
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Pakistan Prime Minister Imran Khan) ವಿರುದ್ಧದ ಅವಿಶ್ವಾಸ ನಿರ್ಣಯ ಗೊತ್ತುವಳಿ (No-confidence motion against Imran Khan) ಸಂವಿಧಾನ ವಿರೋಧಿ ಎಂಬ ಕಾರಣ ನೀಡಿ ಈ ಹಿಂದೆ ಪಾಕಿಸ್ತಾನ ಉಪ ಸಭಾಪತಿ ಖಾಸಿಂ ಸೂರಿ ನಿರ್ಣಯ ವಜಾಗೊಳಿಸಿದ್ದರು. ಆದರೆ ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ (Pakistan Supreme Court), ವಿಶ್ವಾಸ ಗೊತ್ತುವಳಿ ನಿರ್ಣಯ ರದ್ದುಮಾಡಿರುವ ಉಪ ಸಭಾಪತಿ ನಿರ್ಧಾರವನ್ನು ವಜಾಗೊಳಿಸಿತ್ತು. ಜತೆಗೆ ಶಿನಿವಾರ ಬೆಳಗ್ಗೆ 10 ಗಂಟೆಗೆ ಸದನವನ್ನು ಮತ್ತೆ ಕರೆದು ವಿಶ್ವಾಸ ಮತ ಯಾಚಿಸುವಂತೆ ಇಮ್ರಾನ್ ಖಾನ್ರಿಗೆ ನಿರ್ದೇಶನ ನೀಡಿತ್ತು. ಈಗ ಪಾಕಿಸ್ತಾನ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯಲೇಬೇಕು ಎಂಬ ಇರಾದೆ ಹೊಂದಿರುವ ಇಮ್ರಾನ್ ಖಾನ್ ಕಟ್ಟಕಡೆಯ ಬಾಲ್ನವರೆಗೂ ಹೋರಾಟ ಮುಂದುವರೆಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.
"ನಾಳೆ ಸಚಿವ ಸಂಪುಟ ಸಭೆ ಕರೆದಿದ್ದೇನೆ. ಜತೆಗೆ ಶಾಸಕಾಂಕ ಪಕ್ಷದ ಸಭೆಯನ್ನೂ ಕರೆಯಲಾಗಿದೆ. ಸಂಜೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದೇನೆ. ಕಡೆಯ ಬಾಲ್ವರೆಗೂ ನಾನು ಹೋರಾಡಿದ್ದೇನೆ, ಮುಂದೆಯೂ ಹೋರಾಡುತ್ತೇನೆ ಎಂಬುದನ್ನು ಜನತೆಗೆ ತಿಳಿಸಲು ಇಚ್ಛಿಸುತ್ತೇನೆ," ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವಾಸಮತಯಾಚನೆಯಲ್ಲಿ ಬಹುಮತ ಸಾಬೀತುಪಡಿಸಲಾಗದಿದ್ದರೆ, ಪಾಕಿಸ್ತಾನ ಇತಿಹಾಸದಲ್ಲಿ ಉಚ್ಛಾಟನೆಯಾದ ಮೊದಲ ಪ್ರಧಾನಿ ಎಂಬ ಅಪಖ್ಯಾತಿಗೆ ಇಮ್ರಾನ್ ಖಾನ್ ಒಳಗಾಗಲಿದ್ದಾರೆ. ಈ ಹಿಂದೆ ಎರಡು ಬಾರಿ ಅವಿಶ್ವಾಸ ನಿರ್ಣಯ ಪ್ರಧಾನಿಗಳ ಮೇಲೆ ನಡೆದಿತ್ತಾದರೂ, ಮತಯಾಚನೆಗೆ ಮುನ್ನವೇ ಪ್ರಧಾನಿಗಳು ರಾಜೀನಾಮೆ ನೀಡಿದ್ದರು. ಆದರೆ ಇಮ್ರಾನ್ ಖಾನ್ ಮಾತ್ರ ಶತಾಯಗತಾಯ ಅಧಿಕಾರದಲ್ಲಿ ಉಳಿಯಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ.
ಪಾಕಿಸ್ತಾನ ಸಂಸತ್ತನ್ನು ವಜಾಗೊಳಿಸುವಂತೆ ಇಮ್ರಾನ್ ಖಾನ್ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದರು. ಅದರಂತೆ ರಾಷ್ಟ್ರಪತಿ ಸಂಸತ್ತನ್ನು ವಿಸರ್ಜಿಸುವ ನಿರ್ಧಾರ ಪ್ರಕಟಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ನಿರ್ಣಯದಿಂದ ಎಲ್ಲವೂ ಬದಲಾಗಿದೆ. ಮೂರು ತಿಂಗಳೊಳಗೆ ಚುನಾವಣೆ ನಡೆಯಲಿದೆ ಎಂದು ಭಾವಿಸಲಾಗಿತ್ತು. ಚುನಾವಣಾ ಆಯೋಗ ಕೂಡ ಅಕ್ಟೋಬರ್ ವರೆಗೆ ಮರುಚುನಾವಣೆ ಸಾಧ್ಯವಿಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸಂವಿಧಾನದ 58ನೇ ವಿಧಿಯ ಅಡಿ, ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿರುವಾಗ ಸಂಸತ್ತನ್ನು ವಿಸರ್ಜಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅದರಂತೆ ಶನಿವಾರ ಸದನದಲ್ಲಿ ಇಮ್ರಾನ್ ಖಾನ್ ಬಹುಮತ ಸಾಭೀತುಪಡಿಸಬೇಕಿದೆ. ಇಲ್ಲವಾದಲ್ಲಿ ಪ್ರಧಾನಿ ಹುದ್ದೆಯಿಂದ ಅವರು ಉಚ್ಚಾಟನೆಯಾಗಲಿದ್ದಾರೆ.
ನವಾಜ್ ಶರೀಫ್ ತಮ್ಮ ಮುಂದಿನ ಪ್ರಧಾನಿ?
ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ತಮ್ಮ ಶಹ್ಬಾಜ್ ಶರೀಫ್ ಇಮ್ರಾನ್ ಖಾನ್ ವಿಶ್ವಾಸಮತ ಸಾಬೀತಪಡಿಸದಿದ್ದರೆ, ಪ್ರಧಾನಿಯಾಗುವ ಸಾಧ್ಯತೆಯಿದೆ. ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಲ್ಲಿ ಶಹ್ಬಾಜ್ ಶರೀಫ್ ಅವರ ಪಾತ್ರ ದೊಡ್ಡದಿದೆ. ಆದರೆ ಇಮ್ರಾನ್ ಖಾನ್ ಮಾತ್ರ ತಮ್ಮ ವಿರುದ್ಧ ವಿದೇಶಿ ಶಕ್ತಿಗಳು ಪಿತೂರಿ ಮಾಡಿವೆ. ಅವಿಶ್ವಾಸ ನಿರ್ಣಯದ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕೈವಾಡವಿದೆ. ಈ ಕಾರಣಕ್ಕಾಗಿ ಈ ಗೊತ್ತುವಳಿ ಸಂವಿಧಾನ ಬಾಹಿರ ಮತ್ತು ದೇಶದ್ರೋಹವಾಗಿದೆ ಎಂದು ಹೇಳಿಕೆಗಳನ್ನು ನೀಡಿದ್ದರು. ಆದರೆ ಇದಾವುದೂ ಸತ್ಯಕ್ಕೆ ಹತ್ತಿರವಾಗಿಲ್ಲ. ಬಾಹ್ಯ ಶಕ್ತಿಯನ್ನು ದೂರಿ ಅಧಿಕಾರದಲ್ಲಿ ಮುಂದುವರೆಯುವ ಯೋಚನೆ ಇಮ್ರಾನ್ ಖಾನ್ರದ್ದಾಗಿತ್ತು. ನಾಳೆ ಮಾಡು ಇಲ್ಲವೇ ಮಡಿ ರಾಜಕೀಯ ಪಂದ್ಯದಲ್ಲಿ ಇಮ್ರಾನ್ ಖಾನ್ ಹೇಗೆ ಬ್ಯಾಟ್ ಬೀಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ