಮೃತರ ಹೆಸರಿನಲ್ಲೇ ಮುಂದುವರೆಯುತ್ತಿದ್ದು, ಪೌತಿ ಖಾತೆ ಆಗದೆ ವಾರಸುದಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಮಾಲೀಕತ್ವದ ಹಕ್ಕು ಹಾಗೂ ತನ್ಮೂಲಕ ಪಡೆಯಬೇಕಾಗಿದ್ದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ರಾಜ್ಯಾದ್ಯಂತ ಪೌತಿ ಖಾತೆ ಅಭಿಯಾನ ಆರಂಭಿಸಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ 52 ಲಕ್ಷ ಜಮೀನುಗಳ ಖಾತೆಗಳು ಇನ್ನೂ ನಿಧನ ಹೊಂದಿದವರ ಹೆಸರಿನಲ್ಲೇ ಇವೆ. ಈ ಹಿಂದೆ ಪೌತಿ ಖಾತೆ ಅಭಿಯಾನ ರಾಜ್ಯದಲ್ಲಿ ನಡೆದಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿಲ್ಲ. ಹೀಗಾಗಿ, ಮೃತರ ಹೆಸರಿನಲ್ಲಿ ಉಳಿದಿರುವ ಜಮೀನು ದಾಖಲೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡುವ ಸಲುವಾಗಿ ವಿಶೇಷ ಅಭಿಯಾನಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಲಾತ್ಕಾರ ಕೇಸ್ನಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಹೈಕೋರ್ಟ್ ಆದೇಶ
ಏನಿದು ಪೌತಿ ಖಾತೆ?: ಮರಣ ಹೊಂದಿದ ವ್ಯಕ್ತಿ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಯಾವುದೇ ವ್ಯಕ್ತಿಯ ಹೆಸರಿಗೆ ಜಮೀನು ಖಾತೆ ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯಲಾಗುತ್ತದೆ. ಕೆಲ ಆಸ್ತಿಗಳಿಗೆ ಈಗ ಎರಡು ಅಥವಾ ಮೂರನೇ ತಲೆಮಾರಿನವರು ವಾರಸುದಾರರಾಗಿದ್ದರೆ, ಇನ್ನೂ ಕೆಲ ಆಸ್ತಿಗಳಿಗೆ ನಾಲ್ಕನೇ ತಲೆಮಾರಿನವರ ಮಾಲೀಕತ್ವವಿದೆ. ಅಂಥವರಿಗೂ ವಿಎಗಳ ಮೂಲಕ ಪೌತಿ ಖಾತೆ ಮಾಡಿಸಿಕೊಡುವ ಕೆಲಸ ಸರ್ಕಾರ ಮಾಡಲಿದೆ.
ಪೌತಿ ಖಾತೆ ಮಾಡಿಸದಿದ್ದರೆ ಏನು ಸಮಸ್ಯೆ ಆಗುತ್ತೆ?: ಆಸ್ತಿ ಮಾಲೀಕರು ನಿಧನ ಹೊಂದಿದ ಬಳಿಕ ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳದಿದ್ದರೆ ಜಮೀನುಗಳ ಸ್ವಾಧೀನ ಹೊಂದಿದ್ದರೂ ಉಪಯೋಗವಿಲ್ಲದಂತೆ ಆಗುತ್ತದೆ. ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದರೆ ಬೆಳೆ ವಿಮೆಯಾಗಲಿ ಅಥವಾ ಬೆಳೆ ನಷ್ಟ ಪರಿಹಾರ ಪಡೆಯುವುದಕ್ಕಾಗಲಿ ಆಗುವುದಿಲ್ಲ. ಇನ್ನು ಬ್ಯಾಂಕ್ಗಳಿಂದ ಸಾಲ-ಸೌಲಭ್ಯ ಪಡೆಯಲು ಸಾಧ್ಯವಾಗಲ್ಲ.
3.5 ಕೋಟಿ ಆಸ್ತಿಗಳಿಗೆ ಆಧಾರ್ ಜೋಡಣೆ: ರಾಜ್ಯದಲ್ಲಿರುವ 4.11 ಕೋಟಿ ಜಮೀನು ಆಧಾರ್ ಮೂಲಕ ಇ-ಕೆವೈಸಿ ಮಾಡಲು ಪ್ರಯತ್ನಿಸಿದ್ದು, 3.5 ಕೋಟಿ ಜಮೀನುಗಳ ಮಾಲೀಕರು ಆಸಕ್ತಿ ತೋರಿದ್ದಾರೆ. 2.2 ಕೋಟಿ ಜಮೀನು ಇ-ಕೆವೈಸಿ ಮಾಡಲಾಗಿದೆ. 51.13 ಲಕ್ಷ ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. ಸುಮಾರು 70 ಲಕ್ಷ ಜಮೀನುಗಳು ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಹೀಗಾಗಿ 52 ಲಕ್ಷ ಆಸ್ತಿಗಳಿಗೆ ಮೊದಲು ಪೌತಿ ಖಾತೆ ಮಾಡಿಸುವ ಅನಿವಾರ್ಯತೆಗೆ ಸರ್ಕಾರ ಸಿಲುಕಿದೆ.
ನ್ಯಾಯಾಲಯಗಳಲ್ಲಿ ತಕರಾರು ಪ್ರಕರಣಗಳ ವಿಲೇವಾರಿ ಜೊತೆಗೆ ಪೋಡಿ ದುರಸ್ತಿ, ನಮೂನೆ 3-9 ಮಿಸ್ಮ್ಯಾಚ್ ಹಾಗೂ ಪೌತಿ ಖಾತೆ ಆಂದೋಲನ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲೇ ನಡೆಯಬೇಕು. ಹೀಗಾಗಿ, ಅಧಿಕಾರಿಗಳು ಜನರ ಸಮಸ್ಯೆ ಹಾಗೂ ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕೆಲಸಗಳನ್ನೂ ಅಭಿಯಾನ ಮಾದರಿಯಲ್ಲಿ ನಡೆಸಬೇಕಿದೆ. ಪೌತಿ ಖಾತೆ ಅಭಿಯಾನಕ್ಕೂ ಗಮನ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ 100 ಕಾಂಗ್ರೆಸ್ ಭವನ ಸ್ಥಾಪಿಸುವ ಉದ್ದೇಶ: ಡಿ.ಕೆ.ಶಿವಕುಮಾರ್
ಪೌತಿ ಖಾತೆ ಪಡೆಯುವುದು ಹೇಗೆ?: ಅಭಿಯಾನದ ಹೊರತಾಗಿ ಜನ ನೇರವಾಗಿ ಪೌತಿ ಖಾತೆ ಜಮೀನು ಮಾಲೀಕ ನಿಧನ ಹೊಂದಿದ ಬಳಿಕ ಸರ್ಕಾರ ಸೂಚಿಸಿರುವ ಮೂಲಗಳ ಪ್ರಕಾರ ಮರಣ ಹೊಂದಿದ ಮಾಲೀಕನ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪಡೆದು ನಮೂನೆ-1 ರಲ್ಲಿ ಅರ್ಜಿ ಸಲ್ಲಿಸಬೇಕು. ಪೂರಕ ದಾಖಲೆಗಳಾದ ನಿಧನ ಹೊಂದಿದ ಮಾಲೀಕರ ಮರಣ ಪ್ರಮಾಣ ಪತ್ರ, ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ಬೇಕು. ಇದರ ಜೊತೆಗೆ ಇತ್ತೀಚಿನ ಪಹಣಿ ಹಾಗೂ 18 ವರ್ಷ ಮ್ಯುಟೇಷನ್ ಸಹ ಸಲ್ಲಿಸಬೇಕು.