Asianet Suvarna News Asianet Suvarna News

60 ಹಸು, 1000 ಲೀ ಹಾಲು;ಹಸು ಸಾಕಿದರೆ ಲಾಭವುಂಟು!

ದೇಸಿ ಹಸುಗಳ ಸಾಕಣೆ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಈ ಹಸುಗಳ ಹಾಲಿಗೆ ದುಪ್ಪಟ್ಟು ಬೆಲೆಯಿದ್ದರೆ ಸೆಗಣಿ, ಗಂಜಳಕ್ಕೂ ಬೇಡಿಕೆ ಹೆಚ್ಚುತ್ತಿದೆ. ಕಾರ್ಕಳದ ಮುನಿಯಾಲಿನಲ್ಲಿ ರಾಮಕೃಷ್ಣ ಆಚಾರ್‌ ಅವರು 60 ಗಿರ್‌ ಹಸುಗಳನ್ನು ಸಾಕುತ್ತಿದ್ದಾರೆ. ದೇಸಿ ಹಸುಗಳ ಉತ್ಪನ್ನಕ್ಕೆ ವಿಭಿನ್ನ ಬಗೆಯಲ್ಲಿ ಮಾರುಕಟ್ಟೆಕಲ್ಪಿಸುವ ಯೋಜನೆಯನ್ನೂ ಮಾಡಿದ್ದಾರೆ.

Karkala based farmer Ramakrishna gains profit by animal husbandry
Author
Bangalore, First Published Aug 27, 2019, 10:53 AM IST

- ವಿ. ಬಾಲಕೃಷ್ಣ ಶಿರ್ವ

ಅಗಲವಾದ ಉಬ್ಬಿದ ಹಣೆ, ದೊಡ್ಡ ಮೂತಿ, ಮುಚ್ಚಿದಂತೆ ಕಾಣುವ ಕಣ್ಣು, ಸಡಿಲವಾಗಿ ಜೋತಾಡುತ್ತಿರುವ ಚರ್ಮದ ಹಸುಗಳವು. ಸಾಮಾನ್ಯವಾಗಿ ಕಾಣ ಸಿಗುವ ಎಚ್‌ಎಫ್‌, ಜೆರ್ಸಿ ಹಸುಗಳಿಗಿಂತ ಭಿನ್ನ ಹಾಗೂ ಹೆಚ್ಚು ಆಕರ್ಷಕ. ಇವು ದೇಶೀಯ ಗಿರ್‌ ಹಸುಗಳು. ಮುನಿಯಾಲಿನ ‘ಸಂಜೀವಿನಿ ಫಾಮ್‌ರ್ ಮತ್ತು ಡೈರಿ’ಯಲ್ಲಿ ಇದೇ ಮಾದರಿಯ 60 ಹಸುಗಳಿವೆ. ದಿನಕ್ಕೆ ಸಾವಿರ ಲೀಟರ್‌ಗಳಷ್ಟುದೇಸಿ ಹಾಲು ಉತ್ಪಾದನೆಯಾಗುತ್ತದೆ. ಇದನ್ನು ಮಣಿಪಾಲ, ಉಡುಪಿಯಲ್ಲಿ ಮಾರಾಟ ಮಾಡುತ್ತಾರೆ.

ದೇಗುಲದ ಗಂಟೆ ಬಾರಿಸುವ ಹಸುವಿನ ವಿಡಿಯೋ ವೈರಲ್‌

ಉಡುಪಿಯಿಂದ 30 ಕಿ.ಮೀ. ದೂರದಲ್ಲಿ ಕಾರ್ಕಳದಿಂದ 25ಕಿ.ಮೀ. ಪಯಣಿಸಿದರೆ ಹೆಬ್ರಿ ಎಂಬ ಪಟ್ಟಣವಿದೆ. ಇಲ್ಲಿಂದ 10ಕಿ.ಮೀ. ದೂರದಲ್ಲಿರುವುದು ಮುನಿಯಾಲು. ಇಲ್ಲಿಗೆ ಸಮೀಪ ‘ಪಾಲ್ಚೆಂಟ್‌’ ಎಂಬ ಕುಗ್ರಾಮವಿದೆ. ಇಲ್ಲಿ ಸುಮಾರು 27ಎಕ್ರೆ ಪ್ರದೇಶದಲ್ಲಿ ರಾಮಕೃಷ್ಣ ಆಚಾರ್‌ರವರ ಕನಸಿನ ಕೂಸು ‘ಸಂಜೀವಿನಿ ಫಾಮ್‌ರ್‍ ಮತ್ತು ಡೈರಿ’ ಇದೆ. ಸುಮಾರು 800 ತೆಂಗು, 1000 ಮಲ್ಲಿಕಾ ಮಾವಿನ ಗಿಡಗಳು, 3000 ಅಡಿಕೆ, 8000 ಸಾಗುವಾನಿ ಗಿಡಗಳ ಹಚ್ಚ ಹಸಿರಿನ ಸೌಂದರ್ಯ ಸಿರಿಯ ನಡುವೆ ತಲೆಯೆತ್ತಿ ನಿಂತಿರುವುದೇ ‘ಗೀರ್‌’ ತಳಿಯ ರಾಸುಗಳ ಹೈನುಗಾರಿಕೆ.

Karkala based farmer Ramakrishna gains profit by animal husbandry

ಹಸುಗಳಿಗೆ ಅಕ್ಕರೆಯ ಆರೈಕೆ

ಇಲ್ಲಿರುವ 60 ಗಿರ್‌ ದನಗಳು ಅತ್ಯುತ್ತಮ ಹಾಲಿನ ತಳಿಗಳು. ಇವುಗಳ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚು. ಈ ರಾಸುಗಳ ಕೊಟ್ಟಿಗೆಯನ್ನು ಭಿನ್ನವಾಗಿ ಕಟ್ಟಿದ್ದಾರೆ. ಕೊಟ್ಟಿಗೆಯ ಒಳಗೆ ಬೇರೆ ಬೇರೆ ವಿಭಾಗಗಳಿವೆ. ಮೊದಲನೆಯ ವಿಭಾಗದಲ್ಲಿ ರಾಸುಗಳನ್ನು ಕಟ್ಟಿಹಾಕದೆ ಅಡ್ಡಾಡಲು ಬಿಡಲಾಗಿದೆ. ಗಬ್ಬದ ರಾಸುಗಳನ್ನು ಮಗದೊಂದು ವಿಭಾಗದಲ್ಲಿ ಇರಿಸಲಾಗಿದೆ. ಕಾರಣ ಹೆಚ್ಚಿನ ಆರೈಕೆಯ ಅವಶ್ಯಕತೆಯಿರುತ್ತದೆ. ಗೋವಿನ ಗರ್ಭಕೋಶದಲ್ಲಿ ಬೆಳೆಯುವ ಪಿಂಡವು ಗರ್ಭದ ಅವಧಿಯ ಕೊನೆಯ ಎರಡು ತಿಂಗಳಲ್ಲಿ ಬಹು ಶೀಘ್ರವಾಗಿ ಬೆಳೆಯುತ್ತದೆ. ಆಗ ಹೆಚ್ಚಿನ ಆರೈಕೆ ಬೇಕಾಗುವುದು. ಆ ಸಂದರ್ಭದಲ್ಲಿ ಹೆಚ್ಚು ಖನಿಜಾಂಶವುಳ್ಳ ಸಮತೋಲನ ಆಹಾರವನ್ನು ಕೊಡಬೇಕಾಗುತ್ತದೆ.

ರಾಖಿ ಸಾವಂತ್ ಬ್ಯೂಟಿ ಸೀಕ್ರೆಟ್ ಸಗಣಿಯಂತೆ?

ಹಾಲು ಕರೆಯಲು ಒಪ್ಪ ಓರಣದ ಕೊಠಡಿ. ಅತ್ಯಾಧುನಿಕ ವ್ಯವಸ್ಥೆ. ಎದುರು ಭಾಗದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇದೆ. ಹಾಲು ಕರೆಯುವ ಯಂತ್ರವನ್ನು ಸ್ವಚ್ಛವಾಗಿ ಕ್ರಮಬದ್ಧವಾಗಿ ಇರಿಸಲಾಗಿದೆ. ಹಾಲು ಕರೆದಾದ ನಂತರ ಜೀವಾಣು ನಾಶಕ ದ್ರಾವಣ ಚಿಮುಕಿಸಿ, ಹಾಲನ್ನು ಸ್ಟೈನ್‌ಲೆಸ್‌ ಸ್ಟೀಲ್‌ನ ಕ್ಯಾನ್‌ನಲ್ಲಿ ತುಂಬಿಸಿಡಲಾಗುತ್ತದೆ. ಪ್ರಸ್ತುತ 1000ಲೀ. ಹಾಲನ್ನು ಉತ್ಪಾದಿಸಲಾಗುತ್ತಿದೆ. ಗೀರ್‌ ರಾಸುವಿನಿಂದ ಉತ್ಪತ್ತಿಯಾದ ಎ2 ಹಾಲನ್ನು ‘ಕ್ಷೀರಾ’ ಎನ್ನುವ ಹೆಸರಿನಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಉದ್ದೇಶ ಆಚಾರ್‌ ಅವರಿಗಿದೆ.

Karkala based farmer Ramakrishna gains profit by animal husbandry

ಕೊಟ್ಟಿಗೆ ನಿರ್ವಹಣೆ

ಗಿರ್‌ ದನಗಳು ಕೊಟ್ಟಿಗೆಯ ಎಡಭಾಗದಲ್ಲಿ ತೊಟ್ಟಿಗಳಿದ್ದು ಇದರಲ್ಲಿ ಗಿರ್‌ ದನದ ಸಗಣಿ, ತೆಂಗಿನ ಹೆಡೆ, ಸೊಪ್ಪು, ಅಳಿದುಳಿದ ಹುಲ್ಲು ಹಾಕುತ್ತಿದ್ದಾರೆ. ಈ ತೊಟ್ಟಿಗಳಲ್ಲಿ ಎರೆಹುಳು ಸಾಕಣೆಯೂ ನಡೆಯುತ್ತದೆ. ಈ ಗೊಬ್ಬರ ತೋಟಕ್ಕೆ ಹಾಕಿದಾಗ ಎರೆಹುಳಗಳು ನಿರಂತರವಾಗಿ ಭೂಮಿಯನ್ನು ಸಡಿಲಗೊಳಿಸಿ ದಿನೇ ದಿನೇ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಜಪಾನಿನ ನೋಬೆಲ್‌ ಪ್ರಶಸ್ತಿ ವಿಜೇತ ಪೊಕವೋಕ ಹೇಳುವಂತೆ ರಸಾಯನಿಕ ಗೊಬ್ಬರ ಅಣುಬಾಂಬಿಗಿಂತಲೂ ಭೀಕರ, ದೇಶಿ ದನದ ವರ್ಮಿ ಗೊಬ್ಬರ ಬಳಸುವುದರಿಂದ ಈ ಭೀಕರತೆಯಿಂದ ಪಾರಾಗಬಹುದು. ‘ಒಂದು ದನ 10ಕೆ.ಜಿ ಯಷ್ಟುಸಗಣಿ ನೀಡುತ್ತದೆ. ಕಾಂಪೋಸ್ಟ್‌ ಗೊಬ್ಬರ ಕೆ.ಜಿ.ಗೆ 20ರೂ. ನಂತೆ ಮಾರುಕಟ್ಟೆದರವಿದ್ದು, ಈ ಉಪ ಉತ್ಪನ್ನದಿಂದ ದಿನಕ್ಕೆ 18000 ರು. ಆದಾಯ ಪಡೆಯಬಹುದು’ ಎಂಬುದು ಆಚಾರ್‌ರವರ ಅನುಭವದ ಮಾತು. ಈ ದೇಸಿ ಗೊಬ್ಬರವನ್ನೂ ಪ್ಯಾಕಿಂಗ್‌ ಮಾಡಿ ಸ್ವಂತ ಬ್ರಾಂಡ್‌ನಲ್ಲಿ ಮಾರುಕಟ್ಟೆಗೆ ತರುವ ಯೋಜನೆ ಇವರಿಗಿದೆ.

ಮುಂಬೈ ಐಐಟಿ ಮೊದ​ಲ ಮಹಡಿ ಪರೀಕ್ಷಾ ಕೊಠ​ಡಿ​ಗೆ ಬಂತು ಬೀದಿ ಹಸು!

ದೇಸಿ ಹಸುಗಳ ಆಹಾರ

ಸಂಜೀವಿನಿ ಫಾಮ್‌ರ್‍ನಲ್ಲಿರುವ ಗಿರ್‌ ದನಗಳಿಗೆ ನೇಪಿಯರ್‌ ಹುಲ್ಲಿನೊಂದಿಗೆ, ಬಾರ್ಲಿ, ಬಿಳಿ ಜೋಹರ್‌, ಸಾಸಿವೆ, ಮೆಂತೆ, ಹತ್ತಿ ಬೀಜದ ಕೇಕ್‌, ಬೆಲ್ಲ, ಜೊತೆಗೆ ಕ್ಯಾಲ್ಸಿಯಮ್‌ ಮತ್ತು ಖನಿಜಾಂಶಗಳಿಂದ ಕೂಡಿದ ಮಿಶ್ರಣವನ್ನು ಕೊಡಲಾಗುತ್ತಿದೆ. ನೇಪಿಯರ್‌ ಹುಲ್ಲನ್ನು 5 ಎಕ್ರೆಯಲ್ಲಿ ಫಾಮ್‌ರ್‍ನಲ್ಲಿಯೇ ಬೆಳೆಸಲಾಗಿದೆ. ಜೊತೆಗೆ 800 ತೆಂಗಿನ ಮರದ ಸುತ್ತಲೂ ನೀರಿಂಗಿಸಲು ಹೊಂಡಗಳಿವೆ. ಇದಲ್ಲದೆ ಬೃಹತ್ತಾದ 32ಅಡಿ ಆಳದ ಕೊಳವಿದ್ದು, ಫಾಮ್‌ರ್‍ನ ಸುತ್ತಲಿನಿಂದ ನೀರು ಹರಿದು ಬಂದು ಇದಕ್ಕೆ ಬೀಳುತ್ತದೆ. ಹಾಗಾಗಿ ನೀರು ಮರುಪೂರಣ ಯೋಜನೆಯೂ ಅಳವಡಿಸಲ್ಪಟ್ಟಿದೆ.

Karkala based farmer Ramakrishna gains profit by animal husbandry

ಗೋ ಬ್ಯಾಂಕ್‌ ಯೋಜನೆ

ಪಟ್ಟಣದಲ್ಲಿ ವಾಸಿಸುವವರಿಗೆ ದನದ ಸಾಕಾಣೆಯ ಸೌಲಭ್ಯ ಇರುವುದಿಲ್ಲ. ಅಂತಹವರಿಗಾಗಿಯೇ ಸಂಜೀವಿನಿ ಫಾಮ್‌ರ್‍ ಗೋಬ್ಯಾಂಕ್‌ ಯೋಜನೆ ರೂಪಿಸಿದೆ. ಇದರ ಪ್ರಕಾರ ಕನಿಷ್ಟ1 ಲಕ್ಷ ಬಂಡವಾಳ ಹೂಡಿ ತಮ್ಮದೇ ಆದ ದನದ ಮಾಲೀಕರಾಗುವ ಅವಕಾಶವಿದೆ. ವರ್ಷದಲ್ಲಿ 12% ಲಾಭಾಂಶದೊಂದಿಗೆ ಹೂಡಿಕೆದಾರರ ಕುಟುಂಬಸ್ಥರು 3 ದಿನಗಳಲ್ಲಿ ಸಂಜೀವಿನಿ ಫಾಮ್‌ರ್‍ನಲ್ಲಿ ದಿನ ಕಳೆಯಬಹುದು. ಯಾವುದೇ ಸಂದರ್ಭದಲ್ಲಿ ಬಡ್ಡಿ ಸಮೇತ ಹಣವನ್ನು ಹಿಂಪಡೆಯುವ ಅವಕಾಶವಿರುತ್ತದೆ.

ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ‘ಭೂಮಿಕಾ’

ಭವಿಷ್ಯದ ಹಲವು ಕನಸು

ದೇಶಿ ದನಗಳ ಗಂಜಳಕ್ಕೆ 42ಕ್ಕೂ ಮಿಕ್ಕಿದ ಖಾಯಿಲೆಗಳನ್ನು ನಿವಾರಿಸುವ ಶಕ್ತಿ ಇದೆ ಎನ್ನುತ್ತಾರೆ ಆಚಾರ್‌ ಅವರು. ಹಾಗಾಗಿ ದನಗಳ ಮೂತ್ರವನ್ನು ವಿವಿಧ ಔಷಧಗಳಾಗಿ ತಯಾರಿಸಿ, ಸಂಜೀವಿನಿ ಫಾಮ್‌ರ್‍ನಿಂದ ಮಾರುಕಟ್ಟೆಗೆ ತರುವ ಯೋಜನೆ ಇದೆ. ಸದ್ಯಕ್ಕೆ ರಾಜ್ಯದಲ್ಲೆಲ್ಲೂ ಇಲ್ಲದ ‘ಕೃಷಿ ಟೂರಿಸಂ’ ಅನ್ನು ಇಲ್ಲಿ ಅಭಿವೃದ್ಧಿ ಪಡಿಸುವ ಉದ್ದೇಶವಿದೆ.

ಇದೆಲ್ಲರ ಜೊತೆಗೆ ಮೂಲ ಬಂಡವಾಳ ಸಂಜೀವಿನಿ ಫಾಮ್‌ರ್‍ನಲ್ಲಿ ಹೂಡಿ ಕಾರ್ಡ್‌ ಪಡೆದು ಎಲಿಕ್ಸರ್‌ ಯಂತ್ರದ ಮೂಲಕ ಸ್ಟೈನ್‌ಲೆಸ್‌ ಸ್ಟೀಲ್‌ ಕ್ಯಾನ್‌ನಲ್ಲಿ ಹಾಲು ಪಡೆಯುವಂತೆ ಮಾಡುವ ಯೋಜನೆಯೂ ಇದೆ. ಹೆಚ್ಚಿನ ಮಾಹಿತಿಗೆ ಮೊಬೈಲ್‌ ರಾಮಕೃಷ್ಣ ಆಚಾರ್‌ ಅವರ ಮೊಬೈಲ್‌ ಸಂಖ್ಯೆ 9353756706ನ್ನು ಸಂಪರ್ಕಿಸಿ.

 

Follow Us:
Download App:
  • android
  • ios