ಗಾಜಾ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: ಓರ್ವ ಉಗ್ರ ಕಮಾಂಡರ್‌ ಸೇರಿ 10 ಮಂದಿ ಬಲಿ

Published : Aug 06, 2022, 04:03 PM ISTUpdated : Aug 06, 2022, 04:05 PM IST
ಗಾಜಾ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: ಓರ್ವ ಉಗ್ರ ಕಮಾಂಡರ್‌ ಸೇರಿ 10 ಮಂದಿ ಬಲಿ

ಸಾರಾಂಶ

ಕಡು ವೈರಿಗಳಾದ ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ ನಡುವೆ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ. ಇಸ್ರೇಲ್‌ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ 10 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಕಡು ವೈರಿಗಳಾದ ಇಸ್ರೇಲ್ - ಪ್ಯಾಲೆಸ್ತೀನ್‌ ನಡುವೆ ಮತ್ತೆ ಘರ್ಷಣೆ ಆರಂಭವಾಗಿದ್ದು, ಗಾಜಾದ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಪ್ಯಾಲೆಸ್ತೀನ್‌ನ 10 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಇದಕ್ಕೆ ಉತ್ತರವಾಗಿ ಪ್ಯಾಲೆಸ್ತೀನ್‌ ಸಹ ಇಸ್ರೇಲ್‌ ಮೇಲೆ ಹಲವು ರಾಕೆಟ್‌ಗಳಿಂದ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ನಿನ್ನೆಯಿಂದಲೂ ಈ ಯುದ್ಧದಂತಹ ಸನ್ನಿವೇಶ ನಡೆಯುತ್ತಿದ್ದು, ಪ್ಯಾಲೆಸ್ತೀನ್‌ ಉಗ್ರರ ಮೇಲೆ ವಿಶೇಷ ಕಾರ್ಯಾಚರಣೆ ಆರಂಭಿಸಿರುವುದಾಗಿ ಶುಕ್ರವಾರ ಮಾಹಿತಿ ನೀಡಿತ್ತು. ಇಸ್ರೇಲ್ - ಪ್ಯಾಲೆಸ್ತೀನ್‌ ಗಡಿ ವಿವಾದ ಹಳೆಯದಾಗಿದ್ದರೂ, ಕಳೆದೊಂದು ವರ್ಷದಿಂದ ಗಡಿಯಲ್ಲಿ ವಾತಾವರಣ ತಣ್ಣಗಿತ್ತು. 

ಪ್ಯಾಲೆಸ್ತೀನಿಯಾದ ಜಿಹಾದ್‌ ಉಗ್ರರ ಗುಂಪಿನ ಮೇಲೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ಗಾಜಾ ನಗರದ ಮೇಲೆ ನಡೆದ ದಾಳಿಯಲ್ಲಿ ಎತ್ತರದ ಕಟ್ಟಡವೊಂದರಲ್ಲಿ ಇದ್ದ ಉಗ್ರರ ಗುಂಪಿನ ಹಿರಿಯ ಕಮಾಂಡರ್‌ ಒಬ್ಬರು ಬಲಿಯಾಗಿರುವುದಾಗಿ ಇಸ್ರೇಲ್‌ ಹೇಳಿಕೊಂಡಿದೆ. ಇನ್ನು, ಪ್ಯಾಎಸ್ತೀನಿಯಾದ ಆರೋಗ್ಯ ಸಚಿವರ ಪ್ರಕಾರ ಇಸ್ರೇಲಿ ದಾಳಿಗಳಲ್ಲಿ 9 ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ. ಈ ಪೈಕಿ ನಾಲ್ವರು ಇಸ್ಲಾಮ್‌ ಜಿಹಾದಿ ಉಗ್ರರು ಹಾಗೂ ಬಾಲಕನೊಬ್ಬ ಸೇರಿದ್ದಾನೆ. ಅಲ್ಲದೆ, 79 ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ವೆಸ್ಟ್‌ ಬ್ಯಾಂಕ್‌ನಲ್ಲಿ 19 ಇಸ್ಲಾಮಿಕ್‌ ಜಿಹಾದಿ ಉಗ್ರರನ್ನು ಬಂಧಿಸಿರುವುದಾಗಿಯೂ ಇಸ್ರೇಲಿ ಮಿಲಿಟರಿ ಹೇಳಿದ್ದಾರೆ. 

ಪ್ಯಾಲೆಸ್ತೇನಿಯನ್ನರ ಕಲ್ಲುತೂರಾಟ, ಜೆರುಸಲೇಂನ ಮಸೀದಿಗೆ ನುಗ್ಗಿದ ಇಸ್ರೇಲ್ ಪೊಲೀಸ್!

ಇನ್ನೊಂದೆಡೆ, ಇಸ್ರೇಲ್‌ ದಾಳಿಗೆ ಪ್ರತಿಕ್ರಿಯೆಯಾಗಿ ಸುಮಾರು 160 ರಾಕೆಟ್‌ಗಳನ್ನು ಇಸ್ರೇಲ್‌ಗೆ ಉಡಾಯಿಸಿರುವುದಾಗಿ ಪ್ಯಾಲೆಸ್ತೀನ್‌ ಮಿಲಿಟರಿ ಹೇಳಿದೆ. ಇಸ್ರೇಲ್‌ನ ಟೆಲ್‌ ಅವೀವ್‌ ಭಾಗಕ್ಕೂ ರಾಕೆಟ್‌ ದಾಳಿ ಮಾಡಿರುವುದಾಗಿಯೂ ಹೇಳಿದ್ದಾರೆ. ಆದರೆ, ಈ ಪೈಕಿ ಬಹುತೇಕ ಮಿಸೈಲ್‌ಗಳನ್ನು ತಡೆಯಲಾಗಿದ್ದರೆ, ಕೆಲವು ಮಿಸೈಲ್‌ಗಳ ದಾಳಿಗೆ ಕೆಲವು ಇಸ್ರೇಲಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಹಿಂಸಾಚಾರ ತಡೆಗೆ ಯುಎನ್‌ ಪ್ರಯತ್ನ
ಇನ್ನು, ಈ ಹಿಂಸೆ ತಡೆಯಲು ಈಜಿಪ್ಟ್‌, ಯುನೈಟೆಡ್‌ ನೇಷನ್ಸ್‌ ಹಾಗೂ ಕತಾರ್‌ ಪ್ರಯತ್ನ ಮಾಡುತ್ತಿದೆ. ಆದರೆ, ಈವರೆಗೆ ಯಾವುದೇ ಫಲ ಕೊಟ್ಟಿಲ್ಲ ಎಂದು ಪ್ಯಾಲೆಸ್ತೀನ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ, ಇಸ್ರೇಲ್‌ ದಾಳಿಗಳನ್ನು ಪ್ಯಾಲೆಸ್ತೀನ್‌ ಸಚಿವರೊಬ್ಬರು ಖಂಡಿಸಿದ್ದಾರೆ. ನಮ್ಮ ಜನರಿಗೆ ರಕ್ಷಣೆ ನೀಡಲು ಹಾಗೂ ಈ ವಿವಾದದ ಮಧ್ಯಸ್ಥಿಕೆ ವಹಿಸಲು ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಪ್ಯಾಲೆಸ್ತೀನ್ ನಾಗರಿಕ ವ್ಯವಹಾರಗಳ ಸಚಿವ ಹುಸೇನ್‌ ಅಲ್‌ ಶೇಖ್‌ ಟ್ವೀಟ್‌ ಮಾಡಿದ್ದಾರೆ. 

ಕರ್ನಾಟಕದ ನವೋದ್ಯಮ ಬೆಳೆವಣಿಗೆಗೆ ಮೆಚ್ಚುಗೆ: ಐಟಿ-ಬಿಟಿ ಸಚಿವರನ್ನು ಭೇಟಿಯಾದ ಇಸ್ರೇಲ್ ನಿಯೋಗ
 
ಗಾಜಾವನ್ನು ಹಮಾಸ್‌ ಎಂಬ ಇಸ್ಲಾಮ್‌ ಉಗ್ರರ ಗುಂಪು ಈವರೆಗೆ ದಾಳಿಯಲ್ಲಿ ಭಾಗಿಯಾಗಿಲ್ಲದಿದ್ದರೂ, ಒಂದು ವೇಳೆ ಅವರು ಈ ದಾಳಿಯಲ್ಲಿ ಭಾಗಿಯಾದರೆ ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ ಮತ್ತಷ್ಟು ಆಕ್ರಮಣ ನಡೆಸಲಿದೆ ಎಂದು ಹೇಳಬಹುದು. ಇಸ್ರೇಲ್‌ ವಶದಲ್ಲಿರುವ ವೆಸ್ಟ್‌ ಬ್ಯಾಂಕ್‌ನಲ್ಲಿ ಇಸ್ಲಾಮಿಕ್‌ ಜಿಹಾದ್‌ ಕಮಾಂಡರ್‌ ಒಬ್ಬರನ್ನು ಬಂಧಿಸಿದ ಬಳಿಕ ಇಸ್ರೇಲ್ - ಪ್ಯಾಲೆಸ್ತೀನ್‌ ನಡುವೆ ಹಿಂಸಾಚಾರ ಹೆಚ್ಚಾಗುತ್ತಿದೆ. ಇಸ್ಲಾಮಿಕ್‌ ಜಿಹಾದ್‌ ದಾಳಿಯನ್ನು ನಮ್ಮ ವೈಮಾನಿಕ ದಾಳಿಗಳು ತಡೆದಿವೆ ಎಂದು ಇಸ್ರೇಲ್‌ ಪ್ರಧಾನ ಮಂತ್ರಿ ಯೈರ್‌ ಲ್ಯಾಫಿಡ್‌ ಹೇಳಿದ್ದಾರೆ. ಮೇ 2021 ರಲ್ಲಿ 11 ದಿನಗಳ ಕಾಲ ಇಸ್ರೇಲ್ - ಪ್ಯಾಲೆಸ್ತೀನ್‌ ನಡುವೆ ನಡೆದ ಯುದ್ಧದಲ್ಲಿ ಗಾಜಾದಲ್ಲಿ ಕನಿಷ್ಠ 250 ಜನ ಹತ್ಯೆಯಾಗಿದ್ದರು ಹಾಗೂ ಇಸ್ರೇಲ್‌ನ 13 ಮಂದಿ ಬಲಿಯಾಗಿದ್ದರು ಎಂದು ತಿಳಿದುಬಂದಿತ್ತು. ಆ ಯುದ್ಧದ ಬಳಿಕ ಈವರೆಗೆ ಎರಡೂ ಬದ್ಧವೈರಿ ದೇಶಗಳ ನಡುವೆ ಹಿಂಸಾಚಾರ ನಡೆದಿರಲಿಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande mataram ಅಸಹನೆ ವಿವಾದದ ನಡುವೆ ಬುರ್ಜ್ ಖಲೀಫಾದ ಮೇಲೆ ತ್ರಿವರ್ಣ ಧ್ವಜ! ಮಿತ್ರ ಭಾರತಕ್ಕೆ UAE ವಿಶೇಷ ಶುಭಾಶಯ | ವಿಡಿಯೋ
ಮಲಗಿದ್ದ ಹಿಮ ಕರಡಿಯನ್ನು ಹಾರ್ನ್ ಹಾಕಿ ಎಬ್ಬಿಸಿದ, ವನ್ಯಜೀವಿ ಶಾಪಕ್ಕೆ ಸಿಬ್ಬಂದಿಗೆ ನಿದ್ದೆ ಇಲ್ಲದಾಯಿತು