Russia Ukraine Crisis : ಯುದ್ಧಕ್ಕೆ ಸಜ್ಜಾದ ರಷ್ಯಾ, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ!

By Suvarna NewsFirst Published Feb 15, 2022, 1:27 PM IST
Highlights

ಹೆಚ್ಚಾದ ಭಿನ್ನಾಭಿಪ್ರಾಯ ಉಕ್ರೇನ್ ಮೇಲೆ ಯುದ್ಧಕ್ಕೆ ಸಜ್ಜಾದ ರಷ್ಯಾ
ಉಕ್ರೇನ್ ಮೇಲೆ ಆಕ್ರಮಣ ಮಾಡುವ ನಿಟ್ಟಿನಲ್ಲಿ ಪುಟಿನ್ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ ಎಂದ ಅಮೇರಿಕ
ಉಕ್ರೇನ್ ನಲ್ಲಿನ ಭಾರತೀಯ ವಿದ್ಯಾರ್ಥಿಗಳಿಗೆ ಕೇಂದ್ರದ ಮಾರ್ಗಸೂಚಿ

ಮಾಸ್ಕೋ (ಫೆ.15): ರಷ್ಯಾವು (Russia) ಬುಧವಾರದ ವೇಳೆಗೆ ಯುದ್ಧದ ಎಚ್ಚರಿಕೆ ನೀಡಿದೆ ಎಂದು ಉಕ್ರೇನ್ ಅಧ್ಯಕ್ಷ ಹೇಳಿರುವ ನಡುವೆಯೇ ಕಳೆದ 48 ಗಂಟೆಗಳಲ್ಲಿ ಉಕ್ರೇನ್ ನ ( Ukraine ) ಗಡಿಗಳಲ್ಲಿ ರಷ್ಯಾದ ಇನ್ನಷ್ಟು ಸೇನೆ ಹಾಗೂ ಯುದ್ಧವಿಮಾನಗಳ ಜಮಾವಣೆ ಆಗಿರುವುದು ಉಪಗ್ರಹ ಚಿತ್ರದಿಂದ ಬಯಲಾಗಿದೆ. ಈ ನಡುವೆ ಅಮೆರಿಕವು, ಉಕ್ರೇನ್ ಮೇಲೆ ಆಕ್ರಮಣ ಮಾಡುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಚ ವ್ಲಾಡಿಮಿರ್ ಪುಟಿನ್ (Vladimir Putin) ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ ಎಂದು ಹೇಳಿದೆ. ಯುದ್ಧದ ಕಾರ್ಮೋಡ ಆವರಿಸಿರುವ ನಡುವೆಯೇ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು (Indian Students in Ukraine ) ಹಾಗೂ ಪ್ರವಾಸಿಗರಿಗೆ ಭಾರತ ಪ್ರಯಾಣದ ಮಾರ್ಗಸೂಚಿ ನೀಡಿದ್ದು, ತಾತ್ಕಾಲಿಕವಾಗಿ ಈ ದೇಶಕ್ಕೆ ಪ್ರಯಾಣ ಮಾಡದೇ ಇರುವುದು ಒಳಿತು ಎಂದು ಹೇಳಿದೆ.

ಕಳೆದ 48 ಗಂಟೆಗಳಲ್ಲಿ ಚಿತ್ರೀಕರಿಸಲಾದ ಮ್ಯಾಕ್ಸರ್‌ನ ಹೆಚ್ಚಿನ ರೆಸಲ್ಯೂಶನ್ ಉಪಗ್ರಹ ಚಿತ್ರಗಳು (Maxar's high-resolution Satellite Images) ಬೆಲಾರಸ್, ಕ್ರೈಮಿಯಾ ಮತ್ತು ಪಶ್ಚಿಮ ರಷ್ಯಾದಲ್ಲಿ ರಷ್ಯಾದ ಸೈನ್ಯದ ಬೃಹತ್ ಜಮಾವಣೆಯನ್ನು ತೋರಿಸಿದೆ. ಹಲವಾರು ದೊಡ್ಡ ಸೇನಾಪಡೆಗಳ ಆಗಮನ, ಅಟ್ಯಾಕ್ ಹೆಲಿಕಾಪ್ಟರ್ ಗಳ ನಿಯೋಜನೆ, ಫಾರ್ವಡ್ ಸ್ಥಳಗಳಲ್ಲಿ ಫೈಟರ್ ಜೆಟ್ ಗಳ ನಿಯೋಜನೆ, ಗ್ರೌಂಡ್ ಅಟ್ಯಾಕ್ ಏರ್ ಕ್ರಾಫ್ಟ್ ಗಳು ಹೊಸ ಸ್ಯಾಟಲೈಟ್ ಇಮೇಜ್ ನಲ್ಲಿ ತೋರಿಸಿದೆ. ಬಹು ಗ್ರೌಂಡ್ ಫೋರ್ಸ್ ಘಟಕಗಳು ಅಸ್ತಿತ್ವದಲ್ಲಿರುವ ಗ್ಯಾರಿಸನ್‌ಗಳನ್ನು ತೊರೆದಿವೆ ಮತ್ತು ಇತರ ಯುದ್ಧ ಘಟಕಗಳೊಂದಿಗೆ ಬೆಂಗಾವಲು ರಚನೆಯಲ್ಲಿ ಕಾಣಬಹುದು. ರಷ್ಯಾ ತನ್ನ ಪಡೆಗಳನ್ನು ಹೆಚ್ಚಿಸಿರುವ ಪ್ರದೇಶಗಳು ಹೆಚ್ಚಾಗಿ ಉಕ್ರೇನ್‌ನ ಉತ್ತರ ಮತ್ತು ಈಶಾನ್ಯದಲ್ಲಿವೆ. ಇದು ಉಕ್ರೇನ್‌ನ ಆಗ್ನೇಯಕ್ಕೆ ಮತ್ತು ಕ್ರೈಮಿಯಾದಲ್ಲಿ ದೊಡ್ಡ ವಾಯುನೆಲೆಯನ್ನು ಸಹ ಒಳಗೊಂಡಿದೆ, ಇದನ್ನು 2014 ರಲ್ಲಿ ರಷ್ಯಾ ಸ್ವಾಧೀನಪಡಿಸಿಕೊಂಡಿತು.

ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ: ಭಾರತ ಇಂದು ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವುದನ್ನು ಪರಿಗಣಿಸುವಂತೆ ಸಲಹೆ ನೀಡಿದೆ. "ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಅನಿಶ್ಚಿತತೆಯ ದೃಷ್ಟಿಯಿಂದ, ಭಾರತೀಯ ಪ್ರಜೆಗಳು, ಉಳಿಯಲು ಅನಿವಾರ್ಯವಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ದೇಶವನ್ನು ತೊರೆಯುವುದನ್ನು ಪರಿಗಣಿಸಬಹುದು" ಎಂದು ಕೈವ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಉಕ್ರೇನ್ ನ ಮೇಲೆ ರಷ್ಯಾದ ಸಂಭವನೀಯ ದಾಳಿಯ ಲಕ್ಷಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಈ ಮಾರ್ಗಸೂಚಿ ನೀಡಲಾಗಿದೆ. ಭಾರತೀಯ ಪ್ರಜೆಗಳು ಉಕ್ರೇನ್‌ನ ಯಾವ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ನೀಡುವಂತೆ ರಾಯಭಾರ ಕಚೇರಿ ವಿನಂತಿಸಿದೆ. "ಭಾರತೀಯ ಪ್ರಜೆಗಳು ಉಕ್ರೇನ್‌ನ ಯಾವ ಪ್ರದೇಶದಲ್ಲಿ ಇರುತ್ತೀರಿ ಎನ್ನುವ ಬಗ್ಗೆ ರಾಯಭಾರ ಕಚೇರಿಗೆ ತಿಳಿಸಲು ವಿನಂತಿಸಲಾಗಿದೆ, ರಾಯಭಾರ ಕಚೇರಿಯು ಅಗತ್ಯವಿದ್ದಾಗ ಅವರನ್ನು ತಲುಪಲು ಸಹಾಯ ಮಾಡಲಿದೆ' ಎಂದು ಹೇಳಿಕೆ ತಿಳಿಸಿದೆ.

Ukraine Crisis: ಫೆಬ್ರವರಿ 16 ರಂದು ರಷ್ಯಾ ದಾಳಿ ಮಾಡಬಹುದು: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಉಕ್ರೇನ್ ನಲ್ಲಿರುವ ಬಹುತೇಕ ಭಾರತೀಯ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಇಂಜಿನಿಯರಿಂಗ್ ನ ವಿದ್ಯಾಭ್ಯಾಸದಲ್ಲಿದ್ದಾರೆ. ಮಾಹಿತಿಯ ಪ್ರಕಾರ ಉಕ್ರೇನ್ ರಾಜಧಾನಿ ಖೀವ್ ನಲ್ಲಿ ಅಂದಾಜು 20 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎನ್ನಲಾಗಿದೆ. ಉಕ್ರೇನ್ ನ ಪ್ರಮುಖ ವಿಶ್ವವಿದ್ಯಾಲಯವಾಗಿರುವ ತಾರಾಶ್ ಶೆವೆಂಕೋ ರಾಷ್ಟ್ರೀಯ ವಿವಿಯಲ್ಲಿ ಬಹುತೇಕರು ಮೆಡಿಸಿನ್ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ.

Russia Ukraine Crisis: ಉಕ್ರೇನ್‌ ಗಡಿಯಲ್ಲಿ 1.30 ಲಕ್ಷ ರಷ್ಯಾ ಸೈನಿಕರ ನಿಯೋಜನೆ
ಮಾತುಕತೆಗೆ ರಷ್ಯಾ ಈಗಲೂ ಸಿದ್ಧ: ಈ ನಡುವೆ ಉಕ್ರೇನ್ ವಿಚಾರದಲ್ಲಿ ಮಾತುಕತೆಗೆ ರಷ್ಯಾ ಈಗಲೂ ಸಿದ್ಧವಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸೋವಿಯತ್ ನ ಮಾಜಿ ದೇಶದ ಮೇಲೆ ಆಕ್ರಮಣ ಮಾಡುವ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈವರೆಗೂ ಅಂತಿಮ ನಿರ್ಧಾರ ಮಾಡಿಲ್ಲ ಎಂದು ನಾವು ನಂಬಿದ್ದೇವೆ ಎಂದು ಅಮೆರಿಕ ಹೇಳಿದೆ. ಬಿಕ್ಕಟ್ಟಿನ ಸಂಭವನೀಯತೆಯನ್ನು ಕಡಿಮೆ ಮಾಡುವ ಸಂಕೇತವಾಗಿ ಕೆಲವು ಮಿಲಿಟರಿ ಡ್ರಿಲ್‌ಗಳನ್ನು ಕೊನೆಗೊಳಿಸುವುದಾಗಿ ರಷ್ಯಾ ಹೇಳಿದರೆ, ವಾಷಿಂಗ್ಟನ್‌ನಲ್ಲಿ ಎಚ್ಚರಿಕೆಯ ಮಟ್ಟವು ಗರಿಷ್ಠ ಮಟ್ಟದಲ್ಲಿಯೇ ಇದೆ. ಉನ್ನತ ಅಧಿಕಾರಿಯೊಬ್ಬರು ಆಕ್ರಮಣದ ಬೆದರಿಕೆ "ಹಿಂದೆಗಿಂತಲೂ ಹೆಚ್ಚು ನೈಜವಾಗಿದೆ" ಎಂದು ಹೇಳಿದ್ದಾರೆ.

click me!