
ಮಾಸ್ಕೋ: ಇಡೀ ವಿಶ್ವದಲ್ಲಿ ಆತಂಕ ಹುಟ್ಟುಹಾಕಿರುವ ರಷ್ಯಾ- ಉಕ್ರೇನ್ ಯುದ್ಧ ನಿಧಾನವಾಗಿ ಸಂಧಾನದ ಹೆಜ್ಜೆ ಹಾಕಿದೆ. ಈ ಮೂಲಕ ಶೀಘ್ರವೇ ಬಿಕ್ಕಟ್ಟು ಇತ್ಯರ್ಥವಾಗುವ ಸುಳಿವು ಸಿಕ್ಕಿವೆ.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಉಕ್ರೇನ್ ಅಧ್ಯಕ್ಷ ಜೆಲೆನ್ಸಿ$್ಕ, ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಉದ್ದೇಶಿಸಿ ‘ಉಕ್ರೇನ್ನಾದ್ಯಂತ ಹೋರಾಟ ನಡೆಯುತ್ತಿದೆ. ಈಗಲಾದರೂ ಕುಳಿತು ಮಾತುಕತೆ ನಡೆಸೋಣ. ಉಕ್ರೇನ್ ಅನ್ನು ಅಲಿಪ್ತ ದೇಶ ಎಂದು ಪರಿಗಣಿಸಿದರೆ ಮಾತುಕತೆಗೆ ಸಿದ್ಧ’ ಎಂದು ಕರೆ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಸಚಿವ ಸರ್ಗೆರಿ ಲಾವ್ರೋವ್ ಅವರು ಸಹ, ‘ಉಕ್ರೇನ್ ಸೇನೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಪ್ರತಿರೋಧವನ್ನು ನಿಲ್ಲಿಸಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕರೆಗೆ ಧನಾತ್ಮಕವಾಗಿ ಸ್ಪಂದಿಸಿದ ಯಾವುದೇ ಕ್ಷಣದಲ್ಲಿ ಮಾತುಕತೆಗೆ ರಷ್ಯಾ ಸಿದ್ಧ. ಯಾರೂ ಉಕ್ರೇನಿಯನ್ನರ ಮೇಲೆ ಆಕ್ರಮಣ ಮಾಡಲು ಮತ್ತು ದಬ್ಬಾಳಿಕೆ ನಡೆಸಲು ಯೋಜಿಸಿಲ್ಲ. ಸೈನಿಕರು ಅವರವರ ಕುಟುಂಬಗಳಿಗೆ ಹಿಂತಿರುಗಲಿ ಮತ್ತು ಉಕ್ರೇನ್ ಜನರಿಗೆ ಅವರ ಭವಿಷ್ಯವನ್ನು ನಿರ್ಧರಿಸಲು ಅವಕಾಶವನ್ನು ನೀಡೋಣ’ ಎನ್ನುವ ಮೂಲಕ ಸಂಧಾನಕ್ಕೆ ಸಿದ್ಧ ಎಂಬ ಸುಳಿವು ನೀಡಿದ್ದಾರೆ.
ಇನ್ನೊಂದೆಡೆ ಉಕ್ರೇನ್ನೊಂದಿಗೆ ಉನ್ನತ ಮಟ್ಟದ ಸಂಧಾನ ಮಾತುಕತೆಗೆ ಸಿದ್ಧ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆಗಿನ ಮಾತುಕತೆ ವೇಳೆ ಸ್ಪಷ್ಟಪಡಿಸುವ ಮೂಲಕ ಶಾಂತಿಯ ಮಾತುಗಳನ್ನು ಆಡಿದ್ದಾರೆ.
ರಷ್ಯಾ ವಿರುದ್ಧ ಪೂರ್ಣ ಆರ್ಥಿಕ ದಿಗ್ಭಂದನಕ್ಕೆ ಹೆಚ್ಚಿದ ಕೂಗು
ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತಿದ್ದಂತೆ ರಷ್ಯಾದ ವಿರುದ್ಧ ಪೂರ್ಣ ಪ್ರಮಾಣದ ಆರ್ಥಿಕ ನಿರ್ಬಂಧ ವಿಧಿಸಬೇಕು ಎಂಬ ಕೂಗು ಪ್ರಪಂಚಾದ್ಯಂತ ಎದ್ದಿದೆ. ಅದರ ಬೆನ್ನಲ್ಲೇ ಅಮೆರಿಕ, ಬ್ರಿಟನ್, ಆಸ್ಪ್ರೇಲಿಯಾ, ಜಪಾನ್, ಐರೋಪ್ಯ ಒಕ್ಕೂಟಗಳು ತಮ್ಮ ನಿರ್ಬಂಧಗಳನ್ನು ಮತ್ತಷ್ಟುಬಿಗಿಗೊಳಿಸಿವೆ. ಜೊತೆಗೆ ತೈವಾನ್, ದಕ್ಷಿಣ ಕೊರಿಯಾ ಸೇರಿದಂತೆ ಕೆಲವು ಆಫ್ರಿಕಾದ ರಾಷ್ಟ್ರಗಳು ನಿರ್ಬಂಧ ಘೋಷಿಸಿವೆ.
ಪಾಶ್ಚಿಮಾತ್ಯ ಆರ್ಥಿಕತೆಯಲ್ಲಿ ಭಾಗವಹಿಸುವುದನ್ನು ತಡೆಯುವುದಕ್ಕಾಗಿ ರಷ್ಯಾವನ್ನು ಎಲ್ಲಾ ಆರ್ಥಿಕ ವೇದಿಕೆಗಳಿಂದ ಕೈಬಿಡಲಾಗುವುದು. ರಷ್ಯಾದ ಪ್ರಮುಖ ಬ್ಯಾಂಕುಗಳ ವ್ಯವಹಾರವನ್ನು ತಡೆಹಿಡಿಯಲಾಗುವುದು ಎಂದು ಅಮೆರಿಕ ಹೇಳಿದೆ. ರಷ್ಯಾದ ಯುದ್ಧನೀತಿಯನ್ನು ತಡೆಯಲು ಯುರೋಪ್ನಲ್ಲಿ ರಷ್ಯಾದ ವ್ಯಾಪಾರ ವಹಿವಾಟನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ರಷ್ಯಾ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನ್ಯಾಟೋ ಪಡೆಯ ಸದಸ್ಯ ರಾಷ್ಟ್ರಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್ ಹೇಳಿವೆ.
ರಷ್ಯಾ ಮತ್ತು ಅದರ ಬೆಂಬಲಿಗರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅವರು ನಡೆಸುತ್ತಿರುವ ಆರ್ಥಿಕ ವ್ಯವಹಾರಗಳನ್ನು ನಿರ್ಬಂಧಿಸಲಾಗುವುದು ಮತ್ತು ಅವರ ವೀಸಾಗಳನ್ನು ತಡೆಹಿಡಿಯಲಾಗುವುದು ಎಂದು ಜಪಾನ್ ಮತ್ತು ಆಸ್ಪ್ರೇಲಿಯಾಗಳು ಹೇಳಿವೆ. ಜಪಾನ್ನಂತೆ ತಾನೂ ನಿರ್ಬಂಧ ವಿಧಿಸುವುದಾಗಿ ಆದರೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ದಕ್ಷಿಣ ಕೊರಿಯಾ ಹೇಳಿದೆ. ಇದರೊಂದಿಗೆ ತೈವಾನ್ ಮತ್ತು ಕೆಲವು ಆಸ್ಪ್ರೇಲಿಯಾ ದೇಶಗಳು ಸಹ ರಷ್ಯಾ ಮೇಲೆ ನಿರ್ಬಂಧ ಘೋಷಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ