ದೇಶ-ವಿದೇಶಗಳ ಪತ್ರಕರ್ತರ ಮೇಲೆ ತಾಲಿಬಾನ್‌ ಹಲ್ಲೆ : ಟೀವಿ ಪತ್ರಕರ್ತರೇ ಗುರಿ

By Kannadaprabha NewsFirst Published Aug 20, 2021, 7:42 AM IST
Highlights
  • ಅಷ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್‌ ಎಲ್ಲರಿಗೂ ಕ್ಷಮಾದಾನ ನೀಡುವುದಾಗಿ ಘೋಷಿಸಿತ್ತು
  • ಆದರೆ ಅಲ್ಲಿನ ನೈಜ ಪರಿಸ್ಥಿತಿ ಬೇರೆಯೇ ಇದೆ - ಭಯಾನಕ ಹಿಂಸಾ ಕೃತ್ಯ
  •  ತಾಲಿಬಾನಿಗಳು ದೇಶ-ವಿದೇಶಗಳ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.

ಕಾಬೂಲ್‌ (ಆ.20): ಅಷ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್‌ ಎಲ್ಲರಿಗೂ ಕ್ಷಮಾದಾನ ನೀಡುವುದಾಗಿ ಘೋಷಿಸಿತ್ತು. ಆದರೆ ಅಲ್ಲಿನ ನೈಜ ಪರಿಸ್ಥಿತಿ ಬೇರೆಯೇ ಇದೆ. ಕಾಬೂಲ್‌ ಮತ್ತು ಜಲಾಲಾಬಾದ್‌ ಪ್ರಾಂತಗಳಲ್ಲಿ ತಾಲಿಬಾನಿಗಳು ದೇಶ-ವಿದೇಶಗಳ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.

ಕಾಬೂಲ್‌ ನಾಗರಿಕರನ್ನು ಮಾತನಾಡಿಸುತ್ತಿದ್ದ ಟೀವಿ ಪತ್ರಕರ್ತೆಯನ್ನು ಕೆಲವು ತಾಲಿಬಾನ್‌ ಉಗ್ರಗಾಮಿಗಳು ಬಂದೂಕಿನಿಂದ ತಳ್ಳಿದ್ದಾರೆ. ಆಕೆ ಹಿಜಾಬ್‌ ಧರಿಸಿದ್ದರೂ ಪೂರ್ತಿ ಮುಖ ಮುಚ್ಚಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆ.

ತಾಲಿಬಾನಿಗಳಿಗೆ ಸಾಲು ಸಾಲು ಸವಾಲು : ಹಣವಿಲ್ಲ, ಅಹಾರ ದುಬಾರಿ

ಜಲಾಲಾಬಾದ್‌ ಪ್ರತಿಭಟನೆಯ ನಂತರ ತಾಲಿಬಾನ್‌ ಉಗ್ರಗಾಮಿಗಳು ಸ್ಥಳೀಯ ಪತ್ರಕರ್ತರ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಮುಖ್ಯವಾಗಿ ಟೀವಿ ಮತ್ತು ರೇಡಿಯೋಗಳಲ್ಲಿ ಮಾತನಾಡುವ ಪತ್ರಕರ್ತರು, ತಾಲಿಬಾನಿಗಳ ಗುರಿ. ಮಹಿಳಾ ಪತ್ರಕರ್ತರು, ನ್ಯಾಯಾಧೀಶರು, ಲೇಖಕರನ್ನು ಗುರಿಯಾಗಿಸಿಕೊಂಡು ತಾಲಿಬಾನಿಗಳು ದಾಳಿ ನಡೆಸುತ್ತಿದ್ದಾರೆ.

ಮಹಿಳಾ ಪತ್ರಕರ್ತೆಗೆ ತಾಲಿಬಾನ್‌ ಗೇಟ್‌ಪಾಸ್‌

ಕಾಬೂಲ್‌: ಅಷ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ ಮಹಿಳೆಯರಿಗೂ ಅವರ ಹಕ್ಕುಗಳು ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಕಾಬೂಲ್‌ ವಶಪಡಿಸಿಕೊಂಡ ಮಾರನೇ ದಿನದಿಂದಲೇ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳಲ್ಲಿ ಮಹಿಳೆಯರು ಕೆಲಸಕ್ಕೆ ಬರದಂತೆ ತಡೆಯುತ್ತಿದ್ದಾರೆ. ಖ್ಯಾತ ನಿರೂಪಕಿ, ಪತ್ರಕರ್ತೆ ಶಬನಂ ದಾವ್ರನ್‌ ಅವರನ್ನು ಕೆಲಸದಿಂದ ವಜಾ ಮಾಡಿ, ಉಗ್ರರು ಮನೆಗೆ ಕಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಬನಂ, ‘ತಾಲಿಬಾನ್‌ ಉಗ್ರಗಾಮಿಗಳು ಮಹಿಳೆಯರಿಗೆ ಓದಲು ಮತ್ತು ಕೆಲಸ ಮಾಡಲು ಅವಕಾಶ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಹಾಗಾಗಿ ಎಂದಿನಂತೆ ನಾನು ಕೆಲಸಕ್ಕೆ ಹೋದೆ. ನಾನು ಮಹಿಳೆ ಎನ್ನುವ ಕಾರಣಕ್ಕೆ ತಾಲಿಬಾನಿಗಳು ನನ್ನನ್ನು ಕೆಲಸಕ್ಕೆ ಹೋಗಲು ಬಿಡಲಿಲ್ಲ. ನನ್ನ ಪುರುಷ ಸಹೋದ್ಯೋಗಿಯನ್ನು ಕೆಲಸಕ್ಕೆ ಹೋಗಲು ಬಿಟ್ಟರು. ತಾಲಿಬಾನ್‌ ವಕ್ತಾರ ಮಾತನಾಡಿದ ನಂತರ ಈ ಬಾರಿ ತಾಲಿಬಾನ್‌ ಆಡಳಿತ ವಿಭಿನ್ನವಾಗಿರಬಹುದು ಎಂದುಕೊಂಡಿದ್ದೆವು ಆದರೆ ಹಾಗಾಗಲಿಲ್ಲ. ಮುಂದೆಯೂ ಸಹಾ ಮಹಿಳೆಯರು ಅಷ್ಘಾನಿಸ್ತಾನದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.

click me!